ಕಾರವಾರ: ನಗರದ ರವೀಂದ್ರನಾಥ್ ಕಡಲ ತೀರದಲ್ಲಿನ ಟುಪಲೋವ್ ಯುದ್ಧ ವಿಮಾನವನ್ನು ಆ.15ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರವಾಸೋದ್ಯಮ ಇಲಾಖೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಆ.15ರಂಟು ಟುಪಲೋವ್ ಯುದ್ಧ ವಿಮಾನವನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿ, ಈ ಸ್ಥಳದಲ್ಲಿ ಕೆಫೆಟೋರಿಯಾ ಮತ್ತು ಮ್ಯೂಸಿಯಂ ಕಾರ್ಯಗಳನ್ನು ಶೀಘ್ರದಲ್ಲಿ ಕೈಗೊಳ್ಳುವಂತೆ ಸೂಚಿಸಿದರು.
ಹೊನ್ನಾವರದಲ್ಲಿ ಬೋಟಿಂಗ್ ಚಟುವಟಿಕೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು. ಬೋಟ್ ಮಾಲೀಕರು ಮತ್ತು ಬೋಟ್ ನಡೆಸುವವರು ಹೊಂದಿರಬೇಕಾದ ಎಲ್ಲ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ಅವರಿಗೆ ಅನುಮತಿ ನೀಡಬೇಕು. ಅನುಮತಿ ಪಡೆದ ಬೋಟ್ ಗಳಿಗೆ ಸೂಕ್ತ ಗುರುತಿನ ಸಂಖ್ಯೆ ನೀಡಬೇಕು. ಬೋಟಿಂಗ್ ಮತ್ತು ಪ್ರೀವೆಡ್ಡಿಂಗ್ ಚಟುವಟಿಕೆಗಳಿಗೆ ನಿರ್ದಿಷ್ಟ ದರ ನಿಗದಿಪಡಿಸಿ, ಟಿಕೆಟ್ ಕೌಂಟರ್ ವ್ಯವಸ್ಥೆ ಮಾಡಬೇಕು. ಬೋಟ್ಗಳಲ್ಲಿ ಪ್ರವಾಸಿಗರ ಸಂಖ್ಯೆ ನಿಗದಿಪಡಿಸಬೇಕು. ಎಲ್ಲ ಪ್ರವಾಸಿಗರಿಗೆ ಲೈಫ್ ಜಾಕೆಟ್ ವ್ಯವಸ್ಥೆ ಸೇರಿದಂತೆ ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ನಿಗದಿಪಡಿಸಿದ ಅವಧಿಯೊಳಗೆ ಬೋಟಿಂಗ್ ನಡೆಸಲು ಅವಕಾಶ ನೀಡಬೇಕು ಎಂದರು.ಜಿಲ್ಲೆಯಲ್ಲಿನ ಅನಧಿಕೃತ ಹೋಂ ಸ್ಟೇಗಳ ಕುರಿತಂತೆ ಪಂಚಾಯಿತಿ , ಕಂದಾಯ ಮತ್ತು ಪೊಲೀಸ್ ಇಲಾಖೆಯ ಮೂಲಕ ಪರಿಶೀಲಿಸಿ ವರದಿ ನೀಡಬೇಕು. ಅಧಿಕೃತವಾಗಿರುವ ಹೋಂ ಸ್ಟೇಗಳಿಗೆ ಅನುಮತಿಯನ್ನು ನೀಡುವಂತೆ ಮತ್ತು ನವೀಕರಣಗೊಳಿಸುವಂತೆ ತಿಳಿಸಿದರು.
ಭೀಮಕೋಲ ಕೆರೆಯನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಮೂಲಕ ನಿರ್ವಹಣೆ ಮಾಡುವ ಕುರಿತಂತೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು. ಗೋಕರ್ಣ, ಓಂ, ಕುಡ್ಲೆ, ಕಾಸರಕೋಡು, ಅಪ್ಸರಕೊಂಡ ಕಡಲತೀರ ಹಾಗೂ ತದಡಿ ಹಿನ್ನೀರು ಪ್ರದೇಶದಲ್ಲಿ ಜಲ ಸಾಹಸ ಕ್ರೀಡೆಗಳನ್ನು ನಡೆಸಲು ಟೆಂಡರ್ ಆಹ್ವಾನಿಸುವಂತೆ ಹಾಗೂ ಕಡಲತೀರದಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಠಿಯಿಂದ ವಾಚ್ ಟವರ್ಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು ತಿಳಿಸಿದರು.ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಂಜುನಾಥ ನಾವಿ ಮತ್ತಿತರರು ಇದ್ದರು.