ಕೊಟ್ಟೂರು: ಏಕೀಕೃತ ನಾಡಿಗಾಗಿ ಏಕೀಕರಣ ಹೋರಾಟಗಾರರ ಪಾತ್ರ ಅವಿಸ್ಮರಣೀಯ ಎಂದು ನಿವೃತ್ತ ಸಂಶೋಧನಕಾರ ಡಾ.ಕೆ.ರವೀಂದ್ರ ಹೇಳಿದರು.
ಎಲ್ಲ ಹಿರಿಮೆ-ಗರಿಮೆಗಳೊಂದಿಗೆ ಕನ್ನಡತನಕ್ಕೆ ಎಂದೂ ಕುಂದುಂಟು ಬಾರದಂತೆ ಏಕೀಕರಣ ಹೋರಾಟಗಾರರ ಅಖಂಡ ಕರ್ನಾಟಕ ರಾಜ್ಯ ಪ್ರಜ್ವಲವಾಗಿ ಸತತ ನಿರಂತರ ಬೆಳಕು ಚೆಲ್ಲುವಂತಾಗಲು ಅವರ ತ್ಯಾಗ ಶ್ರಮಕ್ಕೆ ನಾಡಿನ ಪ್ರತಿಯೊಬ್ಬರು ಋಣಿ ಆಗಿರಬೇಕು ಎಂದು ಹೇಳಿದರು.
ಜಿಲ್ಲೆಯ ಹಲವು ಕಡೆ ಏಕೀಕೃತ ಹೋರಾಟ ನಿರಂತರವಾಗಿ ನಡೆದಂತೆ ಕೊಟ್ಟೂರು ಭಾಗದಲ್ಲಿ ಸಹ ಎಂಎಂಜೆ ಸದ್ಯೋಜಾತಪ್ಪ, ಡಾ.ಅಲಬೂರು ನಂಜಪ್ಪರಂತಹ ಮಹಾನ್ ಹೋರಾಟಗಾರರು ಜನತೆಯಲ್ಲಿ ನಾಡ ಪ್ರೇಮವನ್ನು ಉತ್ತೇಜನಗೊಳಿಸಿ ಹೋರಾಟಗಾರರಲ್ಲಿ ಧಾರ್ಮಿಕ ಮತ್ತು ರಾಜ್ಯ ಉತ್ಸವ ಎಂಬಂತೆ ಪ್ರೇರೇಪಿಸಿದ್ದು, ರಾಜ್ಯದ ಮಾದರಿಯಾಗಿ ಉಳಿದಿದೆ. ನಾಡನ್ನು ಕಟ್ಟಲು ಹಿರಿಯರು ನಡೆಸಿದ ಹೋರಾಟಕ್ಕೆ ಕನ್ನಡಿಗರು ಸದಾ ತಮ್ಮ ತನ ಮತ್ತು ಸಂಸ್ಕೃತಿಯನ್ನು ಪೋಷಿಸಿಕೊಂಡು ಹೋಗಬೇಕಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಗುರುದೇವ ವಿದ್ಯಾ ಪರಿಷತ್ ನ ಕಾರ್ಯದರ್ಶಿ ಪಿ.ಶ್ರೀಧರ ಶೆಟ್ಟಿ ಮಾತನಾಡಿ, ಸಂಸ್ಕೃತ ಮತ್ತು ತಮಿಳು ಭಾಷೆಯಷ್ಟೇ ಕನ್ನಡ ಭಾಷೆ ಪುರಾತನವಾಗಿದೆ. ಇಂತಹ ಭಾಷೆ ನಾಡನ್ನು ಮತ್ತಷ್ಟು ಗಟ್ಟಿ ಗೊಳಿಸಿಕೊಳ್ಳುವ ಕಾರ್ಯ ಪ್ರತಿಯೊಬ್ಬ ನಾಡ ಪ್ರೇಮಿ ಮತ್ತು ಕನ್ನಡಿಗ ಮಾಡಬೇಕು ಎಂದರು.
ಕಸಾಪ ಬಳ್ಳಾರಿ ಜಿಲ್ಲಾ ಪರಿಷರ್ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸಿದರು. ದತ್ತಿ ದಾನಿಗಳಾದ ಬಿ.ಕೊಟ್ರೇಶ್, ಜಿ.ಎಂ. ಧನುಂಜಯ, ಎಂ.ಎಂ. ನಟರಾಜ್, ಕೆ.ಎಸ್. ಈಶ್ವರಗೌಡ, ಜಿ.ಪ್ರತೀಕ್ಷ, ಬದ್ದಿ ಮರಿಸ್ವಾಮಿ, ಪಪಂ ಉಪಾಧ್ಯಕ್ಷ ಜಿ ಸಿದ್ದಯ್ಯ ಅವರನ್ನು ಸನ್ಮಾನಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ದೇವರಮನಿ ಕೊಟ್ರೇಶ್, ಎಚ್.ಎನ್. ಪ್ರಭಾಕರ್, ಶೆಟ್ಟಿ ಶಶಿಕಲಾ ರಾಜಶೇಖರ್, ಅರವಿಂದ್ ಬಸಾಪುರ್, ಭೀಮಣ್ಣ ವೇದಿಕೆಯಲ್ಲಿದ್ದರು.ಶಿಕ್ಷಕ ಅಜ್ಜಪ್ಪ ಸ್ವಾಗತಿಸಿದರು. ಬಿ.ಎಂ. ಗೀರೀಶ್ ವಂದಿಸಿದರು. ಈಶ್ವರಪ್ಪ ತುರುಕಣೆ ನಿರೂಪಿಸಿದರು.