ಶಿರಸಿ: ನಗರದಲ್ಲಿ ರಸ್ತೆಗಳಲ್ಲಿ ಹೊಂಡ ಬಿದ್ದಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಆರೋಪ ಮಾಡುವ ಪೂರ್ವದಲ್ಲಿ ಕೆಲವಷ್ಟು ಸಂಗತಿಗಳನ್ನು ಅರಿತುಕೊಳ್ಳಲಿ ಎಂದು ಶಾಸಕ ಭೀಮಣ್ಣ ನಾಯ್ಕ ತಿರುಗೇಟು ನೀಡಿದರು.
ಶಿರಸಿ ವಿಭಾಗದ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ೧೦ ಲಕ್ಷ ಕಿ.ಮೀ. ಓಡಿದ ಬಸ್ಗಳೇ ಜಾಸ್ತಿ ಎಂದು ನನ್ನ ಮೇಲೆ ಆರೋಪಿಸುತ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಿಗಮಗಳಿಗೆ ಹೊಸ ಬಸ್ ನೀಡದ ಕಾರಣದಿಂದ ಹಳೇ ಬಸ್ಗಳು ಮಾತ್ರ ಇಂದಿವೆ. ನಮ್ಮ ಸರ್ಕಾರದ ಅವಧಿಯಲ್ಲೇ ಹೊಸ ಬಸ್ಗಳನ್ನು ನೀಡುತ್ತಿದ್ದು, ಶೀಘ್ರದಲ್ಲಿಯೇ ಇನ್ನೊಂದಿಷ್ಟು ಹೊಸ ಬಸ್ಸುಗಳು ಬರಲಿವೆ ಎಂದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ಸಾಗಿವೆ. ಆದರೆ, ಇನ್ನು ಆಗಬೇಕಾದ ಕಾರ್ಯಗಳು ಇವೆ. ಜಿಲ್ಲೆಯ ಬಡ ಜನತೆಗೆ ಇನ್ನಷ್ಟು ಹೆಚ್ಚಿನ ಆಶ್ರಯ ಮನೆಗಳನ್ನು ಒದಗಿಸಿಕೊಡಬೇಕಿದೆ. ಕೆಲ ಹಳ್ಳಿಗಳಿಗೆ ಸಣ್ಣ ಸಣ್ಣ ಫುಟ್ ಬ್ರಿಜ್ ಮಾದರಿಯ ಸೇತುವೆಗಳನ್ನು ನಿರ್ಮಿಸಿ ಅವರ ಸಂಪರ್ಕಕ್ಕೆ ಆದ್ಯತೆ ನೀಡಬೇಕಿದೆ. ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳ ಪಟ್ಟಿಯನ್ನು ಈಗಾಗಲೇ ಮಾಡಿಕೊಂಡಿದ್ದು, ಅಧಿವೇಶನದಲ್ಲಿ ಚರ್ಚೆ ನಡೆಸಲಿದ್ದೇನೆ ಎಂದರು.ಇತ್ತೀಚೆಗಷ್ಟೇ ೧೨ ಶಾಸಕರ ನಿಯೋಗದಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದು, ಅಲ್ಲಿಯ ಕೆಲ ಕಾರ್ಯಗಳನ್ನು ನಮ್ಮ ಕ್ಷೇತ್ರದಲ್ಲಿಯೂ ಅಳವಡಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೇನೆ. ಶಿಕ್ಷಣಕ್ಕೆ ಅಮೆರಿಕದಲ್ಲಿ ಆದ್ಯತೆ ನೀಡಲಾಗುತ್ತಿದೆ. ಅದೇ ರೀತಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅಲ್ಲಿಯ ಕೆಲ ತಂತ್ರಜ್ಞಾನ ಅಳವಡಿಸಿಕೊಳ್ಳಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಬಂಡಳ ಗ್ರಾಪಂ ಅಧ್ಯಕ್ಷ ದೇವರಾಜ ಮರಾಠಿ, ಶಿರಸಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗಣೇಶ ದಾವಣಗೆರೆ, ಪ್ರಮುಖರಾದ ಎಸ್.ಕೆ. ಭಾಗ್ವತ್, ಜ್ಯೋತಿ ಪಾಟೀಲ ಇದ್ದರು.ಬೆಟ್ಟ ಭೂಮಿ ಪಹಣಿಯಲ್ಲಿ ಬ ಕರಾಬ್ ಎಂದು ನಮೂದಾಗುವಾಗ ಯಾವ ಸರ್ಕಾರ ಅಧಿಕಾರದಲ್ಲಿ ಇತ್ತು, ಯಾರ ಶಾಸಕರಿದ್ದರು? ಹೀಗೆ ಹೇಳುತ್ತಾ ಹೋದರೆ ನಾವೂ ಹೇಳಬಹುದು. ಆದರೆ ಬೇರೆಯವರ ಬಗ್ಗೆ ಬೊಟ್ಟು ತೋರಿಸುವ ರಾಜಕಾರಣಿ ನಾನಲ್ಲ. ನಾವು ಪ್ರಶ್ನೆ ಮಾಡುತ್ತಾ ಕೂರಲು ಆಗುವುದಿಲ್ಲ. ಎಲ್ಲರೂ ಸೇರಿ ಸರಿಪಡಿಸಬೇಕಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.