ಉಡುಪಿ: ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆಗೆ ಜಿಲ್ಲೆಯ ಶಾಸಕರಿಗೆ ಮನವಿ

KannadaprabhaNewsNetwork |  
Published : Mar 25, 2026, 02:45 AM IST
ಗುತ್ತಿಗೆದಾರರು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣರಿಗೆ ಮನವಿ ಸಲ್ಲಿಸಿದರು | Kannada Prabha

ಸಾರಾಂಶ

ರಾಜ್ಯದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಿದ ಗುತ್ತಿಗೆದಾರರಿಗೆ 37,000 ಕೋಟಿ ರು. ಬಿಲ್‌ ಪಾವತಿಗೆ ಬಾಕಿಯಾಗಿದೆ. ಅದರಲ್ಲಿ ಉಡುಪಿ ಜಿಲ್ಲೆಯ ಗುತ್ತಿಗೆದಾರರಿಗೂ ಸಾವಿರ ಕೋಟಿ ರು.ಗಳಷ್ಟು ಬಿಲ್ ಬಾಕಿಯಾಗಿದ್ದು, ಇದರಿಂದ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಬಾಕಿ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘವು ಬೆಂಗಳೂರಿನಲ್ಲಿ ಉಡುಪಿ ಜಿಲ್ಲೆಯ ಐವರು ಶಾಸಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

ಉಡುಪಿ: ರಾಜ್ಯದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಿದ ಗುತ್ತಿಗೆದಾರರಿಗೆ 37,000 ಕೋಟಿ ರು. ಬಿಲ್‌ ಪಾವತಿಗೆ ಬಾಕಿಯಾಗಿದೆ. ಅದರಲ್ಲಿ ಉಡುಪಿ ಜಿಲ್ಲೆಯ ಗುತ್ತಿಗೆದಾರರಿಗೂ ಸಾವಿರ ಕೋಟಿ ರು.ಗಳಷ್ಟು ಬಿಲ್ ಬಾಕಿಯಾಗಿದ್ದು, ಇದರಿಂದ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಬಾಕಿ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘವು ಬೆಂಗಳೂರಿನಲ್ಲಿ ಉಡುಪಿ ಜಿಲ್ಲೆಯ ಐವರು ಶಾಸಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

ಪ್ರಸ್ತುತ ಅಧಿವೇಶನ ಸಂದರ್ಭದಲ್ಲಿ ತಮ್ಮ ಸಂಕಷ್ಟಗಳನ್ನು ಸರ್ಕಾರದ ಗಮನ ಸೆಳೆಯುವಂತೆ ಗುತ್ತಿಗೆದಾರರು ನಿಯೋಗವು ಬೆಂಗಳೂರು ವಿಧಾನಸೌಧದಲ್ಲಿ ಶಾಸಕರಾದ ಸುನೀಲ್ ಕುಮಾರ್, ಗುರುರಾಜ್ ಗಂಟಿಹೊಳೆ, ಯಶಪಾಲ್ ಆನಂದ್ ಸುವರ್ಣ ಉಡುಪಿ, ಕಿರಣ್ ಕೊಡ್ಗಿ ಹಾಗೂ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಭೇಟಿ ಮಾಡಿ ಆಗ್ರಹಿಸಲಾಯಿತು.

ಗುತ್ತಿಗೆದಾರರು ಸರ್ಕಾರಿ ಕಾಮಗಾರಿಗಳನ್ನು ನಡೆಸಲು ನೂರಾರು ಕೋಟಿ ರು. ಸಾಲ ಮಾಡಿದ್ದು ಸರ್ಕಾರದಿಂದ ಬಿಲ್ ಪಾವತಿಯಾಗದೇ ಸಾಲದ ಬಡ್ಡಿ ವಿಪರೀತ ಹೆಚ್ಚುತ್ತಿದೆ. ಕಾರ್ಮಿಕರ ವೇತನ, ನಿರ್ಮಾಣ ಸಾಮಾಗ್ರಿಗಳ ಪೂರೈಕೆದಾರರಿಗೆ ಬಿಲ್ ಪಾವತಿಸಲಾಗದೇ ಗುತ್ತಿಗೆದಾರರು ತೀವ್ರ ಸಮಸ್ಯೆ ಅನುಭವಿಸುತಿದ್ದಾರೆ, ಇದರಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಅಲ್ಲದೇ ಬಿಡುಗಡೆಯಾದ ಅಲ್ಪಸ್ವಲ್ಪ ಮೊತ್ತವೂ ಜೇಷ್ಟತೆಯ ಆಧಾರದಲ್ಲಿ ವಿತರಣೆ ಮಾಡದೇ ಮಧ್ಯಮ ಮತ್ತು ಸಣ್ಣ ಗುತ್ತಿಗೆದಾರರು ತೊಂದರೆಗೊಳಗಾಗಿದ್ದಾರೆ. ಆದ್ದರಿಂದ ಶಾಸಕರೆಲ್ಲರೂ ಸೇರಿ ಈ ಸಮಸ್ಯೆಯ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಿ, ಬಾಕಿ ಬಿಲ್ಲು ಬಿಡುಗಡೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಗುತ್ತಿಗೆದಾರರು ಆಗ್ರಹಿಸಿದ್ದಾರೆ.

ಮನವಿ ಪತ್ರವನ್ನು ಸ್ವೀಕರಿಸಿದ ಶಾಸಕರು ಗುತ್ತಿಗೆದಾರರ ನ್ಯಾಯಸಮ್ಮತ ಬೇಡಿಕೆಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಸಂಬಂಧಿತ ಅಧಿಕಾರಿಗಳು ಮತ್ತು ಸರ್ಕಾರದ ಮಟ್ಟದಲ್ಲಿ ವಿಷಯವನ್ನು ಗಂಭೀರವಾಗಿ ಮುಂದಿಟ್ಟು ಸದನದಲ್ಲಿಯೂ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಗೋಕುಲ್ ಶೆಟ್ಟಿ, ಉಪಾಧ್ಯಕ್ಷರಾದ ಎ. ಬಿ. ಶೆಟ್ಟಿ, ಪ್ರಮೋದ್ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ, ಸಲಹೆಗಾರರಾದ ಪವನ್ ಎಸ್. ಡಿ. ಹಾಗೂ ಹಿರಿಯ ಗುತ್ತಿಗೆದಾರರಾದ ಫಿಲಿಪ್ ಡಿಕೋಸ್ಟಾ, ಗಣೇಶ್ ಪುತ್ರನ್, ಸುನಿಲ್ ಶೆಟ್ಟಿ ಹೇರಿಕುದ್ರು, ಗ್ರೇಸನ್ ಪಾಯಸ್, ಸುಮಿತ್ ಹೆಗ್ಡೆ, ಅಜಿತ್ ಶೆಟ್ಟಿ, ದೀಪಕ್ ಶೆಟ್ಟಿ ಹಾಲಾಡಿ, ಗಣೇಶ್ ಶೆಟ್ಟಿ ಬಿದ್ಕಲ್ಕಟ್ಟೆ, ಸಂತೋಷ್ ಶೆಟ್ಟಿ ಗೋಳಿಯಂಗಡಿ ಸೇರಿದಂತೆ ಹಲವು ಹಿರಿಯ ಕಿರಿಯ ಗುತ್ತಿಗೆದಾರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏ. 29, 30ರಂದು ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ
ಕರಿಕೆ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ