ಮಂಗಳೂರು: ಜಾತಿ ಪದ್ಧತಿ ಮತ್ತು ಅಸ್ಪ್ರಶ್ಯತೆಯನ್ನು ವಿರೋಧಿಸಿ ಮಾನವೀಯತೆ ಹಾಗೂ ಸಮಾನತೆಯ ಸಂದೇಶ ಸಾರಿದ ಸಂತ ರವಿದಾಸರು ಶತಮಾನದ ಹಿಂದೆ ಉತ್ತರ ಭಾರತದಲ್ಲಿ ಭಕ್ತಿ ಪಂಥಕ್ಕೆ ಭದ್ರಬುನಾದಿ ಹಾಕಿದ ಮಹಾನ್ ಕವಿ. ಸಮಾಜ ಸುಧಾರಣೆಯ ಹರಿಕಾರರಾಗಿ ಸಂತ ರವಿದಾಸರು ಇಂದಿಗೂ ಜನಮಾನಸದಲ್ಲಿ ನೆಲೆಸಿದ್ದಾರೆ ಎಂದು ಉಡುಪಿ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೊ.ಸುಕನ್ಯಾ ಮಾರ್ಟಿಸ್ ಹೇಳಿದರು.ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ ಶಿಕ್ಷಕ ಸಂಘದ ಮಂಗಳೂರು ವಿಭಾಗ ಮತ್ತು ಸೈಂಟ್ ಆಗ್ನೆಸ್ ಕಾಲೇಜಿನ (ಸ್ವಾಯತ್ತ) ಹಿಂದಿ ವಿಭಾಗದ ವತಿಯಿಂದ ಸಂತ ರವಿದಾಸರ ೬೫೦ನೇ ಜನ್ಮ ವರ್ಷಾಚರಣೆ ಅಂಗವಾಗಿ ಬುಧವಾರ ನಗರದ ಸೈಂಟ್ ಆಗ್ನೆಸ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಭಾರತೀಯ ಸಂತ ಪರಂಪರೆ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮ ಸಂಯೋಜಕ ಡಾ.ಉದಯ ಕುಮಾರ್ ಬಿ. ಸ್ವಾಗತಿಸಿದರು. ಡಾ.ಆರ್.ನಾಗೇಶ್ ವಂದಿಸಿದರು. ವಿದ್ಯಾರ್ಥಿನಿ ಸಾಂಡ್ರಾ ಪೀಟರ್ ನಿರೂಪಿಸಿದರು.
----