ಉಳ್ಳಾಲ: ಸ್ತಬ್ಧಚಿತ್ರಗಳಲ್ಲಿ ಅಳವಡಿಸಿದ್ದ ಧ್ವನಿವರ್ಧಕ ತಡರಾತ್ರಿ ಬಳಸದಂತೆ ನಿಲ್ಲಿಸಿದ ಉಳ್ಳಾಲ ಪೊಲೀಸರ ಹಾಗೂ ಸ್ತಬ್ದಚಿತ್ರ ಬಳಿಯಿದ್ದ ಯುವಕರ ನಡುವೆ ನಡೆದ ವಾಗ್ವಾದದಿಂದ ಮೂವರನ್ನು ವಶಕ್ಕೆ ಪಡೆದ ಘಟನೆಯಿಂದ ಠಾಣೆಯೆದುರೇ ಇಡೀ ಭಕ್ತಸಮೂಹ ಎರಡೂವರೆ ಗಂಟೆಗಳ ಕಾಲ ತಡರಾತ್ರಿಯೇ ಕುಳಿತು ಪ್ರತಿಭಟಿಸಿದ ಘಟನೆ ಉಳ್ಳಾಲ ಪೊಲೀಸ್ ಠಾಣೆಯೆದುರು ಶುಕ್ರವಾರ ನಸುಕಿನ ಜಾವ ಸಂಭವಿಸಿದೆ. ವಶದಲ್ಲಿದ್ದ ಇಬ್ಬರನ್ನು ಬಿಡುಗಡೆಗೊಳಿಸಿದ ನಂತರ ಶೋಭಾಯಾತ್ರೆ ಮುಂದುವರಿದು ಬೆಳಗ್ಗಿನ ವೇಳೆ ಶಾರದಾ ಮೂರ್ತಿಯ ವಿಸರ್ಜನೆ ನಡೆದಿದೆ.ಘಟನೆ ಹಿನ್ನೆಲೆ:
ಈ ವೇಳೆ ಪೊಲೀಸ್ ಹಾಗೂ ಭಕ್ತಸಮೂಹದ ನಡುವೆ ಮಾತಿಗೆ ಮಾತು ಬೆಳೆದು ರಕ್ಷಿತ್, ಆಶಿಶ್ ಮತ್ತು ಅಶ್ವತ್ಥ್ ಎಂಬ ಮೂವರು ಯುವಕರನ್ನು ಕೆಲ ಪರಿಕರಗಳೊಂದಿಗೆ ಪೊಲೀಸರು ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿರಿಸಿದ್ದರು. ಇದರಿಂದ ಆಕ್ರೋಶಗೊಂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಸೇರಿದಂತೆ ೧೦೦ ಕ್ಕೂ ಅಧಿಕ ಮಂದಿ ಉಳ್ಳಾಲ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ಶಾರದಾ ವಿಗ್ರಹವನ್ನು ರಸ್ತೆಯಲ್ಲಿಯೇ ನಿಲ್ಲಿಸಿ ವಶಕ್ಕೆ ಪಡೆದುಕೊಂಡ ಮೂವರು ಯುವಕರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದ ಉಳ್ಳಾಲದ ಪೊಲೀಸರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎಸಿಪಿ ವಿಜಯಕ್ರಾಂತಿ, ಡಿಸಿಪಿ ಮಿಥುನ್ ಹೆಚ್.ಎನ್ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರೂ ಸಫಲವಾಗಲಿಲ್ಲ.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡ ಸಂತೋಷ್ ರೈ ಬೋಳಿಯಾರ್, ಮೊಗವೀರ ಮುಖಂಡ ಯಶವಂತ್ ಅಮೀನ್ ಠಾಣೆಗೆ ಭೇಟಿ ನೀಡಿ ಬಂಧಿತರ ಬಿಡುಗಡೆಗೆ ಒತ್ತಾಯಿಸಿದರು. ಅದಕ್ಕೂ ಪೊಲೀಸರು ಒಪ್ಪದೇ ಇದ್ದಾಗ ನಾಯಕರು ಮುಂದಿನ ಪರಿಣಾಮಗಳನ್ನು ನೀವೇ ಎದುರಿಸಿರಿ ಎಂದು ಹೊರನಡೆದಿದ್ದಾರೆ.ಆದರೆ ಪಟ್ಟುಬಿಡದ ಭಕ್ತಸಮೂಹ ಪ್ರತಿಭಟನೆ ಮುಂದುವರಿಸಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ೪.೩೦ ರ ಸುಮಾರಿಗೆ ವಶದಲ್ಲಿರುವ ಆಶೀಶ್ ಮತ್ತು ಅಶ್ವತ್ ಇಬ್ಬರನ್ನು ಬಿಡುಗಡೆಗೊಳಿಸಿದರು. ರಕ್ಷಿತ್ ವಿರುದ್ಧ ಈಗಾಗಲೇ ಪ್ರಕರಣಗಳಿದ್ದು, ಇದೀಗ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿರುವುದರಿಂದ ಬಂಧಿಸಲಾಗಿದೆ. ದಸರಾ ಶೋಭಾಯಾತ್ರೆಯಲ್ಲಿ ಉಳ್ಳಾಲ ಪೊಲೀಸರು ಠಾಣೆಯ ಮುಂಭಾಗದಲ್ಲಿ ಶಾರದಾ ಮಾತೆಗೆ ಹೂ ಹಣ್ಣು ಸಮರ್ಪಿಸಿ ಮಂಗಳಾರತಿ ಸಲ್ಲಿಸುವುದು ವಾಡಿಕೆಯಾಗಿದೆ. ಈ ಬಾರಿ ಪೊಲೀಸರು ಟ್ಯಾಬ್ಲೋ ಸಂಚಾರಕ್ಕೆ ಅಡ್ಡಿಪಡಿಸಿದ್ದರಿಂದ ಅಸಮಧಾನಗೊಂಡಿದ್ದ ಶಾರದೆಯ ಪಲ್ಲಕ್ಕಿ ಹೊತ್ತಿದ್ದ ಭಜಕರ ತಂಡವು ಪೊಲೀಸ್ ಠಾಣೆಯ ಮುಂದೆ ಮಂಗಳಾರತಿಗೆ ಅವಕಾಶ ನೀಡದೆ ಮುಂದಕ್ಕೆ ತೆರಳಿದ್ದಾರೆ.