)
-ಜಿಲ್ಲೆಗೆ ಬೇಡಿಕೆಗೆ ತಕ್ಕಷ್ಟು ಪಠ್ಯಪುಸ್ತಕ ಪೂರೈಕೆಯಾಗದ ಕಾರಣ ಪೋಷಕರು, ಶಿಕ್ಷಕರಲ್ಲಿ ತಳಮಳ । ಮಕ್ಕಳ ಕಲಿಕೆಯ ಮೇಲೆ ಕವಿದ ಕಾರ್ಮೋಡ
ಗಣೇಶ್ ತಮ್ಮಡಿಹಳ್ಳಿಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ 2026-27ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗಿ ಎರಡು ತಿಂಗಳು ಕಳೆದರೂ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ತಲುಪಿಲ್ಲ.ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡರೂ ಇನ್ನೂ ಜಿಲ್ಲೆಗೆ ಬೇಡಿಕೆಗೆ ತಕ್ಕಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗದ ಕಾರಣ ಪೋಷಕರು ಮತ್ತು ಶಿಕ್ಷಕರಲ್ಲಿ ತಳಮಳ ಉಂಟಾಗಿದ್ದು, ಮಕ್ಕಳ ಕಲಿಕೆಯ ಮೇಲೆ ಕಾರ್ಮೋಡ ಕವಿದಂತಾಗಿದೆ.
ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 1ರಿಂದ 1ನೇ ತರಗತಿವರೆಗಿನ ಒಟ್ಟು 5423 ಮಕ್ಕಳಿಗೆ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ 1771 ಹಾಗೂ ಉರ್ದು ಮಾಧ್ಯಮದಲ್ಲಿ ಕಲಿಯುತ್ತಿರುವ 369 ಮಕ್ಕಳಿಗೆ ಇನ್ನೂ ಪಠ್ಯ ಪುಸ್ತಕ ಇನ್ನೂ ಕೈ ಸೇರಿಲ್ಲ.
ಶಾಲಾ ಪ್ರಾರಂಭದ ದಿನದಂದೇ ಎಲ್ಲ ತರಗತಿಯ ಮಕ್ಕಳಿಗೂ ಉಚಿತ ಪಠ್ಯಪುಸ್ತಕವನ್ನು ಪೂರೈಸುತ್ತಿದೆ. ರಾಜ್ಯ ಪಠ್ಯ ಪುಸ್ತಕ ಸಂಘವು ಪಠ್ಯ ಪುಸ್ತಕ ವಿತರಿಸುವ ಹೊಣೆ ಹೊಂದಿದ್ದು , ಪ್ರತಿವರ್ಷವೂ ಒಂದಿಲ್ಲೊಂದು ತೊಡಕು ಮಾಡುತ್ತಿದೆ ಎಂಬ ಆಪಾದನೆ ಕೇಳಿಬರುತ್ತಿದೆ.
ಪಠ್ಯಪುಸ್ತಕ ಕೊರತೆಗೆ ನಿರಂತರ ಆ್ಯಪ್ ಕಾರಣ
ಶಿಕ್ಷಣ ಇಲಾಖೆಯಿಂದ ಅನುಷ್ಠಾನಗೊಳಿಸಿರುವ `ನಿರಂತರ ಆ್ಯಪ್'''' ಅನ್ನು ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಶಿಕ್ಷಕರಿಗೆ ಒದಗಿಸಲಾಗಿದೆ. ಆಯಾ ತರಗತಿಯ ಶಿಕ್ಷಕರು ಆ್ಯಪ್ ಡೌನ್ಲೋಡ್ ಮಾಡಿಕೊಂಡು ಮೊದಲು ಸ್ವಯಂ ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಆಯಾ ತರಗತಿಯ ಪ್ರತಿಯೊಂದು ವಿದ್ಯಾರ್ಥಿಗಳ ಮುಖವನ್ನು ಎಡ, ಬಲ ಮತ್ತು ಎದುರಿನಿಂದ ಮೂರು ವಿಧವಾಗಿ ಆ್ಯಪ್ನಲ್ಲಿ ಸೆರೆಹಿಡಿದು ನೋಂದಣಿ ಮಾಡಿಕೊಳ್ಳಬೇಕು. ಇದಾದ ನಂತರ, ನಿತ್ಯ ಹಾಜರಾತಿಗಾಗಿ ಶಿಕ್ಷಕರು ತರಗತಿ ಕೊಠಡಿಯಲ್ಲಿ ಕುಳಿತುಕೊಳ್ಳುವ ಎಲ್ಲ ಮಕ್ಕಳನ್ನು ಒಂದೇ ಬಾರಿ ಆ್ಯಪ್ನಲ್ಲಿ ಸೆರೆ ಹಿಡಿದರೆ, ಎಐ ತಂತ್ರಜ್ಞಾನವು ಆಯಾ ಮಕ್ಕಳ ಮುಖ ಗುರುತಿಸಿ, ಹಾಜರಾತಿ ಹಾಕುತ್ತದೆ. ಈ ಹಾಜರಾತಿಯು ಇಲಾಖೆಯ ತಂತ್ರಾಂಶ ಕ್ಕೂ ಹೋಗುತ್ತದೆ.
ಮಕ್ಕಳು ಶಾಲೆಗಳಿಗೆ ಬರುತ್ತಿದ್ದರೂ ನಿರಂತರ ಆ್ಯಪ್ನಲ್ಲಿ ನೋಂದಣಿಯಾಗದ ಕಾರಣ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆ ತೋರಿಸುತ್ತಿದೆ. ಅಲ್ಲದೆ ಆಯಾ ಶಾಲೆಗಳಿಗೆ ಕಳೆದ ವರ್ಷ ಇದ್ದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ. ಕೆಲ ಶಾಲೆಗಳಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮಕ್ಕಳು ದಾಖಲಾಗಿದ್ದಾರೆ. ಹೀಗಾಗಿ ಹೆಚ್ಚುವರಿಯಾಗಿ ಇನ್ನೂ 7562 ಮಕ್ಕಳಿಗೆ ಪಠ್ಯಪುಸ್ತಕವನ್ನು ಪೂರೈಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.