ಉಡುಪಿ: ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಕೊನೆಗೂ ಬಡಾನಿಡಿಯೂರು ಗ್ರಾಮದಲ್ಲಿ ನಿರ್ಮಿಸಲುದ್ದೇಶಿಸಿರುವ ರೆಸಾರ್ಟ್ಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಏಕ ವಿನ್ಯಾಸ (ಸಿಂಗಲ್ ಲೇ ಔಟ್) ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರವೂ ಮಾಜಿ ಶಾಸಕರು ತಮ್ಮ ಧರಣಿಯನ್ನು ಮುಂದುವರಿಸಿದರು, ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರು ಬಂದು ಅವರಿಗೆ ಅನುಮೋದನೆಯ ಪತ್ರವನ್ನು ನೀಡಿದರು, ಇದಕ್ಕೆ ಸಂತಸ ವ್ಯಕ್ತಪಡಿಸಿದ ಮಾಜಿ ಶಾಸಕರು ತಮ್ಮ ಧರಣಿಯನ್ನು ಮುಕ್ತಾಯಗೊಳಿಸಿದರು.ಆದರೆ ಆಯುಕ್ತರು, ಕಾನೂನು ತಜ್ಞರ ಅಭಿಪ್ರಾಯ ಪಡೆದು ಈ ಅನುಮೋದನೆ ನೀಡಿದ್ದೇವೆ, ಇದು ತಾತ್ಕಾಲಿಕ ಅನುಮೋದನೆಯಾಗಿದ್ದು, ಮುಂದೆ ನ್ಯಾಯಾಲಯದ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ತಾನು ತಮ್ಮ ವೈಯುಕ್ತಿಕ ರೆಸಾರ್ಟಿಗಾಗಿ ಈ ಧರಣಿ ಮಾಡಿದ್ದು, ಮುಂದೆ ಸಾಮಾನ್ಯ ಜನರಿಗೆ ಕೂಡ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶೀಘ್ರ ಕೆಲಸಗಳು ಆಗುವಂತೆ ಹೋರಾಟ ಮುಂದುವರೆಸುವುದಾಗಿ ಮಾಜಿ ಶಾಸಕರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರ ಬೆಂಬಲಿಗರಾದ ಮಹೇಶ್ ಠಾಕೂರ್, ಸುವರ್ಧನ ನಾಯಕ್ ಮುಂತಾದವರಿದ್ದರು.