ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಉಡುಪಿ: ಕೃಷ್ಣಮಠದ ಗಂಗಾಭಾಗೀರಥಿ ಗುಡಿಗೆ ಶತಮಾನ ಪೂರ್ಣ

KannadaprabhaNewsNetwork | Published : Jun 10, 2025 7:49 AM

ತ್ರೈಲೋಕ್ಯ ಗುರುಗಳಾದ ಶ್ರೀ ಮಧ್ವಾಚಾರ್ಯರ ಅಮಿತ ಆತ್ಮಶಕ್ತಿ ಹಾಗೂ ಅಪ್ರತಿಮವಾದ ತಪಸ್ಸಿನ ದ್ಯೋತಕವಾಗಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಈ ಮಧ್ವ ಸರೋವರದಲ್ಲಿ ಗಂಗೋದ್ಭವವಾಗುತ್ತದೆ ಎಂಬ ಐತಿಹ್ಯವಿದೆ. 1925ನೇ ಇಸವಿಯಲ್ಲಿ ಅದಮಾರು ಮಠದ ವಿಬುಧಪ್ರಿಯತೀರ್ಥ ಶ್ರೀಪಾದಂಗಳ ಪರ್ಯಾಯದ ಅವಧಿಯಲ್ಲಿ ಮಧ್ವ ಸರೋವರದಲ್ಲಾದ ಗಂಗೋದ್ಭವದ ದಿವ್ಯ ವಿದ್ಯಮಾನದ ಸಂಸ್ಮರಣೆಗಾಗಿ ಅವರು ಈ ಗಂಗಾ ಭಾಗೀರಥಿಯ ಗುಡಿಯನ್ನು ನಿರ್ಮಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಸಪ್ತಮೋಕ್ಷ ಕ್ಷೇತ್ರಗಳಲ್ಲೊಂದಾದ ಉಡುಪಿಯ ಶ್ರೀಕೃಷ್ಣಮಠದ ‘ಮಧ್ವ ಸರೋವರ’ದಲ್ಲಿರುವ ಗಂಗಾ ಭಾಗೀರಥಿಯ ಗುಡಿಗೆ ಶತಮಾನ ತುಂಬುವ ಅಪೂರ್ವ ಸಂದರ್ಭದಲ್ಲಿ ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ವಿಧಿ ಕಾರ್ಯಕ್ರಮ, ಸಂಕಲ್ಪಪೂರ್ವ ಗಂಗಾ ಸ್ನಾನ ನೆರವೇರಿತು.ತ್ರೈಲೋಕ್ಯ ಗುರುಗಳಾದ ಶ್ರೀ ಮಧ್ವಾಚಾರ್ಯರ ಅಮಿತ ಆತ್ಮಶಕ್ತಿ ಹಾಗೂ ಅಪ್ರತಿಮವಾದ ತಪಸ್ಸಿನ ದ್ಯೋತಕವಾಗಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಈ ಮಧ್ವ ಸರೋವರದಲ್ಲಿ ಗಂಗೋದ್ಭವವಾಗುತ್ತದೆ ಎಂಬ ಐತಿಹ್ಯವಿದೆ. 1925ನೇ ಇಸವಿಯಲ್ಲಿ ಅದಮಾರು ಮಠದ ವಿಬುಧಪ್ರಿಯತೀರ್ಥ ಶ್ರೀಪಾದಂಗಳ ಪರ್ಯಾಯದ ಅವಧಿಯಲ್ಲಿ ಮಧ್ವ ಸರೋವರದಲ್ಲಾದ ಗಂಗೋದ್ಭವದ ದಿವ್ಯ ವಿದ್ಯಮಾನದ ಸಂಸ್ಮರಣೆಗಾಗಿ ಅವರು ಈ ಗಂಗಾ ಭಾಗೀರಥಿಯ ಗುಡಿಯನ್ನು ನಿರ್ಮಿಸಿದ್ದಾರೆ.ಪ್ರಸಕ್ತ ವರ್ಷ ಈ ಗುಡಿಯ ಶತಮಾನೋತ್ಸವ ಆಚರಣೆಯ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠದ ಪ್ರಧಾನ ಪುರೋಹಿತರಾದ ರಾಘವೇಂದ್ರ ಕೊಡಂಚ ಅವರ ನೇತೃತ್ವದಲ್ಲಿ ಕಳಶ ಪೂಜೆಯನ್ನು ಮಾಡಲಾಯಿತು. ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಧ್ವ ಸರೋವರಕ್ಕೆ ಕ್ಷೀರಾಭಿಷೇಕ ಹಾಗೂ ಕಲಶಾಭಿಷೇಕವನ್ನು ಮಾಡಿ ಗಂಗಾ ಸ್ನಾನವನ್ನು ಮಾಡಿದರು. ಅವರೊಂದಿಗೆ ನೂರಾರು ಮಂದಿ ಭಕ್ತಾಭಿಮಾನಿಗಳು ಗಂಗಾಸ್ನಾನ ಮಾಡಿದರು. ಮಠದ ವಿದ್ವಾಂಸರಾದ ಬಿ.ಗೋಪಾಲ ಆಚಾರ್ಯ ಇವರು ಮಧ್ವ ಸರೋವರದ ಗಂಗಾ ಸ್ನಾನದ ಮಹತ್ವವನ್ನು ತಿಳಿಸಿದರು. ಪರ್ಯಾಯ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಆಪ್ತ ಸಹಾಯಕರಾದ ರತೀಷ್ ತಂತ್ರಿ ಹಾಗೂ ಅಪಾರ ಸಂಖ್ಯೆಯ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶತಮಾನೋತ್ಸವದ ಪ್ರಯುಕ್ತ ರಾತ್ರಿ ಗಂಗೆ ಮಾತೆಗೆ ವಿಶೇಷ ಪೂಜೆ, ಗಂಗಾರತಿ, ಬಾಗೀನಗಳನ್ನು ಪರ್ಯಾಯ ಶ್ರೀಗಳು ಅರ್ಪಿಸಿದರು. ಈ ಸಂದರ್ಭದಲ್ಲಿ ಅದಮಾರು ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.