ಕನ್ನಡಪ್ರಭ ವಾರ್ತೆ ಸಿಂದಗಿ ಪಟ್ಟಣದ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಜಿ.ಪಿ.ಪೋರವಾಲ ಕಲಾ ವಾಣಿಜ್ಯ ಮತ್ತು ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೋಮವಾರ ಅರ್ಥ ಪೂರ್ಣವಾದ ಬೃಹತ ಉದ್ಯೋಗ ಮೇಳ ಜರುಗಿತು.

ಕನ್ನಡಪ್ರಭ ವಾರ್ತೆ ಸಿಂದಗಿ

ಪಟ್ಟಣದ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಜಿ.ಪಿ.ಪೋರವಾಲ ಕಲಾ ವಾಣಿಜ್ಯ ಮತ್ತು ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೋಮವಾರ ಅರ್ಥ ಪೂರ್ಣವಾದ ಬೃಹತ ಉದ್ಯೋಗ ಮೇಳ ಜರುಗಿತು.

ನಾಡಿನ ಪ್ರತಿಷ್ಠಿತ ಕಂಪನಿಗಳಾದ ಟಾಟಾ, ಹೋಂಡಾ, ಟಿವಿಎಸ್, ಏಷಿಯನ್ ಪೇಂಟ್ಸ್, ಟೊಯೋಟಾ, ಆದಿತ್ಯ ಹೆಲ್ತ್ ಕೇರ್, ಐಫೋನ್, ಷಾ ಹುಂಡೈ, ಲೂಮ್ಯಾಕ್ಸ್, ಎಚ್ ಡಿಎಫ್ ಸಿ ಬ್ಯಾಂಕ್, ಆರ್ ಬಿಎಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ , ಒಳಗೊಂಡು ಅನೇಕ ಬೆಂಗಳೂರಿನ ಪ್ರತಿಷ್ಠಿತ ಹಾಗೂ ಇನ್ನುಳಿದ 22ಕ್ಕಿಂತ ಅಧಿಕ ಕಂಪನಿಗಳು, ಬ್ಯಾಂಕಿಂಗ್, ಉತ್ಪಾದನೆ, ಆರೋಗ್ಯ ವಾಹನ ಉದ್ಯಮ ಮತ್ತು ಸೇವಾ ಕ್ಷೇತ್ರದ ಅನೇಕ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು.

ಉದ್ಯೋಗ ಮೇಳವನ್ನು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಉದ್ಘಾಟಿಸಿದರು.

ಮೇಳದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಿ.ಎಂ.ಸರಶೆಟ್ಟಿ ಮಾತನಾಡಿ, ಈ ಉದ್ಯೋಗ ಮೇಳವು ನಮ್ಮ ಸಂಸ್ಥೆ ಚೇರಮನ್ನರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ಸದಾಶಯವಾಗಿತ್ತು. ಈ ಮೇಳ ನಮ್ಮ ಕಾಲೇಜಿನ ಹೊಸ ಪ್ರಯತ್ನವಾಗಿದೆ. ಈ ಮೇಳದಲ್ಲಿ ಸುಮಾರು 800ಕ್ಕೂ ಅಧಿಕ ಜನ ನೋಂದಣಿ ಮಾಡಿದ್ದು, ಸುಮಾರು 280ಕ್ಕೂ ಹೆಚ್ಚು ಜನ ವಿವಿಧ ಕಂಪನಿಗಳ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಸುಮಾರು 8 ರಿಂದ 9 ಕಂಪನಿಗಳು ಅಭ್ಯರ್ಥಿಗಳಿಗೆ ಸಂದರ್ಶನ ಮಾಡಿ ಸ್ಥಳದಲ್ಲಿಯೇ ಸುಮಾರು 40ಕ್ಕೂ ಅಧಿಕ ಯುವಕ ಯುವತಿಯರಿಗೆ ಉದ್ಯೋಗದ ಆದೇಶ ಪ್ರತಿಗಳನ್ನು ನೀಡಿದ್ದಾರೆ. ಮೇಳಕ್ಕೆ ಆಗಮಿಸಿದ ಒಟ್ಟು ಕಂಪನಿಗಳಲ್ಲಿ ಅಂದಾಜು 2000 ಅಧಿಕ ಉದ್ಯೋಗಗಳಿದ್ದು, ಹಂತ ಹಂತವಾಗಿ ಕಂಪನಿಗಳು ಅಭ್ಯರ್ಥಿಗಳಿಗೆ ಸಂದರ್ಶನ ನೀಡಲಿದ್ದಾರೆ. ಅಭ್ಯರ್ಥಿಗಳು ಕಂಪನಿಗಳು ಕೇಳುವ ಎಲ್ಲ ಪ್ರಶ್ನೆಗಳಿಗೆ ಅತ್ಯಂತ ಸೃಜನಾತ್ಮಕವಾಗಿ ಉತ್ತರ ನೀಡಿ ಉದ್ಯೋಗವಕಾಶಗಳನ್ನು ಪಡೆದುಕೊಳ್ಳಬೇಕು ಎಂದರು.

ಈ ವೇಳೆ ಯಾಳತೀಶ ನಿರ್ಮಾಣ ಸಂಸ್ಥೆಯ ಮುಖ್ಯಸ್ಥ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಮುಸ್ತಾಕ ವೇದಿಕೆ ಮೇಲಿದ್ದರು.

ಉದ್ಯೋಗ ಮೇಳದಲ್ಲಿ ಮಹಾವಿದ್ಯಾಲಯದ ಡಾ.ರವಿ ಗೋಲಾ, ಡಾ.ನಾಗರಾಜ ಮುರಗೋಡ, ಪ್ರಕಾಶ ತೇಜು, ಭೀಮಾಶಂಕರ ಅರಳಗುಂಡಗಿ, ಬಿ.ಆರ್.ಮಹಜನಶೆಟ್ಟಿ ಸೇರಿದಂತೆ ಇತರರು ಇದ್ದರು.

ಇಂದಿನ ಯುವಕರು ಕೇವಲ ಪದವಿಯನ್ನು ಪಡೆದುಕೊಂಡರೆ ಸಾಲದು. ಜ್ಞಾನದ ಜೊತೆಗೆ ಕೌಶಲ್ಯ, ಶಿಸ್ತು, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಉದ್ಯೋಗ ಯಾರು ಬಂದು ಕೊಡುವುದಿಲ್ಲ ನಮ್ಮ ಸಾಮರ್ಥ್ಯದಿಂದ ಅದು ನಮ್ಮಲ್ಲಿ ಬರುತ್ತದೆ. ಹಿಂತಹ ಉದ್ಯೋಗ ಮೇಳಗಳು ಯುವಜನತೆಗೆ ಹೊಸ ದಿಕ್ಕು, ಹೊಸ ಕನಸು ಮತ್ತು ಅವಕಾಶಗಳನ್ನು ತೊರುತ್ತವೆ. ವಿಶೇಷವಾಗಿ ಗ್ರಾಮೀಣ ಭಾಗದ ಯುವಕರು ಆತ್ಮ ವಿಶ್ವಾಸ ಕಳೆದುಕೊಳ್ಳದೆ ತಮ್ಮ ಪ್ರತಿಭೆ ಪ್ರದರ್ಶಿಸಿ ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳಬೇಕು.

-ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಸಾರಂಗಮಠ