ಕೋಟೆಕಾರು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ: ಆರು ಮಂದಿ ಸದಸ್ಯರು ಗೈರು

KannadaprabhaNewsNetwork |  
Published : Mar 01, 2026, 03:30 AM IST
ಕೋಟೆಕಾರು ಪ.ಪಂ.ಸಭೆ | Kannada Prabha

ಸಾರಾಂಶ

ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಉಚ್ಚಾಟನೆಗೊಂಡ ಸದಸ್ಯ ಸುಜಿತ್ ಮಾಡೂರು ಪರವಾಗಿ ಆಡಳಿತ ಪಕ್ಷದ ಆರು ಮಂದಿ ಸದಸ್ಯರು ಶುಕ್ರವಾರ ನಡೆದ ಸಾಮಾನ್ಯ ಸಭೆಗೆ ಗೈರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಬೆಳವಣಿಗೆ ಪಟ್ಟಣ ಪಂಚಾಯತಿ ಆಡಳಿತದಲ್ಲಿ ರಾಜಕೀಯ ಅಸ್ಥಿರತೆಗೆ ದಾರಿ ಮಾಡಿಕೊಡುವ ಸೂಚನೆ

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಉಚ್ಚಾಟನೆಗೊಂಡ ಸದಸ್ಯ ಸುಜಿತ್ ಮಾಡೂರು ಪರವಾಗಿ ಆಡಳಿತ ಪಕ್ಷದ ಆರು ಮಂದಿ ಸದಸ್ಯರು ಶುಕ್ರವಾರ ನಡೆದ ಸಾಮಾನ್ಯ ಸಭೆಗೆ ಗೈರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಬೆಳವಣಿಗೆ ಪಟ್ಟಣ ಪಂಚಾಯತಿ ಆಡಳಿತದಲ್ಲಿ ರಾಜಕೀಯ ಅಸ್ಥಿರತೆಗೆ ದಾರಿ ಮಾಡಿಕೊಡುವ ಸೂಚನೆ ಎದ್ದು ಕಾಣುತ್ತಿದೆ. ಕಳೆದ ಒಂದೂವರೆ ವರ್ಷಗಳಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದಡಿ ಹಾಗೂ ಇತ್ತೀಚಿನ ಸಾಮಾನ್ಯ ಸಭೆಯಲ್ಲಿ ಎಸ್ಡಿಪಿಐ ಸದಸ್ಯೆಯೊಂದಿಗೆ ಸೇರಿ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂಬ ಕಾರಣ ನೀಡಿ ಸುಜಿತ್ ಮಾಡೂರು ಅವರನ್ನು ಫೆ.19 ರಂದು ಜಿಲ್ಲಾ ಬಿಜೆಪಿ ಸಮಿತಿ ಉಚ್ಚಾಟಿಸಿತ್ತು. ಆದರೆ, ತಾನು ಬಡ ನಿವೇಶನ ರಹಿತರ ಪರವಾಗಿ ಅಧಿಕಾರಿಗಳ ವಿರುದ್ಧವೇ ಧ್ವನಿ ಎತ್ತಿದ್ದೇನೆ ಹೊರತು ಬಿಜೆಪಿ ವಿರುದ್ಧ ಅಲ್ಲ ಎಂದು ಸುಜಿತ್ ಮಾಧ್ಯಮಗಳಲ್ಲಿ ಸ್ಪಷ್ಟಪಡಿಸಿದ್ದರು.

ಇಂದು ನಡೆದ ಸಾಮಾನ್ಯ ಸಭೆಗೆ ಸುಜಿತ್ ಸೇರಿದಂತೆ ಬಿಜೆಪಿ ಕೌನ್ಸಿಲರ್‌ಗಳಾದ ಭವಾನಿ ದೇವದಾಸ್, ಕಿರಣ್, ಅನಿತಾ, ಜಗದೀಶ್ ಹಾಗೂ ನವೀನ್ ಕೊಂಡಾಣ ಗೈರಾಗಿದ್ದರು. ಸುಜಿತ್ ಅವರು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ; ಅವರು ಸದಾ ಬಡ ನಿವೇಶನ ರಹಿತರ ಪರವಾಗಿ ಮಾತಾಡಿದ್ದಾರೆ ಎಂದು ಈ ಆರು ಮಂದಿ ಸದಸ್ಯರು ಪಕ್ಷದ ನಾಯಕರಿಗೆ ಮನವರಿಕೆ ಮಾಡಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಶಕ್ತಿ ಪ್ರದರ್ಶನ ನಡೆಸಲಾಗಿದೆ ಎಂದು ತಿಳಿದು ಬಂದಿದೆ.17 ಸದಸ್ಯ ಬಲದ ಕೋಟೆಕಾರು ಪ.ಪಂನಲ್ಲಿ 11 ಸದಸ್ಯರೊಂದಿಗೆ ಬಿಜೆಪಿ 2024ರ ಆಗಸ್ಟ್‌ನಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಇದೀಗ ಉಚ್ಚಾಟನೆಯ ನಂತರ ನಡೆದ ಸಭೆಯಲ್ಲಿ ಅಧ್ಯಕ್ಷೆ ದಿವ್ಯ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಬಗಂಭಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಕುಸಾಲ್ ನಗರ ಹಾಗೂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಶೆಟ್ಟಿ ಸೇರಿ ಕೇವಲ ನಾಲ್ವರು ಸದಸ್ಯರು ಮಾತ್ರ ಭಾಗವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ಪಕ್ಷೇತರ ಕೌನ್ಸಿಲರ್ ಹರೀಶ್ ರಾವ್, ಸುಜಿತ್ ಮಾಡೂರು ಅವರು ಬಡ ನಿವೇಶನ ರಹಿತರ ಪರವಾಗಿ ಧ್ವನಿ ಎತ್ತಿರುವುದು ಎಲ್ಲರಿಗೂ ತಿಳಿದ ವಿಷಯ ಎಂದು ಹೇಳಿದರು. ಕಳೆದ ಒಂದೂವರೆ ವರ್ಷಗಳಿಂದ ಪ್ರತೀ ಸಭೆಯಲ್ಲೂ ನಿವೇಶನ ವಿಚಾರ ಪ್ರಸ್ತಾಪವಾಗುತ್ತಿದ್ದರೂ ಆಡಳಿತದಿಂದ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು. ಕನಿಷ್ಠ ಆರು ಮಂದಿ ಸದಸ್ಯರ ಹಾಜರಾತಿ ಇಲ್ಲದೆ ಸಭೆ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಅಧ್ಯಕ್ಷರು ವಿಶ್ವಾಸ ಮತಕ್ಕೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ದಿವ್ಯ ಶೆಟ್ಟಿ, ಸುಜಿತ್ ಮಾಡೂರು ಉಚ್ಚಾಟನೆ ಪಕ್ಷಕ್ಕೆ ಸಂಬಂಧಿಸಿದ ವಿಚಾರ ಅದರ ಬಗ್ಗೆ ಇಲ್ಲಿ ಚರ್ಚೆ ಬೇಡ.ಪಟ್ಟಣ ವ್ಯಾಪ್ತಿಯ ಕಾಯರ್ ಮಜಲ್ ಎಂಬಲ್ಲಿನ ಜಮೀನನ್ನು ನಿವೇಶನ ರಹಿತರು ಮತ್ತು ತ್ಯಾಜ್ಯ ಘಟಕ ನಿರ್ಮಾಣಕ್ಕೆ ಕಾಯ್ದಿರಿಸಲಾಗಿತ್ತು. ಮನೆ ನಿವೇಶನ ಮತ್ತು ತ್ಯಾಜ್ಯ ವಿಲೇವಾರಿ ಘಟಕವನ್ನು ಒಂದೇ ಸರ್ವೇ ಸಂಖ್ಯೆಯಡಿ ಕಾಯ್ದಿರಿಸಿದ ಕಾರಣ ಸ್ಥಳೀಯರು ತ್ಯಾಜ್ಯ ಘಟಕ ನಿರ್ಮಾಣ ವಿರುದ್ಧ ಹೈಕೋರ್ಟ್ ನಲ್ಲಿ ಆಕ್ಷೇಪಣೆ ಸಲ್ಲಿಸಿ ತಡೆಯಾಜ್ನೆ ತಂದಿದ್ದರು.ಹೈ ಕೋರ್ಟ್ ತಡೆಯಾಜ್ನೆ ತೆರವುಗೊಳಿಸಲು ನಾವು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಬದಲಿ ಜಾಗ ನೀಡಬೇಕಿದೆ.ಹೀಗಾಗಿ ಅರ್ಜಿದಾರರಿಗೆ ನಿವೇಶನ ಹಂಚಲು ತೊಡಕುಂಟಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಂಚನೆಗೆ ಬ್ಯಾಂಕ್ ಖಾತೆ ಬಳಕೆ: ಅಂತಾರಾಜ್ಯ ಸೈಬರ್ ಕ್ರೈಂ ಜಾಲ ಬಯಲು
ವಿಕಲಚೇತನರಿಗೆ ತ್ವರಿತಗತಿಯಲ್ಲಿ ಸೌಲಭ್ಯ ಮಂಜೂರು: ಟಿ.ಎಂ. ಶಾಹೀದ್