ಉಡುಪಿ: ಗೃಹ ಬಳಕೆಯ ಅಡುಗೆ ಅನಿಲದ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಮಂಗಳವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್ ಜಂಟಿಯಾಗಿ ಪ್ರತಿಭಟನೆ ನಡೆಸಿದವು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ನರೇಂದ್ರ ಮೋದಿ ಸರ್ಕಾರ ಕಳೆದ 11 ವರ್ಷಗಳಿಂದ ನಿರಂತರ ಬೆಲೆ ಏರಿಕೆ ಮೂಲಕ ಬಡವರು, ಕಾರ್ಮಿಕರು ಹಾಗೂ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ. ಅದಕ್ಕೆ ಸಾಮಾನ್ಯವರ್ಗದವರ ಅತ್ಯಗತ್ಯ ಎಲ್ಪಿಜಿ ಬೆಲೆ ಏರಿಕೆ ತಾಜಾ ಉದಾಹರಣೆಯಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಸಿಲಿಂಡರ್ ಬೆಲೆ ಏರಿಕೆ ಮೂಲಕ ಕೇಂದ್ರ ಸರ್ಕಾರ ಮಧ್ಯಮವರ್ಗದ ಮಹಿಳೆಯರ ಮೇಲೆ, ಹೋಟೆಲ್ ಉದ್ದಿಮೆಗೂ ಭಾರೀ ಹೊಡೆತ ನೀಡಿದೆ. ಸರ್ಕಾರ ತಕ್ಷಣ ಆ ಬೆಲೆ ಏರಿಕೆ ನಿಯಂತ್ರಿಸಬೇಕು, ಇಲ್ಲದಿದ್ದರೆ ಜನಜೀವನದ ಮೇಲೆ ಭಾರೀ ದುಷ್ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.ಪಕ್ಷದ ಪ್ರಮುಖರಾದ ವೆರೊನಿಕಾ ಕರ್ನೆಲಿಯೋ ಮಾತನಾಡಿ, ಕಚ್ಚಾ ತೈಲದ ಬೆಲೆ ಏರಿಕೆಯಾಗದಿದ್ದರೂ, ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿದೆ. ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿ, ಜನ ಸಂಕಷ್ಟಕ್ಕೆ ಸ್ಪಂಧಿಸಿದರೆ ಕೇಂದ್ರ ಸರ್ಕಾರ ತೆರಿಗೆ, ಜಿಎಸ್ಟಿ ಮೂಲಕ ಜನರಿಗೆ ಹೊರೆ ಹೆಚ್ಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಮುಖಂಡರಾದ ಅಲೆವೂರು ಹರೀಶ್ ಕಿಣಿ, ದಿನೇಶ್ ಹೆಗ್ಡೆ ಮಳಹಳ್ಳಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮುಖಂಡೆ ಜ್ಯೋತಿ ಹೆಬ್ಬಾರ್, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಗೀತಾ ವಾಗ್ಳೆ ಮತ್ತಿತರರಿದ್ದರು.