ಕನ್ನಡಪ್ರಭ ವಾರ್ತೆ ಉಡುಪಿಪಾರ್ಕಿನ ಮರಗಳನ್ನು ರಕ್ಷಿಸುವ ಹೊಣೆ ಹೊತ್ತ ಗುತ್ತಿಗೆದಾರನೇ ಮರಗಳನ್ನು ಕಡಿದು, 25 ಸಾವಿರ ರು. ದಂಡ ಕಟ್ಟಿದ ಘಟನೆ ಉಡುಪಿಯಲ್ಲಿ ಮಂಗಳವಾರ ನಡೆದಿದೆ.
ಇದು ಉಡುಪಿ ನಗರದಲ್ಲಿರುವ ಏಕೈಕ ಮತ್ತು ಪುರಾತನ ಪಾರ್ಕ್ ಆಗಿದೆ. ಇಲ್ಲಿ ಗಾಂಧಿ ಸ್ಮಾರಕ ಪ್ರತಿಮೆ ಕೂಡ ಇದೆ. ನೂರಾರು ಮಂದಿ ಬೆಳಗ್ಗೆ ಇಲ್ಲಿ ಜಾಗಿಂಗ್ ನಡೆಸುತ್ತಾರೆ, ಸಂಜೆ ವಿಹಾರಕ್ಕೆ ಬರುತ್ತಾರೆ. ಪ್ರೇಮಿಗಳಿಗೂ ಇದು ನೆಚ್ಚಿನ ತಾಣವಾಗಿದೆ. ಪಾರ್ಕ್ ಮಧ್ಯೆ ಬಯಲು ರಂಗಮಂದಿರ ಕೂಡ ಇದ್ದು, ಇದರಲ್ಲಿ ನಾಟಕೋತ್ಸವ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಇಲ್ಲಿರುವ ರೇಡಿಯೋ ಟವರ್ಗೆ ಹತ್ತಾರು ದಶಕಗಳ ಇತಿಹಾಸವೇ ಇದೆ.
ಇಂತಹ ಪಾರ್ಕ್ನಲ್ಲಿದ್ದ ಮರಗಳನ್ನು ಕಡಿಯುವುದಕ್ಕೆ ಗುತ್ತಿಗೆದಾರ ನಗರಸಭೆಯಲ್ಲಿ ಪರವಾನಗಿಯನ್ನೂ ಪಡೆದಿರಲಿಲ್ಲ. ಮರಗಳನ್ನು ಕಡಿಯುವುದನ್ನು ಕಂಡ ಪ್ರತೀದಿನ ಇದೇ ಪಾರ್ಕ್ನಲ್ಲಿ ಜಾಗಿಂಗ್ ಮಾಡುತ್ತಿರುವ ಶ್ರೀನಿವಾಸ್ ಪ್ರಭು ಎಂಬವವರು ಆಕ್ಷೇಪಿಸಿದ್ದಾರೆ. ಆದರೂ ಗುತ್ತಿಗೆದಾರ ಅದಕ್ಕೆ ಕ್ಯಾರೇ ಎಂದಿಲ್ಲ. ಕೊನೆಗೆ ಪ್ರಭು, ನಗರಸಭೆ ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೌರಾಯುಕ್ತ ರಾಯಪ್ಪ ಅವರು ಅನುಮತಿ ಇಲ್ಲದೇ ಮರಗಳನ್ನು ಕಡಿದ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು ಮತ್ತು 25 ಸಾವಿರ ರು. ದಂಡ ವಿಧಿಸಿದರು ಮತ್ತು ಕಡಿದ ಪ್ರತಿ ಮರಕ್ಕೆ ತಲಾ 10 ಗಿಡಗಳನ್ನು ನೆಡುವಂತೆ ಆದೇಶಿಸಿದರು.