- ಪವಾಡ ಕ್ಷೇತ್ರದ ಹಿತ ಕಾಯಲು, ಭಕ್ತರಿಗೆ ಮೂಲಸೌಕರ್ಯಕ್ಕೆ ರಾಜೇಂದ್ರ ಪ್ರಸಾದ ಒತ್ತಾಯ - - -
ವಿಜಯ ನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಪವಾಡ ಕ್ಷೇತ್ರ ಉಜ್ಜಯಿನಿ ಶ್ರೀ ಮರುಳ ಸಿದ್ದೇಶ್ವರ ದೇವಸ್ಥಾನವು ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಎ ಶ್ರೇಣಿಯ ದೇವಸ್ಥಾನವಾಗಿದೆ. ದೇವಸ್ಥಾನಕ್ಕೆ ಭಕ್ತರು ಅರ್ಪಿಸುವ ಕಾಣಿಕೆ ಹಾಗೂ ಹರಕೆ ಹಣವು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸೇರದೇ, ಉಜ್ಜಯಿನಿ ಪೀಠದ ಸ್ವಾಮೀಜಿ ಪಾಲಾಗುತ್ತಿದೆ ಎಂದು ರಾಜೇಂದ್ರ ಪ್ರಸಾದ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಇತ್ತೀಚೆಗೆ ಮಾತನಾಡಿದ ಅವರು, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಎ ಶ್ರೇಣಿಯ ಉಜ್ಜಯಿನಿ ಶ್ರೀ ಮರುಳ ಸಿದ್ದೇಶ್ವರ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆ ಸಕ್ರಿಯವಾಗಿ ಮೊದಲು ಮಧ್ಯ ಪ್ರವೇಶಿಸಿ, ದೇವಸ್ಥಾನಕ್ಕೆ ಭಕ್ತರು ಅರ್ಪಿಸುವ ಕಾಣಿಕೆ ಹಾಗೂ ಹರಕೆ ಹಣ ಸರ್ಕಾರದ ಬೊಕ್ಕಸಕ್ಕೆ ಸೇರುವಂತೆ ಮೊದಲು ಕ್ರಮ ಕೈಗೊಳ್ಳಬೇಕು ಎಂದರು.ದೇವಸ್ಥಾನಕ್ಕೆ ಭಕ್ತರು ಅರ್ಪಿಸುವ ಚಿನ್ನಾಭರಣ, ಬೆಳ್ಳಿ ಆಭರಣ, ವಸ್ತುಗಳು, ನಗದು ಕಾಣಿಕೆ ಅರ್ಪಿಸಿದಾಗ ಇಲಾಖೆಯ ಅಧಿಕೃತ ರಸೀದಿ ನೀಡುವ ಬದಲಿಗೆ, ಮಠದ ಹೆಸರಿನಲ್ಲಿ ಬೋಗಸ್ ರಸೀದಿಗಳನ್ನು ನೀಡಲಾಗುತ್ತಿದೆ. ಹೀಗೆ ಬಂದ ಹಣವು, ಆಭರಣಗಳು ಸರ್ಕಾರದ ಖಾತೆಗೆ ಜಮಾ ಆಗುತ್ತಿಲ್ಲ. ಬದಲಾಗಿ ಸ್ವಾಮೀಜಿಯೊಬ್ಬರ ಆಪ್ತ ವ್ಯಕ್ತಿಯೊಬ್ಬರ ಕೈ ಸೇರುತ್ತಿದೆ. ಇದನ್ನು ಮೊದಲು ತಡೆಯಬೇಕು ಎಂದು ಅವರು ಹೇಳಿದರು.
ನಿಯಮಾನುಸಾರ ದೇವಸ್ಥಾನದ ಹುಂಡಿಯನ್ನು ತಹಸೀಲ್ದಾರ್ ಹಾಗೂ ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ತೆರೆದು, ಹುಂಡಿ ಕಾಣಿಕೆ ಎಣಿಸುವ ಕಾರ್ಯ ನಡೆಸಬೇಕಾಗಿತ್ತು. ಆದರೆ, ಅದನ್ನು ಸಹ ಉಲ್ಲಂಘನೆ ಮಾಡಲಾಗಿದೆ. 26.9.2023ರಂದು ಈ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದ್ದಾರೆ. ರಥೋತ್ಸವದ ವೇಳೆ ರಥದ ಮೇಲೆ ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳನ್ನು ಕೂಡಿಸಿ, ಭಾಷಣ ಮಾಡಿಸುವ ಮೂಲಕ ರಥೋತ್ಸವ ವಿಳಂಬವಾಗುವಂತೆ ಮಾಡಲಾಗುತ್ತಿದೆ. ವರ್ಷಕ್ಕೊಮ್ಮೆ ನಡೆಯುವ ಪವಿತ್ರ ತೈಲಾಭಿಷೇಕದ ವೇಳೆಯೂ ಧಾರ್ಮಿಕ ಆಚರಣೆಗಳನ್ನು ಅಪವಿತ್ರ ಗೊಳಿಸಲಾಗುತ್ತಿದೆ ಎಂದು ರಾಜೇಂದ್ರ ಪ್ರಸಾದ ಆರೋಪಿಸಿದ್ದಾರೆ.
- - -