ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದ ಬಂಟೇನಹಳ್ಳಿ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ.ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಬೇಲೂರು ವೃತ್ತ ನಿರೀಕ್ಷಕ ರೇವಣ್ಣ ನೇತೃತ್ವದ ತಂಡ ಬಂಟೇನಹಳ್ಳಿಯ ಫಾರೆಸ್ಟ್ ಕಚೇರಿ ಸಮೀಪ ಸ್ಕೂಟಿಯಲ್ಲಿ ಗಾಂಜಾ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಶಶಾಂಕ್ (ಬಂಟೇನಹಳ್ಳಿ ನಿವಾಸಿ) ಹಾಗೂ ದಿಲೀಪ್ (ಹೊಸನಗರ ನಿವಾಸಿ) ಎಂಬ ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳ ತಪಾಸಣೆ ವೇಳೆ ಅವರ ಬಳಿ ಸುಮಾರು 220 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಅಂದಾಜು ಮೌಲ್ಯ ರು. 50,000 ಎಂದು ತಿಳಿದು ಬಂದಿದೆ. ಪೊಲೀಸರು ಆರೋಪಿಗಳ ಬಳಿ ಇದ್ದ ಗಾಂಜಾವನ್ನು ವಶಪಡಿಸಿಕೊಳ್ಳುವುದರ ಜೊತೆಗೆ, ಅಕ್ರಮ ಚಟುವಟಿಕೆಗೆ ಬಳಸುತ್ತಿದ್ದ ಸ್ಕೂಟಿಯನ್ನೂ ಜಪ್ತಿ ಮಾಡಿದ್ದಾರೆ.
* ಬಾಕ್ಸ್ ನ್ಯೂಸ್
ಯುವಕ-ಯುವತಿಯರು ಮಾದಕ ವ್ಯಸನಿಗಳಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುವುದನ್ನು ತಡೆಗಟ್ಟುವ ಸಲುವಾಗಿ ಮಾದಕ ವಸ್ತುಗಳನ್ನು ಬಳಸುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ 08177 222444 ಅಥವಾ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಬೇಲೂರು ವೃತ್ತ ನಿರೀಕ್ಷಕ ರೇವಣ್ಣ ತಿಳಿಸಿದ್ದಾರೆ.