ಲಕ್ಷ್ಮೇಶ್ವರ: ಮಾಘ ಮಾಸದ ವಸಂತ ಪಂಚಮಿಯ ವಿಶೇಷ ದಿನವಾದ ಸೋಮವಾರ ತಾಲೂಕಿನ ಅಡರಕಟ್ಟಿ ಗ್ರಾಮದೇವತೆ ದ್ಯಾಮವ್ವ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಭಕ್ತಿಯಿಂದ ಜರುಗಿತು.
ಗ್ರಾಮಸ್ಥರಿಗೆ ಯಾವುದೇ ಕಷ್ಟ-ಕಾರ್ಪಣ್ಯ ಬರಬಾರದು, ಗ್ರಾಮದಲ್ಲಿ ಸುಖ-ಶಾಂತಿ ನೆಲೆಸಲಿ ಎಂಬ ಉದ್ದೇಶದಿಂದ ಕಳೆದ ನಾಲ್ಕೈದು ವರ್ಷಗಳಿಂದ ನಾವು ಮಾಘ ಮಾಸದ ವಸಂತ ಪಂಚಮಿಯ ದಿನ ದೇವಿಗೆ ಉಡಿ ತುಂಬುವ ಕಾರ್ಯ ನಡೆಸಿಕೊಂಡು ಬರುತ್ತಿದ್ದೇವೆ.. ನಮ್ಮ ಇಷ್ಟಾರ್ಥ ನೆರವೇರಿದ್ದು, ಗ್ರಾಮಸ್ಥರು ಸಹೋದರತೆಯಿಂದ ಜೀವನ ಸಾಗಿಸುತ್ತಿದ್ದೇವೆ ಎಂದು ಗ್ರಾಮಸ್ಥರಾದ ಚೆನ್ನಪ್ಪ ಹಳಮನಿ ಮತ್ತು ನಿಂಗನಗೌಡ ಪಾಟೀಲ ಹೇಳಿದರು.
ಮಾಘ ಮಾಸದ ವಸಂತ ಪಂಚಮಿ ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರ ದಿನ. ಈ ದಿನ ನಾವು ದೇವರಿಗೆ ಪೂಜೆ, ಹೋಮ-ಹವನ ಮಾಡುವುದರಿಂದ ಬದುಕಿನಲ್ಲಿ ಶಾಂತಿ-ಸಮಾಧಾನ ಲಭಿಸುತ್ತದೆ ಎಂದು ಇಲ್ಲಿ ಪ್ರತೀತಿ ಇದೆ. ಹೀಗಾಗಿ ಪ್ರತಿವರ್ಷ ಈ ದಿವಸ ಹಬ್ಬದ ರೀತಿಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುತ್ತಾರೆ ಎಂದು ಅರ್ಚಕ ಈರಣ್ಣ ಬಡಿಗೇರ ಹೇಳಿದರು.