ಉಡುಪಿ ಕಾವಿ ಕಲೆಗೆ ಶೀಘ್ರ ಜಿಐ ಟ್ಯಾಗ್ ಸಾಧ್ಯತೆ

KannadaprabhaNewsNetwork |  
Published : Dec 17, 2025, 03:00 AM IST
ಉಡುಪಿ ಹಾವಂಜೆಯ ಭಾಸ ಗ್ಯಾಲರಿ -ಸ್ಟುಡಿಯೋದಲ್ಲಿ ಕಾವಿ ಕಲೆಯ ಬಗ್ಗೆ ಕಾರ್ಯಾಗಾರ ಸಂಪನ್ನಗೊಂಡಿತು | Kannada Prabha

ಸಾರಾಂಶ

ಶೀಘ್ರದಲ್ಲಿ ಉಡುಪಿಯ ಭಾಗಕ್ಕೆ ಕಾವಿ ಕಲೆಗೆ ಜಿಐ ಟ್ಯಾಗ್ ದೊರಕಲಿದೆ, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ ಎಂದು ಕಾವಿ ಕಲೆ ಕಲಾವಿದ ಡಾ. ಜನಾರ್ದನ ಹಾವಂಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಡುಪಿ: ಶೀಘ್ರದಲ್ಲಿ ಉಡುಪಿಯ ಭಾಗಕ್ಕೆ ಕಾವಿ ಕಲೆಗೆ ಜಿಐ ಟ್ಯಾಗ್ ದೊರಕಲಿದೆ, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ ಎಂದು ಕಾವಿ ಕಲೆ ಕಲಾವಿದ ಡಾ. ಜನಾರ್ದನ ಹಾವಂಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಕರಕುಶಲ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ನೇತೃತ್ವದಲ್ಲಿ ಅಳಿವಿನಂಚಿನ ಕಾವಿ ಕಲೆಯ ಬಗ್ಗೆ 25 ದಿನಗಳ ಕಾರ್ಯಾಗಾರ ಇಲ್ಲಿನ ಹಾವಂಜೆಯ ಭಾಸ ಗ್ಯಾಲರಿ ಮತ್ತು ಸ್ಟುಡಿಯೋದಲ್ಲಿ ಸಂಪನ್ನಗೊಂಡಿತು.

ಈ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿ ಡಾ. ಹಾವಂಜೆ ಅವರು, ಈ ಕಾರ್ಯಾಗಾರದಲ್ಲಿ ದಿನಬಳಕೆಯ ವಸ್ತುಗಳಲ್ಲಿ ಕಾವಿ ಕಲೆಯ ವಿನ್ಯಾಸ ಮಾಡಲಾಗಿದೆ. ಇನ್ನಷ್ಟು ಪ್ರಯೋಗ ಪ್ರಯತ್ನಗಳು ಈ ಕಲೆಯನ್ನು ನಡೆಸಬೇಕಾಗಿದೆ. ಸ್ಥಳೀಯರು ಈ ದಿಸೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ ಎಂದರು.

ಹಾವಂಜೆ ಗ್ರಾ.ಪಂ. ಅಧ್ಯಕ್ಷೆ ಆಶಾ ಪೂಜಾರಿ ಅವರು, ನಮ್ಮ ಗ್ರಾಮದಲ್ಲಿ ಈ ರೀತಿಯ ಕಾರ್ಯಾಗಾರ ನಡೆಯುತ್ತಿರುವುದು ಮತ್ತು ಕಾವಿ ಕಲಾವಿದ ಜನಾರ್ದನ ಹಾವಂಜೆ ನಮ್ಮೂರಿಗೆ ಹೆಮ್ಮೆ. ಸ್ಥಳೀಯ ಕರಕುಶಲಕರ್ಮಿಗಳು ಇನ್ನಷ್ಟು ಈ ಕಲಾಪ್ರಕಾರದಲ್ಲಿ ತೊಡಗಿಸಿಕೊಂಡು ಕಲೆ ಹಾಗೂ ಆ ಮೂಲಕ ಗ್ರಾಮದ ಅಭಿವೃದ್ಧಿಯೂ ಆಗಲಿಎಂಬುದಾಗಿ ಹಾರೈಸಿದರು.

ಕರಕುಶಲ ಅಭಿವೃದ್ಧಿ ಮಂಡಲಿಯ ಸಹ ನಿರ್ದೇಶಕಿ ರಾಜೇಶ್ವರಿ, ಪ್ರಸ್ತುತ ಅಳಿವಿನಂಚಿನ ಕಾವಿ ಕಲೆಯನ್ನು ಕರಾವಳಿಯ ಭಾಗದಲ್ಲಿ ಅದರಲ್ಲೂ ಉಡುಪಿಯ ಹಾವಂಜೆಯಲ್ಲಿ ಒಂದು ಸೆಕ್ಟರ್ ಆಗಿ ಬೆಳೆಸುತ್ತಿರುವುದು ಸಂತೋಷದ ಸಂಗತಿ, ಶೀಘ್ರ ಈ ಕಲೆಗೆ ಜಿಐ ಮಾನ್ಯತೆ ಸಿಗಲಿ ಎಂದರು.

ದೆಹಲಿಯ ಹಿರಿಯ ವಿನ್ಯಾಸಗಾರ ಬ್ರಿಜೇಶ್ ಜೈಸ್ವಾಲ್ ಈ ಕಾರ್ಯಾಗಾರದಲ್ಲಿ ಕಲಾವಿದರ ವಿನ್ಯಾಸಗಳ ಬೆಳವಣಿಗೆಗೆ ಸಹಕರಿಸಿದರು. ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜನಾರ್ದನ ಮೂಲ್ಯ, ನಿರ್ದೇಶಕ ಗಣೇಶ ಕುಲಾಲ್ ಹಾಗೂ ಶೇಷಪ್ಪ ಕುಲಾಲ, ಕಾವಿ ಆರ್ಟ್ ಫೌಂಡೇಶನ್‌ನ ಮಂಜುನಾಥ ರಾವ್ ಉಪಸ್ಥಿತರಿದ್ದರು.ಕೈಯಿಂದಲೇ ತಯಾರಿಸಿದ ವಿವಿಧ ರೀತಿಯ ಸ್ಮರಣಿಕೆಗಳು, ಮಣ್ಣಿನ ವಿವಿಧ ವಿನ್ಯಾಸಗಳ ಮಡಕೆ ಹಾಗೂ ಮಣ್ಣಿನಿಂದಲೇ ತಯಾರಿಸಿದ ಉತ್ಪನ್ನಗಳು, ಅಂಗಿ, ಕುರ್ತಾ, ದಿಂಬಿನ ಬಟ್ಟೆ, ಟೀ ಕೋಸ್ಟರ್, ಸ್ಮರಣಿಕೆ ಬಾಕ್ಸ್ ಹಾಗೂ ಮರದ ವಿವಿಧ ದಿನ ಬಳಕೆಯ ವಸ್ತುಗಳ ಮೇಲೆ ಕಾವಿ ಕಲೆಯ ವಿನ್ಯಾಸಗಳನ್ನು ಈ ಕಾರ್ಯಾಗಾರದಲ್ಲಿ ವಿನ್ಯಾಸಗೊಳಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!