ಕನ್ನಡಪ್ರಭ ವಾರ್ತೆ, ಬೀದರ್
ಬಿಜೆಪಿ ಶಾಸಕ ಶರಣು ಸಲಗರ ರಾಜ್ಯಾಧ್ಯಕ್ಷರಿಂದ ಯಾವುದೇ ಸೂಚನೆ ಬಂದಿಲ್ಲ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೂಚನೆ ಇಲ್ಲದೇ ಪಾಲ್ಗೊಳ್ಳುವದಿಲ್ಲ. ಯತ್ನಾಳ್ ಅವರೇ ನಿಮ್ಮ ನಡೆ ಜನರಿಗೆ ದಾರಿ ತಪ್ಪಿಸುತ್ತಿದೆ. ಈ ರೀತಿಯ ಸಂಶಯದಿಂದಾಗಿಯೇ ಮೂರು ಕಡೆ ಸೋಲಾಗಿದೆ ಎಂದು ಹೇಳಿದರೆ, ಹುಮನಾಬಾದ್ ಶಾಸಕ ಡಾ.ಸಿದ್ದು ಪಾಟೀಲ್ ಅವರು ಕರೆದಲ್ಲಿ ಮಾತ್ರ ಹೋಗುವೆ, ನನಗೆ ಸಭೆಯ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲ ಎಂದರೆ, ಡಾ. ಶೈಲೇಂದ್ರ ಬೆಲ್ದಾಳೆ ಅವರು, ಬಿಜೆಪಿ ವಕ್ಫ್ ವಿರುದ್ಧ ಹಳ್ಳಿಯಿಂದ ದಿಲ್ಲಿಯ ವರೆಗೆ ಹೋರಾಟ ನಡೆಸುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಎಲ್ಲ ನಾಯಕರು, ಮಠಾಧೀಶರು ಸೇರಿ ಪ್ರತಿಭಟಿಸಿ ಸರ್ಕಾರದ ಗಮನ ಸೆಳೆದಿದ್ದೇವೆ. ಡಿ. 4ರಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಬೀದರ್ನಿಂದ ಮತ್ತೇ ವಕ್ಫ್ ವಿರುದ್ಧ ಹೋರಾಟ ನಡೆಯಲಿದೆ. ನ. 25ರಂದು ಬೀದರ್ನಲ್ಲಿ ನಡೆಯುವ ಹೋರಾಟದ ಬಗ್ಗೆ ಮಾಹಿತಿ ಇಲ್ಲ. ರಾಜ್ಯದಲ್ಲಿ ಯಾರೇ ವಕ್ಫ್ ವಿರುದ್ಧ ಹೋರಾಡಿದರೂ ಅವರಿಗೆ ಒಳ್ಳೆಯದಾಗಲಿ ಎಂದರೆ ಶಾಸಕ ಪ್ರಭು ಚವ್ಹಾಣ್ ಹಾಗೂ ಮೌನ ಮುರಿಯದೇ ಪ್ರತಿಕ್ರಿಯೆಯಿಂದ ದೂರವುಳಿದಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ ಅವರು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿ, ಇದು ಪಕ್ಷದ ಕಾರ್ಯಕ್ರಮವಲ್ಲ. ನಮಗೆ ಪಕ್ಷದ ರಾಜ್ಯಾಧ್ಯಕ್ಷರಿಂದ ಯಾವುದೇ ಸೂಚನೆ ಬಂದಿಲ್ಲ. ಇದು ಸಂಘಟನೆಯೊಂದರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ನನಗೆ ಆಹ್ವಾನ ಬಂದಲ್ಲಿ ಹೋಗುವೆ. ವಕ್ಫ್ ರಾಜ್ಯದ ಜನತೆಯ ಜೀವ ಹಿಂಡುತ್ತಿದೆ ಅದರ ವಿರುದ್ಧ ಯಾರೇ ಪ್ರತಿಭಟಿಸಿದರೂ ಹೋಗುವೆ ಎಂದು ಸ್ಪಷ್ಟಪಡಿಸಿದ್ದಾರೆ.
ಯತ್ನಾಳ್ ತಂಡಕ್ಕೆ ತಾಯಿ-ತಂದೆ ಇಲ್ಲಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಾಡಿರೋ ಮೂರು ತಂಡಕ್ಕೆ ಅಪ್ಪ-ಅಮ್ಮ ಇಲ್ಲ ಎಂಬ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಬಸವಕಲ್ಯಾಣ ಶಾಸಕ ಶರಣು ಸಲಗರ, ಬಸನಗೌಡ ಪಾಟೀಲ್ ಯತ್ನಾಳ್ ಟೀಂ ಅನಾಥವಾಗಿದೆ. ಮಾಜಿ ಎಂಎಲ್ಸಿ, ಮಾಜಿ ಎಂಪಿ ಹಾಗೂ ಮನೆಯಲ್ಲಿ ಕುಳಿತುಕೊಂಡವರನ್ನು ಟೀಂಗೆ ಸೇರಿಸಿದ್ದಾರೆ. ಹೀಗಾಗಿ ಈ ತಂಡಕ್ಕೆ ತಾಯಿ-ತಂದೆ ಯಾರೂ ಇಲ್ಲ. ನಮ್ಮ ಟೀಂಗೆ ನಿಜವಾಗಿಯೂ ತಂದೆತಾಯಿಗಳಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ, ಅರವಿಂದ ಲಿಂಬಾವಳಿ ಸೇರಿ ಹಲವರ ವಿರುದ್ಧ ಕಿಡಿ ಕಾರಿದ್ದಾರೆ.ಬೀದರ್ನಿಂದ ಅಭಿಯಾನ ಆರಂಭ, ಬೆಳಗಾವಿಯಲ್ಲಿ ಕೊನೆ
ಬೀದರ್ನಲ್ಲಿ ಶಾಸಕರು, ಕೇಂದ್ರ ಸರ್ಕಾರದ ಮಾಜಿ ಸಚಿವರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಜೊತೆ ಶಾಸಕರು ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಮಾಜಿ ಕೇಂದ್ರ ಸಚಿವರಾದ ಜಿ.ಎಂ ಸಿದ್ದೇಶ್ವರ್, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಬಿ.ಪಿ ಹರೀಶ, ಶಾಸಕರಾದ ಹೊಳಲ್ಕೆರೆ ಚಂದ್ರಪ್ಪ, ಮಾಜಿ ಸಂಸದ ಬಿ.ವಿ ನಾಯಕ್, ಜೆಡಿಎಸ್ ನಾಯಕ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್, ಮುಖಂಡರಾದ ಎನ್ಆರ್ ಸಂತೋಷ, ಭರತ, ರವಿ ಬಿರಾದಾರ ಸೇರಿದಂತೆ ಸ್ಥಳೀಯ ನಾಯಕರು ನಿಯೋಗದಲ್ಲಿ ಇರಲಿದ್ದಾರೆ.
ಬಸವ ಪ್ರತಿಷ್ಠಾನದ ಬಸವಗಿರಿ ಕೂಡ ವಕ್ಫ್ ತೆಕ್ಕೆಗೆಬೀದರ್: ಜಿಲ್ಲೆಯ ಲಿಂಗಾಯತ ಸಮುದಾಯದವರ ಮಹಾಮಠ ಎಂದೇ ಗುರುತಿಸಲ್ಪಡುವ ಬಸವ ಸೇವಾ ಪ್ರತಿಷ್ಠಾನದ ಬಸವಗಿರಿಯ ಜಮೀನು ಸಹ ಇದೀಗ ವಕ್ಫ್ ಆಸ್ತಿ ಎಂದು ಗುರುತಿಸಲ್ಪಟ್ಟಿರುವದು ಬಹುದೊಡ್ಡ ಚರ್ಚೆಗೆ ಕಾರಣವಾಗಲಿದೆ.
ಅಕ್ಕ ಅನ್ನಪೂರ್ಣ ತಾಯಿ ಅವರು ಸ್ಥಾಪಿಸಿರುವ ಬಸವ ಸೇವಾ ಪ್ರತಿಷ್ಠಾನ ಟ್ರಸ್ಟ್ನ ಅಡಿಯಲ್ಲಿ ಬರುವ 5 ಎಕರೆ 19 ಗುಂಟೆ ಜಮೀನು ಇದೀಗ ಪಹಣಿಯಲ್ಲಿನ ಕಾಲಂ 11ರಲ್ಲಿ ಋಣಭಾರದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಎಂದು ನಮೂದಾಗಿರುವದು ಇದೀಗ ಬಸವಗಿರಿಯ ಭಕ್ತಾದಿಗಳನ್ನು ಆಕ್ರೋಶಕ್ಕೀಡು ಮಾಡಿದೆ.ಈ ಕುರಿತಂತೆ ಬಸವ ಸೇವಾ ಪ್ರತಿಷ್ಠಾನದ ಡಾ.ಗಂಗಾಂಬಿಕೆ ಅಕ್ಕ ಅವರು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿ, ಪ್ರತಿಷ್ಠಾನದ ಆಸ್ತಿಯ ಪಹಣಿಯಲ್ಲಿ ಇತ್ತೀಚೆಗಷ್ಟೇ ವಕ್ಫ್ ಎಂದು ನಮೂದಾಗಿದ್ದು ಅಚ್ಚರಿ ಮೂಡಿಸಿದೆ. ಮೊದಲಿನಿಂದಲೂ ಇದು ಪ್ರತಿಷ್ಠಾನದ ಆಸ್ತಿ. ಇದೀಗ ವಕ್ಫ್ ಎಂದು ನಮೂದಿಸಿದ್ದು ಸರಿಯಲ್ಲ. ಈ ಕುರಿತಂತೆ ಸರ್ಕಾರಕ್ಕೆ ಮನವಿ ಪತ್ರ ಬರೆದು ಋಣಭಾರದಲ್ಲಿ ವಕ್ಫ್ ಮಂಡಳಿ ಎಂಬುವದನ್ನು ತೆಗೆಯುವಂತೆ ಕೋರುತ್ತೇವೆ ಎಂದು ತಿಳಿಸಿದ್ದಾರೆ.ಬಿಜೆಪಿಯ ರಾಜ್ಯ ಕಾರ್ಯದರ್ಶಿ ಹಾಗೂ ಬಿಜೆಪಿಯ ನಮ್ಮ ಭೂಮಿ ನಮ್ಮ ಹಕ್ಕು ಆಂದೋಲನದ ಸಂಚಾಲಕ, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ರೈತರ ಜಮೀನನಷ್ಟೇ ಅಲ್ಲ ದೇವಸ್ಥಾನ, ಮಠಗಳು, ಶರಣರ ತಾಣಗಳನ್ನೂ ವಕ್ಫ್ ಆಸ್ತಿ ಎಂದು ಘೋಷಿಸುತ್ತಿರುವದು ಅನ್ಯಾಯದ ಪರಮಾವಧಿಯಾಗಿದೆ ಇದರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.