ಮೂರು ತಿಂಗಳಾದರೂ ನಿರ್ಮಾಣವಾಗದ 200ಮೀ. ರಸ್ತೆ..!

KannadaprabhaNewsNetwork |  
Published : Jun 18, 2025, 11:48 PM IST
18ಕೆಎಂಎನ್ ಡಿ11,12,13,14 | Kannada Prabha

ಸಾರಾಂಶ

ಕಲ್ಲು, ಧೂಳಿನ ನಡುವೆ ವಾಹನಗಳ ನಿತ್ಯ ಸಂಚಾರ, ರಸ್ತೆಯ ಒಂದು ಭಾಗದಲ್ಲಿ ಸಣ್ಣ ಸಣ್ಣ ಗುಂಡಿಗಳು ನಿರ್ಮಾಣಗೊಂಡು ದ್ವಿಚಕ್ರವಾಹನ ಸವಾರರ ಸಂಚಾರಕ್ಕೆ ಸವಾಲು, ಜಲ್ಲಿ-ಕಲ್ಲು, ಮರಳು ದಾಸ್ತಾನು ಕೇಂದ್ರವಾದ ಬನ್ನೂರು ರಸ್ತೆ, ಅಡ್ಡಾದಿಡ್ಡಿಯಾಗಿ ಬಿದ್ದಿರುವ ಬ್ಯಾರಿಕೇಡ್‌ಗಳು, ಹಣವಿದ್ದರೂ ರಸ್ತೆ ಕಾಮಗಾರಿ ನಡೆಸದ ಗುತ್ತಿಗೆದಾರ. ಕಣ್ಣಿದ್ದೂ ಕುರುಡಾಗಿರುವ ನಗರಸಭೆ.

ಕನ್ನಡಪ್ರಭ ವಾರ್ತೆ, ಮಂಡ್ಯ

ಕಲ್ಲು, ಧೂಳಿನ ನಡುವೆ ವಾಹನಗಳ ನಿತ್ಯ ಸಂಚಾರ, ರಸ್ತೆಯ ಒಂದು ಭಾಗದಲ್ಲಿ ಸಣ್ಣ ಸಣ್ಣ ಗುಂಡಿಗಳು ನಿರ್ಮಾಣಗೊಂಡು ದ್ವಿಚಕ್ರವಾಹನ ಸವಾರರ ಸಂಚಾರಕ್ಕೆ ಸವಾಲು, ಜಲ್ಲಿ-ಕಲ್ಲು, ಮರಳು ದಾಸ್ತಾನು ಕೇಂದ್ರವಾದ ಬನ್ನೂರು ರಸ್ತೆ, ಅಡ್ಡಾದಿಡ್ಡಿಯಾಗಿ ಬಿದ್ದಿರುವ ಬ್ಯಾರಿಕೇಡ್‌ಗಳು, ಹಣವಿದ್ದರೂ ರಸ್ತೆ ಕಾಮಗಾರಿ ನಡೆಸದ ಗುತ್ತಿಗೆದಾರ. ಕಣ್ಣಿದ್ದೂ ಕುರುಡಾಗಿರುವ ನಗರಸಭೆ.- ಇದು ನಗರದ ಬನ್ನೂರು ರಸ್ತೆಯ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದವರೆಗಿನ ರಸ್ತೆಯ ದುಸ್ಥಿತಿ. ಬರೋಬ್ಬರಿ ಮೂರು ತಿಂಗಳಾದರೂ 200 ಮೀಟರ್ ಉದ್ದದ ರಸ್ತೆಯನ್ನು ನಿರ್ಮಾಣ ಮಾಡಲಿಲ್ಲವೆಂದಾದರೆ ನಗರಸಭೆ ಜೀವಂತವಾಗಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.ಶಾಸಕ ಪಿ.ರವಿಕುಮಾರ್ ಅವರು ಬನ್ನೂರು ರಸ್ತೆಯನ್ನು ವಿಶ್ವದರ್ಜೆ ರಸ್ತೆಯಾಗಿ ನಿರ್ಮಿಸುವ ಕನಸು ಕಂಡವರು. ಸದ್ಯದ ರಸ್ತೆಯ ಸ್ಥಿತಿ ನೋಡಿದರೆ ಶಾಸಕರ ಮಾತು ತೀರಾ ಹಾಸ್ಯಾಸ್ಪದವೆನಿಸುತ್ತದೆ. ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಹೋದವರು ಬಹುಶಃ ಇದುವರೆಗೂ ರಸ್ತೆ ಕಡೆ ತಿರುಗಿಯೂ ನೋಡಿಲ್ಲ. ಈ ರಸ್ತೆಯಲ್ಲಿ ನಿತ್ಯ ಸಂಚರಿಸುವವರ ಬವಣೆ ಹೇಳತೀರದಾಗಿದೆ.ಜಲ್ಲಿ ಬಿಚಾವಣೆ ಮಾಡಿದ್ದೆಷ್ಟು ಅಷ್ಟೇ!: ಮೂರು ತಿಂಗಳ ಹಿಂದೆ ರಸ್ತೆಯನ್ನು ಅಗೆದು, ಜಲ್ಲಿ ಬಿಚಾವಣೆ ಮಾಡಿ, ಡಸ್ಟ್‌ಹಾಕಿ ಹೋಗಿದ್ದೆಷ್ಟು ಅಷ್ಟೇ. ಆನಂತರದಲ್ಲಿ ಗುತ್ತಿಗೆದಾರನ ಸುಳಿವಿಲ್ಲ. ರಸ್ತೆಯನ್ನು ಗುಣಮಟ್ಟದಿಂದ ನಿರ್ಮಿಸಬೇಕಿರುವುದರಿಂದ ಬುಲ್ಡೋಜರ್‌ನಿಂದ ಸಮತಟ್ಟುಗೊಳಿಸುವುದು ಸಾಮಾನ್ಯ. ಅದು ಒಂದು ಸಮತಟ್ಟಿಗೆ ಕೂರುವುದಕ್ಕೆ ಒಂದು-ಒಂದೂವರೆ ತಿಂಗಳೇ ಆದರೂ ನಂತರವಾದರೂ ಡಾಂಬರೀಕರಣ ಮಾಡಬಹುದಿತ್ತು. ಇದುವರೆಗೂ ಡಾಂಬರೀಕರಣವಾಗದೆ ರಸ್ತೆ ಅದ್ವಾನದಿಂದ ಕೂಡಿದೆ. ಬನ್ನೂರು, ಟಿ..ನರಸೀಪುರ, ಮೈಸೂರು, ಅರಕೆರೆ, ನಂಜನಗೂಡು ಸೇರಿದಂತೆ ವಿವಿಧ ಕಡೆಗಳಿಗೆ ತೆರಳುವ ಪ್ರಮುಖ ರಸ್ತೆ ಇದಾಗಿದೆ. ಚಾಮುಂಡೇಶ್ವರಿ ನಗರ, ಅನ್ನಪೂರ್ಣೇಶ್ವರಿ ನಗರ, ಪೊಲೀಸ್ ಕಾಲೋನಿ, ಶಂಕರನಗರ, ಮರೀಗೌಡ ಬಡಾವಣೆ, ಕೆಇಬಿ ಕಾಲೋನಿಗೆ ತೆರಳುವವರು ಇದೇ ರಸ್ತೆಯನ್ನು ಸಂಚಾರಕ್ಕೆ ಆಶ್ರಯಿಸಿಕೊಂಡಿದ್ದಾರೆ. ದಿನವೂ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಅದರಲ್ಲೂ ದ್ವಿಚಕ್ರ ವಾಹನಗಳು ಅಧಿಕ ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ಆದರೂ ರಸ್ತೆ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವ ಇಚ್ಛಾಶಕ್ತಿ ಯಾರಲ್ಲೂ ಇಲ್ಲವಾಗಿದೆ.

ಸಣ್ಣ ಗುಂಡಿಗಳು ನಿರ್ಮಾಣ: ಮಂಡ್ಯ ಗ್ರಾಮಾಂತರ ಠಾಣೆಯಿಂದ ಎಡಭಾಗದ ರಸ್ತೆಯಲ್ಲಿ ಜಲ್ಲಿ ಬಿಚಾವಣೆ ಮಾಡಿದ್ದು, ಮಳೆಯಿಂದಾಗಿ ಸಣ್ಣ ಸಣ್ಣ ಹೊಂಡಗಳು ನಿರ್ಮಾಣವಾಗಿವೆ. ಈ ಹೊಂಡಗಳು ದ್ವಿಚಕ್ರ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿವೆ. ಗುಂಡಿಯೊಳಗೆ ವಾಹನಗಳನ್ನು ಇಳಿಸುತ್ತಾ. ಏಳಿಸುತ್ತಾ ಸರ್ಕಸ್ ಮಾಡಿಕೊಂಡು ಸಾಗುವಂತಾಗಿದೆ.ಭಾರೀ ವಾಹನಗಳು ಸಂಚರಿಸುವ ವೇಳೆ ಮೇಲೇಳುವ ಧೂಳು ದ್ವಿಚಕ್ರವಾಹನ ಸವಾರರಿಗೆ ಇನ್ನಷ್ಟು ನರಕ ಸೃಷ್ಟಿಸುತ್ತಿದೆ. ಸಣ್ಣ ಸಣ್ಣ ಕಲ್ಲುಗಳು ರಸ್ತೆ ತುಂಬೆಲ್ಲಾ ಹರಡಿಕೊಂಡಿವೆ. ದ್ವಿಚಕ್ರವಾಹನ ಸವಾರರು ಎಚ್ಚರ ತಪ್ಪಿ ಬ್ರೇಕ್ ಹಾಕಿದರೆ ಬಿದ್ದು ಅನಾಹುತ ಸಂಭವಿಸುವುದಂತೂ ಗ್ಯಾರಂಟಿ.ರಸ್ತೆಯಲ್ಲೇ ಜಲ್ಲಿ, ಮರಳು ದಾಸ್ತಾನು: ರಸ್ತೆ ಕಾಮಗಾರಿಯನ್ನು ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರ ರಸ್ತೆಯಲ್ಲೇ ಜಲ್ಲಿ, ಮರಳು ದಾಸ್ತಾನು ಮಾಡುತ್ತಿದ್ದಾನೆ. ಸಾರ್ವಜನಿಕರು ಓಡಾಡುವ ರಸ್ತೆ ಎಂಬ ಭಯವಿಲ್ಲದೆ ಬೇರೆಡೆಗೆ ಸಾಗಿಸಬೇಕಾದ ಕಲ್ಲು, ಮರಳನ್ನು ಇಲ್ಲಿ ದಾಸ್ತಾನಿಟ್ಟುಕೊಂಡು ಕಳುಹಿಸುತ್ತಿದ್ದಾನೆ. ಅವ್ಯವಸ್ಥಿತ ರೀತಿಯಲ್ಲಿ ವಾಟರ್ ಟ್ಯಾಂಕರ್, ಜೆಸಿಬಿಗಳನ್ನು ನಿಲ್ಲಿಸುತ್ತಾ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿದ್ದರೂ ಯಾರೊಬ್ಬರೂ ಗುತ್ತಿಗೆದಾರನನ್ನು ಕ್ಯಾರೆ ಎನ್ನದಿರುವುದು ವಿಪರ್ಯಾಸದ ಸಂಗತಿ.ಮುರಿದು ಬಿದ್ದಿರುವ ಬ್ಯಾರಿಕೇಡ್‌ಗಳು: ಕಾಮಗಾರಿ ವೇಳೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲು ಅಳವಡಿಸಿದ್ದ ಬ್ಯಾರಿಕೇಡ್‌ಗಳು ರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ಬಿದ್ದಿವೆ. ಒಂದು ಬ್ಯಾರಿಕೇಡ್ ಮಕಾಡೆ ಮಲಗಿದ್ದರೆ ಇನ್ನೊಂದು ಬ್ಯಾರಿಕೇಡ್ ಬೀಳುವ ಸ್ಥಿತಿಯಲ್ಲಿ ನಿಂತುಕೊಂಡಿವೆ. 200 ಮೀಟರ್ ರಸ್ತೆ ನಿರ್ಮಾಣವೇ ಇಷ್ಟೊಂದು ವಿಳಂಬವಾದರೆ ಮಂಡ್ಯ ಬದಲಾಗುತ್ತಿದೆ ಎಂದು ಹೇಳಲು ಹೇಗೆ ಸಾಧ್ಯ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.ನಮಗೆ ವಿಶ್ವದರ್ಜೆಯ ರಸ್ತೆ ಬೇಡ..!: ನಮಗೆ ವಿಶ್ವದರ್ಜೆಯ ರಸ್ತೆ ನಿರ್ಮಾಣವಾಗುವುದು ಬೇಡ. ಸಾಮಾನ್ಯ ಜನರು ನೆಮ್ಮದಿಯಿಂದ ಓಡಾಡುವಂತಹ ರಸ್ತೆಯೇ ಸಾಕು. ಅದನ್ನಾದರೂ ಬೇಗ ಮಾಡಿಕೊಡಿ ಎನ್ನುವುದು ಈ ಭಾಗದ ನಿವಾಸಿಗಳ ಆಗ್ರಹವಾಗಿದೆ. ಮಳೆಯನ್ನು ಮುಂದಿಟ್ಟುಕೊಂಡು ಕಾಮಗಾರಿಯನ್ನು ವಿಳಂಬ ಮಾಡುವುದು ಎಷ್ಟರಮಟ್ಟಿಗೆ ಸರಿ. 200 ಮೀಟರ್ ಉದ್ದದ ರಸ್ತೆಗೆ ಜಲ್ಲಿ ಬಿಚಾವಣೆ ಮಾಡಿದ ಬಳಿಕ ಅದನ್ನು ಸಮತಟ್ಟುಗೊಳಿಸಿ ಡಾಂಬರು ಹಾಕುವುದಕ್ಕೆ ಎಷ್ಟು ಕಾಲ ಬೇಕೆಂದು ತಿಳಿಯದಷ್ಟು ಜನರು ದಡ್ಡರೇನಲ್ಲ. ಜನರನ್ನು ಕಣ್ಣಿಗೆ ಮಂಕುಬೂದಿ ಎರಚುವ ಕೆಲಸ ನಗರಸಭೆ ಅಽಕಾರಿಗಳು, ಗುತ್ತಿಗೆದಾರರಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.

ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಧೈರ್ಯವಿಲ್ಲ..!: ನಿಗದಿತ ಸಮಯಕ್ಕೆ ಕಾಮಗಾರಿ ಪೂರೈಸದ, ಕಾಮಗಾರಿಯ ಬಗ್ಗೆ ನಿರ್ಲಕ್ಷ್ಯ ತೋರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಧೈರ್ಯ ನಗರಸಭೆ ಅಧಿಕಾರಿಗಳಿಂದ ಹಿಡಿದು ಜಿಲ್ಲಾಡಳಿತ, ಶಾಸಕರಿಗೂ ಇಲ್ಲ. ನೋಟೀಸ್ ಕೊಡುವುದಕ್ಕಷ್ಟೇ ಅವರ ಕೆಲಸ ಸೀಮಿತವಾಗಿದೆ. ಇಂತಹ ನೂರು ನೋಟೀಸ್ ನೀಡಿದರೂ ಗುತ್ತಿಗೆದಾರರು ಹೆದರುವುದಿಲ್ಲ. ನಗರಸಭೆಯಲ್ಲಿ ಹಣವಿದ್ದರೂ ಕಾಮಗಾರಿ ನಡೆಸುವುದಕ್ಕೆ ಹಿಂಜರಿಯುವ ಕೆಲವು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿದರೆ ಅದು ಉಳಿದ ಗುತ್ತಿಗೆದಾರರಿಗೆ ಎಚ್ಚರಿಕೆ ಗಂಟೆಯಾಗಲಿದೆ. ಆದರೆ, ನಗರಸಭೆ, ಜಿಲ್ಲಾಡಳಿತದಿಂದ ಕಪ್ಪುಪಟ್ಟಿಗೆ ಸೇರಿಸುವ ಪ್ರಯತ್ನ ಮಾತ್ರ ನಡೆಯದಿರುವುದು ಗುತ್ತಿಗೆದಾರರ ಉದಾಸೀನ ಧೋರಣೆಗೆ ಕಾರಣವಾಗಿದೆ.ರಾಜಕೀಯ ಪ್ರಭಾವ ಬಳಸಿ ಕಾಮಗಾರಿಯ ಗುತ್ತಿಗೆ ಪಡೆದಿರುವವರು ತಮಗಿಷ್ಟ ಬಂದಂತೆ ಕಾಮಗಾರಿ ನಡೆಸುತ್ತಿದ್ದಾರೆ. ಅವರನ್ನು ಪ್ರಶ್ನೆ ಮಾಡವ ಧೈರ್ಯ, ಎದೆಗಾರಿಕೆ ಯಾರಿಗೂ ಇಲ್ಲದಿರುವುದೇ ಕಾಮಗಾರಿಗಳು ವಿಳಂಬವಾಗಿ, ಮನಸೋಇಚ್ಛೆಯಾಗಿ ನಡೆಯುವುದಕ್ಕೆ ಪ್ರಮುಖ ಕಾರಣವಾಗಿದೆ.ಅಡ್ಜಸ್ಟ್‌ಮೆಂಟ್ ರಾಜಕಾರಣ ಮೇಲುಗೈ: ರಸ್ತೆ, ಸೇತುವೆ, ಚರಂಡಿ ಸೇರಿದಂತೆ ಹಲವಾರು ಕಾಮಗಾರಿಗಳಲ್ಲಿ ಹೊಂದಾಣಿಕೆ ರಾಜಕಾರಣ ಸದಾ ಮೇಲುಗೈ ಸಾಧಿಸುವುದು ಸಾಮಾನ್ಯವಾಗಿದೆ. ಇಂತಹ ರಾಜಕಾರಣವೇ ಅಭಿವೃದ್ಧಿಗೆ ದೊಡ್ಡ ತೊಡಕಾಗಿ ಪರಿಣಮಿಸಿದೆ. ಜನರು ಎಷ್ಟೇ ಮಂದಗತಿಯಲ್ಲಿ ಕಾಮಗಾರಿ ನಡೆಸಿದರೂ ಕೇಳುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಜನರೆದುರು ಕುಂಟುನೆಪಗಳನ್ನು ಹೇಳಿಕೊಂಡು ಗುತ್ತಿಗೆದಾರರೊಂದಿಗೆ ಅಡ್ಜಸ್ಟ್‌ಮೆಂಟ್ ರಾಜಕಾರಣವನ್ನು ಮುಂದುವರೆಸಿದ್ದಾರೆ.ನಗರಸಭೆ ಅಮೃತ ಭವನ ಸಭಾಂಗಣ ನಿರ್ಮಾಣಕ್ಕೆ ಮೀಸಲಿಟ್ಟಿದ್ದ 1.75 ಕೋಟಿ ರು. ಹಣವನ್ನು ಬನ್ನೂರು ರಸ್ತೆ ಅಭಿವೃದ್ಧಿಗೆ ನೀಡಲಾಗಿದೆ. ಶಾಸಕರೂ ಈ ಕಾಮಗಾರಿಗೆ ಹೆಚ್ಚುವರಿ ಹಣ ತರುವುವಾಗಿ ಹೇಳಿದ್ದರು. ನಂತರದಲ್ಲಿ ಅನುದಾನ ಬಿಡುಗಡೆಯಾಗಲಿಲ್ಲ. ನಗರಸಭೆಯಲ್ಲಿ ದುಡ್ಡಿದ್ದರೂ ಗುತ್ತಿಗೆದಾರ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ರಸ್ತೆ ಅದ್ವಾನಸ್ಥಿ ತಿ ತಲುಪಿರುವುದು ನನ್ನ ಗಮನಕ್ಕೂ ಬಂದಿದೆ. ಕೂಡಲೇ ಗುತ್ತಿಗೆದಾರನಿಗೆ ಎಚ್ಚರಿಕೆ ಕೊಟ್ಟು ಕಾಮಗಾರಿ ನಡೆಸುವೆ.- ಎಂ.ವಿ.ಪ್ರಕಾಶ್, ಅಧ್ಯಕ್ಷರು, ನಗರಸಭೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ