ತುಂಗಭದ್ರೆ ಡ್ಯಾಂ-ಇಂದು ಮಂಡಳಿ ಅಧ್ಯಕ್ಷ ಭೇಟಿ

KannadaprabhaNewsNetwork | Published : Nov 4, 2024 12:18 AM

ಸಾರಾಂಶ

ಜಲಾಶಯಕ್ಕೆ ನ. 4ರಂದು ಹೈದರಾಬಾದ್‌ನಲ್ಲಿರುವ ತುಂಗಭದ್ರಾ ಮಂಡಳಿ ಅಧ್ಯಕ್ಷ ಎಸ್.ಎನ್.ಪಾಂಡೆ ಆಗಮಿಸಿ ಪರಿಶೀಲನೆ ನಡೆಸಲಿದೆ.

ಹೊಸಪೇಟೆ: ತುಂಗಭದ್ರಾ ಜಲಾಶಯದ ಎಲ್ಲ 33 ಕ್ರಸ್ಟ್‌ ಗೇಟ್‌ಗಳನ್ನು ಬದಲಿಸಿ ಹೊಸ ಗೇಟ್ ಅಳವಡಿಸುವ ಕುರಿತು ತಾಂತ್ರಿಕ ತನಿಖಾ ಸಮಿತಿ ನೀಡಿದ್ದ ವರದಿಯ ಸಾಧಕ-ಬಾಧಕ ಬಗ್ಗೆ ತುಂಗಭದ್ರಾ ಮಂಡಳಿ ಮಹತ್ವದ ಸಭೆಯನ್ನು ಇದೇ ತಿಂಗಳಲ್ಲಿ ತುಂಗಭದ್ರಾ ಜಲಾಶಯದಲ್ಲಿ ನಡೆಸಲಿದೆ.

ಜಲಾಶಯಕ್ಕೆ ನ. 4ರಂದು ಹೈದರಾಬಾದ್‌ನಲ್ಲಿರುವ ತುಂಗಭದ್ರಾ ಮಂಡಳಿ ಅಧ್ಯಕ್ಷ ಎಸ್.ಎನ್.ಪಾಂಡೆ ಆಗಮಿಸಿ ಪರಿಶೀಲನೆ ನಡೆಸಲಿದ್ದು, ಮಂಡಳಿ ಸಭೆ ದಿನಾಂಕ ನಿರ್ಧರಿಸಲಿದ್ದಾರೆ. ತಾಂತ್ರಿಕ ಸಮಿತಿ ಈಗಾಗಲೇ ತನ್ನ ವರದಿಯಲ್ಲಿ ಎಲ್ಲ 33 ಗೇಟ್‌ಗಳನ್ನು ಬದಲಿಸಲು ಸೂಚಿಸಿದೆ. ಹಾಗಾಗಿ ಈ ಸಭೆ ಮಹತ್ವ ಪಡೆದುಕೊಂಡಿದೆ.

ಜಲಾಶಯಕ್ಕೆ ಅಳವಡಿಸಿರುವ ಕ್ರಸ್ಟ್‌ ಗೇಟ್‌ಗಳ ಆಯುಷ್ಯ ಐದು ವರ್ಷ ಇದೆ. ಉತ್ತಮ ನಿರ್ವಹಣೆಯಿಂದ 70 ವರ್ಷ ದಾಟಿದರೂ ಬಾಳಿಕೆ ಬಂದಿವೆ. ಆದರೆ ಈ ಹಿಂದೆ ಸಲಹೆ ನಿರ್ಲಕ್ಷಿಸಿದರ ಪರಿಣಾಮ 19ನೇ ಕ್ರಸ್ಟ್‌ ಗೇಟ್‌ ಕಳಚಿ ಬಿದ್ದು 40 ಟಿಎಂಸಿ ನೀರು ನದಿ ಪಾಲಾಗಿದೆ. ಈಗ ಈ ಗೇಟ್‌ಗೆ ಸ್ಟಾಪ್‌ ಲಾಗ್‌ ಅಳವಡಿಕೆ ಮಾಡಲಾಗಿದೆ.

ಪರಿಣತ ತಜ್ಞ ಎ.ಕೆ.ಬಜಾಜ್ ನೇತೃತ್ವದ ತಾಂತ್ರಿಕ ತನಿಖಾ ಸಮಿತಿ ನೀಡಿದ್ದ ವರದಿ ಬಗ್ಗೆಯೂ ಮಂಡಳಿ ಸಭೆಯಲ್ಲಿ ಚರ್ಚಿಸಲಿದೆ. ಸಭೆಯಲ್ಲಿ ಅನುಮೋದನೆ ನೀಡಿದರೆ ಮುಂದಿನ ಬೇಸಿಗೆಯಲ್ಲಿ ಗೇಟ್‌ ಅಳವಡಿಸುವ ಕಾರ್ಯ ಸಾಗಲಿದೆ. ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣದ ಪ್ರಸ್ತಾವನೆ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದು ಮಂಡಳಿ ಮೂಲಗಳು ತಿಳಿಸಿವೆ.

ಗೇಟ್‌ ಬದಲಾವಣೆ:

ಜಲಾಶಯದ ಕ್ರಸ್ಟ್‌ ಗೇಟ್‌ ಬದಲಿಸಿ ಜಲಾಶಯ ಕಾಪಾಡಿಕೊಳ್ಳಬೇಕಿದೆ. ಹರಿಯುವ ನೀರಿನಲ್ಲೇ ಸ್ಟಾಪ್‌ಲಾಗ್ ಇಳಿಸಿದ ತಜ್ಞ ಕನ್ನಯ್ಯ ನಾಯ್ಡು ಕೂಡ ಗೇಟ್‌ ಬದಲಿಸಲು ಹೇಳುತ್ತಲೇ ಬಂದಿದ್ದಾರೆ. ಜಲಾಶಯವು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಸುಮಾರು 13 ಲಕ್ಷ ಎಕರೆ ಕೃಷಿ ಚಟುವಟಿಕೆಗೆ ನೀರು ಒದಗಿಸುತ್ತಿದೆ. ಈ ಜಲಾಶಯ ರಾಜ್ಯದ ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜಮೀನುಗಳಿಗೆ ನೀರು ಉಣಿಸುತ್ತಿದೆ. ಈ ಜಿಲ್ಲೆಗಳ ನೀರಾವರಿಗೆ ಜೀವನಾಡಿ ಆಗಿದೆ.

ಪರವಾನಗಿ:

ಜಲಾಶಯಕ್ಕೆ ಹೊಸ ಗೇಟ್ ಅಳವಡಿಸುವ ಕುರಿತ ಪ್ರಸ್ತಾವನೆಗೆ ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ಅನುಮತಿ ನೀಡಿದ್ದಾರೆ. ಈಗ ಗೇಟ್‌ಗಳ ವಿನ್ಯಾಸಗಳನ್ನು ಸಿದ್ಧಗೊಳಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಗೇಟ್ ದುರಂತ ಸಂಭವಿಸಿದಾಗ ಸ್ಟಾಪ್ ಲಾಗ್ ತಯಾರಿಸಿದ ಸ್ಥಳಿಯ ಕಂಪನಿಗಳಿಗೆ ಹೊಸ ಗೇಟ್ ಗಳ ನಿರ್ಮಾಣ ಹೊಣೆ ಹೊರಿಸುವ ಸಾಧ್ಯತೆ ಇದೆ. ಈ ನಡುವೆ ಮೂರು ರಾಜ್ಯ ಸರ್ಕಾರಗಳ ನೀರಾವರಿ ಇಲಾಖೆಯ ಕಾರ್ಯದರ್ಶಿಗಳು ಅನುಮೋದನೆ ನೀಡುವುದು ಬಾಕಿ ಇದೆ.

Share this article