ಅನಧಿಕೃತವಾಗಿ ನವಲಗುಂದ ಗುಡ್ಡ ಅಗೆತ: ನಾಗರಿಕರ ಆಕ್ರೋಶ

KannadaprabhaNewsNetwork |  
Published : Aug 05, 2024, 12:31 AM IST
ನವಲಗುಂದ ಗುಡ್ಡದಲ್ಲಿ ಅನಧಿಕೃತವಾಗಿ ಜೆಸಿಬಿಯಿಂದ ಗುಡ್ಡ ಅಗೆಯುತ್ತಿರುವ ದೃಶ್ಯ  | Kannada Prabha

ಸಾರಾಂಶ

ಗುಡ್ಡದಲ್ಲಿ ಸ್ಥಗಿತಗೊಂಡಿದ್ದ ಗಣಿಗಾರಿಕೆ ಮತ್ತೆ ಕಳೆದ ಒಂದು ವಾರದಿಂದ ಆರಂಭಿಸಿದ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನವಲಗುಂದ: ಗುಡ್ಡದಲ್ಲಿ ಸ್ಥಗಿತಗೊಂಡಿದ್ದ ಗಣಿಗಾರಿಕೆ ಮತ್ತೆ ಕಳೆದ ಒಂದು ವಾರದಿಂದ ಆರಂಭಿಸಿದ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನ ಎಲ್ಲ ಗ್ರಾಮಾಂತರ ಪ್ರದೇಶಗಳಿಗೆ ಮನೆ ಕಟ್ಟಲು ಕಲ್ಲು, ಕಡಿ ಪೂರೈಕೆಯಾಗುತ್ತಿದ್ದ ನವಲಗುಂದ ಗುಡ್ಡದಲ್ಲಿ ನಡೆಯತ್ತಿದ್ದ ಗಣಿಗಾರಿಕೆ ಕಳೆದ ಸುಮಾರು 16ರಿಂದ 18 ವರ್ಷಗಳಿಂದ ಸ್ಥಗಿತಗೊಂಡಿತ್ತು. ಹೀಗಾಗಿ, ಪಟ್ಟಣದ ಜನತೆ ಪಕ್ಕದ ಅಣ್ಣಿಗೇರಿ ಅಥವಾ ನರಗುಂದ, ಸವದತ್ತಿ, ಹಿರೇಕುಂಬಿ ಸೇರಿದಂತೆ ಅನೇಕ ಪಟ್ಟಣಗಳಿಗೆ ತೆರಳಿ ದುಬಾರಿ ಹಣ ಕೊಟ್ಟು ಕಲ್ಲು, ಕಡಿ ತರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಕಳೆದ ವಾರದಿಂದ ಗುಡ್ಡದಲ್ಲಿ ಅನಧಿಕೃತವಾಗಿ ಮರ್ರಂ ಅಗೆಯುತ್ತಿದ್ದರೂ ಅಧಿಕಾರಿಗಳಾಗಲಿ, ಸಂಬಂಧಪಟ್ಟ ಇಲಾಖೆಯವರಾಗಲಿ ಮೌನಕ್ಕೆ ಶರಣಾಗಿರುವುದು ಹಲವರಲ್ಲಿ ಸಂಶಯಗಳಿಗೆ ಕಾರಣವಾಗಿದೆ.

ಪುರಸಭೆ ಮಾಲೀಕತ್ವದಲ್ಲಿನ ಸರ್ವೆ ನಂಬರ್‌ 499/1ರಲ್ಲಿ ಪಟ್ಟಣದಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಗುಡ್ಡ ಆವರಿಸಿಕೊಂಡಿದೆ. ಈ ಗುಡ್ಡದ ಮುಂಭಾಗದಲ್ಲಿ ದೊರಕುವ ಸಮೃದ್ಧವಾದ ಮುರ್ರಂಗೆ ಬಹುಬೇಡಿಕೆ ಇದ್ದು, ಪ್ರಸ್ತುತ ಪ್ರಭಾವಿ ಗುತ್ತಿಗೆದಾರರೊಬ್ಬರು ಪುರಸಭೆಯಿಂದಾಲಿ ಅಥವಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದಾಗಲಿ ಪರವಾನಗಿ ಪಡೆಯದೇ 2ರಿಂದ 3 ಜೆಸಿಬಿಗಳಿಂದ ಗುಡ್ಡವನ್ನು ಅಗೆದು ಸಾಗಿಸುತ್ತಿದ್ದಾರೆ ಎಂದು ಪಟ್ಟಣದ ನಾಗರಿಕರು ಆರೋಪಿಸಿದ್ದಾರೆ.

ಪಟ್ಟಣದ ನಾಗರಿಕರು ಒಂದು ಚಕ್ಕಡಿಯಷ್ಟು ಮರ್ರಂ ಅಗೆದರೆ ದಂಢ ವಿಧಿಸುವ ಪುರಸಭೆ ಅಧಿಕಾರಿಗಳು ಪ್ರಸ್ತುತ ಸಾವಿರಾರು ಟಿಪ್ಪರನಷ್ಟು ಮುರ್ರಂ ಅಗೆದರೂ ಕ್ರಮ ಕೈಗೊಳ್ಳದಿರುವುದೂ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೋರಾಟ

ಬಡವರ ಮೇಲೆ ಬ್ರಹ್ಮಾಸ್ತ್ರ ಹೂಡುವ ಅಧಿಕಾರಿಗಳು ಜೆಸಿಬಿ ಬಳಸಿ ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಮುಖಾಂತರ ಮರ್ರಂ ತೆಗೆದವರ ವಿರುದ್ಧ ಕ್ರಮ ಕೈಗೊಳ್ಳಲಿ. ಈ ನವಲಗುಂದ ಗುಡ್ಡ ಅಗೆತದಲ್ಲಿ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಯಾರೇ ಪ್ರಭಾವಿ ವ್ಯಕ್ತಿಯಾದರೂ ಅನಧಿಕೃತವಾಗಿ ಗುಡ್ಡ ಅಗೆದವರ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದರೆ ಹೋರಾಟ ನಡೆಸಲಾಗುವುದು.

ಮೈಲಾರಪ್ಪ ವೈದ್ಯ, ರೈತ ಮುಖಂಡ

ಅಧಿಕಾರ ದುರ್ಬಳಕೆ

ಪುರಸಭೆಯಾಗಲಿ ಅಥವಾ ಭೂ ವಿಜ್ಞಾನ ಇಲಾಖೆಯಿಂದಾಗಲಿ ಪರವಾನಗಿ ಪಡೆಯದೇ ಗುಡ್ಡವನ್ನು ಅಗೆಯುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಪುರಸಭೆ ಆದಾಯಕ್ಕೆ ಧಕ್ಕೆ ತರುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

ಶರಣಪ್ಪ ಹಕ್ಕರಕಿ, ಪುರಸಭೆ ಸದಸ್ಯಪರಿಶೀಲನೆ

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದ್ದು, ಗುಡ್ಡದಲ್ಲಿ ಅಗೆದ ಮರ್ರಂನ್ನು ಪಟ್ಟಣದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದು, ಈ ಕುರಿತು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಅವರಿಂದ ಲಿಖಿತ ರೂಪದಲ್ಲಿ ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಸುಧೀರ ಸಾಹುಕಾರ, ತಾಲೂಕು ದಂಡಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿಲ್ಲಿಯಲ್ಲಿ ಡಿಕೆಶಿ ರಾಜ್ಯ ನೀರಾವರಿ ಸಭೆ
ಗ್ಯಾಸ್ ಇಲ್ಲದೇ ಬೆಳಗಾವಿಯ 60 + ಕೈಗಾರಿಕೆ ಬಂದ್‌ ಹಂತಕ್ಕೆ