ಉಡುಪಿ: ನಗರದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಗುರುವಾರ ನವರಾತ್ರಿಯ ದಶಮಿಯ ಪ್ರಯುಕ್ತ ದೇವರಸನ್ನಿಧಿಯಲ್ಲಿ ಚಂಡಿಕಾ ಯಾಗ, ಸಮಾರಾಧನೆಗಳು ವಿಜೃಂಭಣೆಯಿಂದ ನಡೆದವು. ವೇದಮೂರ್ತಿಗಳಾದ ಕೃಷ್ಣಾನಂದ ಭಟ್ ಮಣಿಪಾಲ್ ಮತ್ತು ಶರತ್ ಭಟ್ ಮಲ್ಪೆ ಧಾರ್ಮಿಕ ಪೂಜಾವಿಧಿಗಳನ್ನು ನೆರವೇರಿಸಿದರು. ದೇವಳದ ಅರ್ಚಕ ದೀಪಕ್ ಭಟ್, ದಯಾಘನ್ ಭಟ್, ವಿನಾಯಕ ಭಟ್ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಕೈಲಾಸನಾಥ್ ಶೆಣೈ ದಂಪತಿ ಚಂಡಿಕಾ ಯಾಗದಲ್ಲಿ ಸಹಕರಿಸಿದರು.ಈ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಅಲಂಕಾರ, ಸಾಮೂಹಿಕ ನಮಸ್ಕಾರ, ಪೂರ್ಣಾಹುತಿ, ಮಹಾಪೂಜೆ, ಪಲ್ಲ ಪೂಜೆ, ಸಮಾರಾಧನೆಗಳನ್ನು ನಡೆಸಲಾಯಿತು, ಶ್ರೀ ಶಾರದಾ ದೇವಿಗೆ ಹರಕೆಯ ರೂಪದಲ್ಲಿ ಅರ್ಪಿಸಿದ ಸೀರೆಗಳನ್ನು ಹರಾಜಿನಲ್ಲಿ ಭಕ್ತರು ಪಡೆದುಕೊಂಡರು.