ಟಿಎಲ್‌ಬಿಸಿ ಉಪಕಾಲುವೆಗೆ ಅನಧಿಕೃತ ಪೈಪ್‌ ಅಳವಡಿಕೆ

KannadaprabhaNewsNetwork |  
Published : Feb 22, 2024, 01:45 AM IST
20ಕೆಪಿಕೆವಿಟಿ03: | Kannada Prabha

ಸಾರಾಂಶ

ಕವಿತಾಳ ಸಮೀಪದ ಚಿಕ್ಕದಿನ್ನಿ ಗ್ರಾಮದ ಹತ್ತಿರದ ತುಂಗಭದ್ರಾ ಎಡದಂಡೆ ಉಪ ಕಾಲುವೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದರು. ಅಧಿಕಾರಿಗಳು ಕೆಲ ರೈತರೊಂದಿಗೆ ಶಾಮೀಲಾಗಿ ಅಕ್ರಮವಾಗಿ ನೀರು ಬಳಸುತ್ತಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಲಾಯಿತು.

ಕನ್ನಡಪ್ರಭ ವಾರ್ತೆ ಕವಿತಾಳ

ಸಮೀಪದ ಚಿಕ್ಕದಿನ್ನಿ ಗ್ರಾಮದ ಹತ್ತಿರದ ತುಂಗಭದ್ರಾ ಎಡದಂಡೆ ಉಪ ಕಾಲುವೆಗೆ ಅನಧಿಕೃತ ಪೈಪ್‌ಗಳನ್ನು ಅಳವಡಿಸಿಕೊಂಡು ನೀರು ದುರ್ಬಳಕೆ ಮಾಡಲಾಗುತ್ತಿದೆ ಎನ್ನುವ ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮದ ಮಹೇಶ ನಾಯಕ ಎನ್ನುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಲೋಕಾಯುಕ್ತದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಯೋಗೀಶ ಎಂ. ಅವರು ಕಾಲುವೆ ಪರಿಶೀಲಿಸಿ ದೂರುದಾರರು ಮತ್ತು ರೈತರೊಂದಿಗೆ ಮಾಹಿತಿ ಪಡೆದರು.

ಅಕ್ರಮ ಪೈಪ್ ಅಳವಡಿಕೆ ಹಾಗೂ ಕಾಲುವೆ ನೀರು ಅಕ್ರಮ ಬಳಕೆ ಕುರಿತು 2018ರಿಂದ ದೂರು ನೀಡುತ್ತಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಕೆಲವು ರೈತರೊಂದಿಗೆ ಶಾಮೀಲಾಗಿ ಅಕ್ರಮವಾಗಿ ನೀರು ಬಳಸಿಕೊಳ್ಳಲು ಅವಕಾಶ ನೀಡುತ್ತಿದ್ದಾರೆ. ಹೀಗಾಗಿ ಲೋಕಾಯುಕ್ತಕ್ಕೆ ದೂರು ನೀಡಲಾಯಿತು ಎಂದು ದೂರುದಾರ ಮಹೇಶ ನಾಯಕ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರೈತರಾದ ಶಿವರಾಜ ಪಾಟೀಲ್, ಶರಣಪ್ಪ, ಸಿದ್ದಪ್ಪ ನಾಯಕ ಮತ್ತು ಮರಿಸಿದ್ದಪ್ಪ ಇತರರು ಎರಡು ವರ್ಷಗಳ ಹಿಂದೆಯೇ ಅಧಿಕಾರಿಗಳು ಪೈಪ್ ತೆರವುಗೊಳಿಸಿದ್ದಾರೆ. ಸುತ್ತಮುತ್ತಲಿನ ಜಮೀನುಗಳ ರೈತರು ಹೊಂದಾಣಿಕೆ ಮೇಲೆ ನೀರು ಬಳಕೆ ಮಾಡಲಾಗುತ್ತಿದೆ. ಈ ರೀತಿ ದೂರು ನೀಡುವ ಮೂಲಕ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಪರಸ್ಪರ ವಾಗ್ವಾದ ಮಾಡಿದರು.

ಈ ಸಂದರ್ಭದಲ್ಲಿ ನೀವೆ ಈ ರೀತಿ ವಾಗ್ವಾದ ಮಾಡಿದರೆ ನಾವು ಪರಿಶೀಲನೆ ಮಾಡುವುದು ಹೇಗೆ ಎಂದ ಲೋಕಾಯುಕ್ತ ಅಧಿಕಾರಿ, ದೂರುದಾರರು ರೈತರಿಂದ ಮಾಹಿತಿ ಪಡೆದರು. ಸ್ಥಳದಲ್ಲಿದ್ದ ನೀರಾವರಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಪಟ್ಟಣದ ನೀರಾವರಿ ಇಲಾಖೆ ಕಚೇರಿಯಲ್ಲಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದರು. ಸಮಗ್ರ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಅಂದಿನ ಇಇ ಶರಣಪ್ಪ, ಸಿರವಾರ ಇಇ ವಿಜಯಲಕ್ಷ್ಮೀ ಪಾಟೀಲ್ ಮತ್ತು ಜೆಇ ಮೆಹಬೂಬಸಾಬ್ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ