ಹಾವೇರಿ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿರುವ ತುಂಗಾ ವಿದ್ಯಾವರ್ಧಕ ಸಂಘವು ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಈ ವಜ್ರ ಮಹೋತ್ಸವದ ಕೊಡುಗೆಯಾಗಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. ೭೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಉಚಿತ ಪಿಯುಸಿ ಶಿಕ್ಷಣ ನೀಡುವ ಯೋಜನೆಗೆ ಮುಂದಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತುಂಗಾ ಪಿಯು ಕಾಲೇಜು ಪ್ರಾಚಾರ್ಯ ಪ್ರಸನ್ನ ಕೆ.ಎಲ್. ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನ ತೀರ್ಥಹಳ್ಳಿಯಲ್ಲಿ ೧೯೬೭ರಲ್ಲಿ ಪ್ರಾರಂಭಗೊಂಡ ತುಂಗಾ ವಿದ್ಯಾ ಸಂಸ್ಥೆಯು ವಜ್ರ ಮಹೋತ್ಸವದ ಹೊಸ್ತಿಲಿನಲ್ಲಿದೆ. ಈ ಸಂಘದ ಮೂಲಕ ಪಿಯು ಕಾಲೇಜು, ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ನಡೆಸಲಾಗುತ್ತಿದ್ದು, ಮಲೆನಾಡು ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದೆ. ತುಂಗಾ ವಿದ್ಯಾಸಂಸ್ಥೆಯು ಶಿಕ್ಷಣವನ್ನು ವ್ಯಾಪಾರವನ್ನಾಗಿ ನೋಡದೆ ಸೇವೆ ಎಂದು ಪರಿಗಣಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಮಾಜದ ಕಡು ಬಡತನದ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ನಿಂತು ಉಚಿತ ಶಿಕ್ಷಣ ನೀಡುತ್ತಾ ಬಂದಿದೆ ಎಂದರು.
ಕಾಲೇಜಿನಲ್ಲಿ ಮೂಲ ಸೌಕರ್ಯಗಳು ಸೇರಿದಂತೆ ಸುಸಜ್ಜಿತ ಲ್ಯಾಬ್, ಗ್ರಂಥಾಲಯ, ಮೈದಾನ ಹೀಗೆ ಎಲ್ಲ ಆಧುನಿಕ ಸೌಲಭ್ಯಗಳು ಇವೆ. ಸಂಸ್ಥೆಯ ಅಡಿಯಲ್ಲಿ ಹಾಸ್ಟೆಲ್ ಸೌಲಭ್ಯ ಇದ್ದು, ಹಾಸ್ಟೆಲ್ನಲ್ಲಿ ಶುಲ್ಕದ ರಿಯಾಯಿತಿ ಇರುತ್ತದೆ. ಹಾಸ್ಟೆಲ್ನ ವಸತಿ, ಊಟೋಪಚಾರ ಸಂಬಂಧಿಸಿದಂತೆ ಹಾಸ್ಟೆಲ್ ದತ್ತು ಪಡೆದುಕೊಳ್ಳಲು ರಾಜಕೀಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳನ್ನು ಸಂಪರ್ಕಿಸಲಾಗುತ್ತಿದೆ ಎಂದು ವಿವರಿಸಿದರು. ಸಂಸ್ಥೆಯ ನಿರ್ದೇಶಕ ಎಲ್.ಕೆ ನಟರಾಜ ಇದ್ದರು.