ವಿಜೃಂಭಣೆಯಿಂದ ತುಮಕೂರು ದಸರಾ ಆಚರಣೆ: ಡಾ: ಪರಮೇಶ್ವರ

KannadaprabhaNewsNetwork |  
Published : Sep 08, 2026, 01:30 AM IST
5555 | Kannada Prabha

ಸಾರಾಂಶ

ನಾಡಹಬ್ಬ ತುಮಕೂರು ದಸರಾ ಉತ್ಸವವನ್ನು ಈ ಬಾರಿಯೂ ವಿಜೃಂಭಣೆಯಿಂದ ಆಚರಿಸುವ ಮೂಲಕ ತುಮಕೂರಿನ ಕಲೆ, ಸಂಸ್ಕೃತಿ ಹಾಗೂ ಪ್ರತಿಭೆಯಿಂದ ರಾಜ್ಯದ ಗಮನ ಸೆಳೆಯುವಂತೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ನಾಡಹಬ್ಬ ತುಮಕೂರು ದಸರಾ ಉತ್ಸವವನ್ನು ಈ ಬಾರಿಯೂ ವಿಜೃಂಭಣೆಯಿಂದ ಆಚರಿಸುವ ಮೂಲಕ ತುಮಕೂರಿನ ಕಲೆ, ಸಂಸ್ಕೃತಿ ಹಾಗೂ ಪ್ರತಿಭೆಯಿಂದ ರಾಜ್ಯದ ಗಮನ ಸೆಳೆಯುವಂತೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ದಸರಾ ಉತ್ಸವದ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಉತ್ಸವ ವಿಶೇಷ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು. ಹೊಸತನವನ್ನು ಪರಿಚಯಿಸುವ ಮೂಲಕ ತುಮಕೂರನ್ನು ಎಲ್ಲರೂ ಗುರುತಿಸುವಂತಹ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.

ದಸರಾ ಉತ್ಸವವು ಕೇವಲ ಮನರಂಜನಾ ಕಾರ್ಯಕ್ರಮವಾಗದೆ ಮಕ್ಕಳಿಗೆ, ಯುವಕರಿಗೆ ಹಾಗೂ ಸ್ಥಳೀಯ ಕಲಾವಿದರಿಗೆ ಉತ್ತಮ ವೇದಿಕೆಯಾಗಬೇಕು. ಯುವ ಕಲಾವಿದರು, ನೃತ್ಯ ತಂಡಗಳು ಸೇರಿ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಮೂಲಕ ಅವರ ಪ್ರತಿಭೆ ಅನಾವರಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.

ಅಮಾನಿಕೆರೆ ಪ್ರಮುಖ ಆಕರ್ಷಣೆಯಾಗಲಿ:

ತುಮಕೂರು ನಗರದ ಅಮಾನಿಕೆರೆಯನ್ನು ದಸರಾ ಸಂದರ್ಭದಲ್ಲಿ ವಿದ್ಯುತ್ ದೀಪಗಳಿಂದ ಆಕರ್ಷಕವಾಗಿ ಅಲಂಕರಿಸಬೇಕು. ದಸರಾ ಉತ್ಸವದ ಪ್ರಮುಖ ಆಕರ್ಷಣೆ ಕೇಂದ್ರವಾಗಿ ಮಾಡುವ ಮೂಲಕ ಸಾರ್ವಜನಿಕರನ್ನು ಸೆಳೆಯಬೇಕು ಎಂದು ಸೂಚಿಸಿದರು.

ನಗರದ ಪ್ರಮುಖ ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳ ಕಡ್ಡಾಯವಾಗಿ ವಿದ್ಯುತ್ ದೀಪಾಲಂಕಾರ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು, ತುಮಕೂರು ದಸರಾ ಉತ್ಸವವು “ಊರ ಹಬ್ಬ”ದ ರೀತಿಯಲ್ಲಿ ಎಲ್ಲರನ್ನೂ ಒಳಗೊಂಡು ಉತ್ತಮವಾಗಿ ನಡೆಯಬೇಕು. ಉತ್ಸವದ ಮೂಲಕ ತುಮಕೂರಿನ ಕಲೆ, ಸಂಸ್ಕೃತಿ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ಉತ್ತೇಜನ ದೊರೆಯುವುದರ ಜೊತೆಗೆ ತುಮಕೂರಿನ ಹೆಸರು ಮತ್ತಷ್ಟು ಪ್ರಸಿದ್ಧಿಯಾಗುವಂತಾಗಬೇಕು ಎಂದು ಹೇಳಿದರು.

ತುಮಕೂರು ದಸರಾ ಉತ್ಸವವನ್ನು ಅಕ್ಟೋಬರ್ 11 ರಿಂದ 21ರವರೆಗೆ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದ್ದು, ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸೇರಿದಂತೆ ನಹೀದಾ ಜಮ್ ಜಮ್, ಮುರಳೀಧರ ಹಾಲಪ್ಪ, ಲಕ್ಷ್ಮಣ್ ದಾಸ್ ಹಾಗೂ ವಿವಿಧ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಕ್ತದಾನದಿಂದ ಸಂಕಷ್ಟದಲ್ಲಿರುವ ರೋಗಿಯ ಜೀವ ಉಳಿಸಲು ಸಾಧ್ಯ: ಬಸವಪ್ರಭು
ಆನೆಕೊಂಡದ ಶ್ರೀ ಮರಡಿ ಬಸವೇಶ್ವರ ಕಾರ್ಣಿಕೋತ್ಸವ