ಆರೋಪಿಸುವ ಮುನ್ನ ಸಂಗತಿ ಅರಿತುಕೊಳ್ಳಲಿ: ಶಾಸಕ ಭೀಮಣ್ಣ ನಾಯ್ಕ ತಿರುಗೇಟು

KannadaprabhaNewsNetwork |  
Published : Aug 11, 2025, 12:38 AM IST
ಪೊಟೋ೯ಎಸ್.ಆರ್.ಎಸ್೭ (ಸುದ್ದಿಗೋಷ್ಠಿಯಲ್ಲಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿದರು.) | Kannada Prabha

ಸಾರಾಂಶ

ಶಿರಸಿ ನಗರಸಭೆಯಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ, ಇದರ ಬಗ್ಗೆ ಏಕೆ ಮಾತನಾಡುತ್ತಿಲ್ಲ?

ಶಿರಸಿ: ನಗರದಲ್ಲಿ ರಸ್ತೆಗಳಲ್ಲಿ ಹೊಂಡ ಬಿದ್ದಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಆರೋಪ ಮಾಡುವ ಪೂರ್ವದಲ್ಲಿ ಕೆಲವಷ್ಟು ಸಂಗತಿಗಳನ್ನು ಅರಿತುಕೊಳ್ಳಲಿ ಎಂದು ಶಾಸಕ ಭೀಮಣ್ಣ ನಾಯ್ಕ ತಿರುಗೇಟು ನೀಡಿದರು.

ಅವರು ಶನಿವಾರ ನಗರದ ಶಾಸಕರ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿರಸಿ ನಗರಸಭೆಯಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ, ಇದರ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಹೀಗೆ ಗುಂಡಿ ಬೀಳುವುದಕ್ಕೆ ಹಿಂದೆ ಅಧಿಕಾರದಲ್ಲಿದ್ದಾಗ ಎಷ್ಟು ಗುಣಮಟ್ಟದ ಕಾಮಗಾರಿ ಮಾಡಿದ್ದೀರಿ ಎಂದು ಪ್ರಶ್ನಿಸಬೇಕಾಗುತ್ತದೆ. ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯು ಕೇಂದ್ರ ಸರ್ಕಾರಕ್ಕೆ ಸೇರಿದೆ. ನಾನೂ ಸಂಸದರ ಮೇಲೆ ಆಕ್ಷೇಪ ಹೇರಬಹುದಿತ್ತು. ಆದರೆ, ರಸ್ತೆಯನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಮುಚ್ಚಲು ಸಾಧ್ಯವಿಲ್ಲ. ರಸ್ತೆ ನಿರ್ಮಾಣಕ್ಕೆ ಗುತ್ತಿಗೆ ಪಡೆದವರು ಮಾಡಬೇಕು. ಅವರ ಮೇಲೆ ಒತ್ತಡ ಹೇರಬೇಕೇ ಹೊರತು ಸಂಸದರನ್ನು ದೂಷಿಸುವುದಲ್ಲ. ಆರೋಪಿಸುವ ಮೊದಲು ಪೂರ್ವಾಪರ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ಶಿರಸಿ ವಿಭಾಗದ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ೧೦ ಲಕ್ಷ ಕಿ.ಮೀ. ಓಡಿದ ಬಸ್‌ಗಳೇ ಜಾಸ್ತಿ ಎಂದು ನನ್ನ ಮೇಲೆ ಆರೋಪಿಸುತ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಿಗಮಗಳಿಗೆ ಹೊಸ ಬಸ್ ನೀಡದ ಕಾರಣದಿಂದ ಹಳೇ ಬಸ್‌ಗಳು ಮಾತ್ರ ಇಂದಿವೆ. ನಮ್ಮ ಸರ್ಕಾರದ ಅವಧಿಯಲ್ಲೇ ಹೊಸ ಬಸ್‌ಗಳನ್ನು ನೀಡುತ್ತಿದ್ದು, ಶೀಘ್ರದಲ್ಲಿಯೇ ಇನ್ನೊಂದಿಷ್ಟು ಹೊಸ ಬಸ್ಸುಗಳು ಬರಲಿವೆ ಎಂದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ಸಾಗಿವೆ. ಆದರೆ, ಇನ್ನು ಆಗಬೇಕಾದ ಕಾರ್ಯಗಳು ಇವೆ. ಜಿಲ್ಲೆಯ ಬಡ ಜನತೆಗೆ ಇನ್ನಷ್ಟು ಹೆಚ್ಚಿನ ಆಶ್ರಯ ಮನೆಗಳನ್ನು ಒದಗಿಸಿಕೊಡಬೇಕಿದೆ. ಕೆಲ ಹಳ್ಳಿಗಳಿಗೆ ಸಣ್ಣ ಸಣ್ಣ ಫುಟ್ ಬ್ರಿಜ್ ಮಾದರಿಯ ಸೇತುವೆಗಳನ್ನು ನಿರ್ಮಿಸಿ ಅವರ ಸಂಪರ್ಕಕ್ಕೆ ಆದ್ಯತೆ ನೀಡಬೇಕಿದೆ. ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳ ಪಟ್ಟಿಯನ್ನು ಈಗಾಗಲೇ ಮಾಡಿಕೊಂಡಿದ್ದು, ಅಧಿವೇಶನದಲ್ಲಿ ಚರ್ಚೆ ನಡೆಸಲಿದ್ದೇನೆ ಎಂದರು.

ಇತ್ತೀಚೆಗಷ್ಟೇ ೧೨ ಶಾಸಕರ ನಿಯೋಗದಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದು, ಅಲ್ಲಿಯ ಕೆಲ ಕಾರ್ಯಗಳನ್ನು ನಮ್ಮ ಕ್ಷೇತ್ರದಲ್ಲಿಯೂ ಅಳವಡಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೇನೆ. ಶಿಕ್ಷಣಕ್ಕೆ ಅಮೆರಿಕದಲ್ಲಿ ಆದ್ಯತೆ ನೀಡಲಾಗುತ್ತಿದೆ. ಅದೇ ರೀತಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅಲ್ಲಿಯ ಕೆಲ ತಂತ್ರಜ್ಞಾನ ಅಳವಡಿಸಿಕೊಳ್ಳಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಬಂಡಳ ಗ್ರಾಪಂ ಅಧ್ಯಕ್ಷ ದೇವರಾಜ ಮರಾಠಿ, ಶಿರಸಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗಣೇಶ ದಾವಣಗೆರೆ, ಪ್ರಮುಖರಾದ ಎಸ್.ಕೆ. ಭಾಗ್ವತ್, ಜ್ಯೋತಿ ಪಾಟೀಲ ಇದ್ದರು.

ಬೆಟ್ಟ ಭೂಮಿ ಪಹಣಿಯಲ್ಲಿ ಬ ಕರಾಬ್ ಎಂದು ನಮೂದಾಗುವಾಗ ಯಾವ ಸರ್ಕಾರ ಅಧಿಕಾರದಲ್ಲಿ ಇತ್ತು, ಯಾರ ಶಾಸಕರಿದ್ದರು? ಹೀಗೆ ಹೇಳುತ್ತಾ ಹೋದರೆ ನಾವೂ ಹೇಳಬಹುದು. ಆದರೆ ಬೇರೆಯವರ ಬಗ್ಗೆ ಬೊಟ್ಟು ತೋರಿಸುವ ರಾಜಕಾರಣಿ ನಾನಲ್ಲ. ನಾವು ಪ್ರಶ್ನೆ ಮಾಡುತ್ತಾ ಕೂರಲು ಆಗುವುದಿಲ್ಲ. ಎಲ್ಲರೂ ಸೇರಿ ಸರಿಪಡಿಸಬೇಕಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನೇದಿನೇ ಏರುತ್ತಿರುವ ಚಿನ್ನದ ದರ ಇಳಿಯಲಿ ಎಂದು ಭಕ್ತನ ಹರಕೆ !
₹70 ಲಕ್ಷ ವಿದ್ಯುತ್‌ ಬಿಲ್‌ ಬಾಕಿ: ಸಿದ್ಧಗಂಗಾ ಮಠಕ್ಕೆ ನೀರು ಬಂದ್‌!