ರಾಜ್ಯದ ರಸ್ತೆ ಅಮೆರಿಕಾ ರಸ್ತೆಗೆ ಸಮನಾಗಿ ಇರಲಿವೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

KannadaprabhaNewsNetwork |  
Published : Mar 11, 2024, 01:22 AM IST
6 | Kannada Prabha

ಸಾರಾಂಶ

ಮೈಸೂರಿನಲ್ಲಿ 4000 ಸಾವಿರ ಕೋಟಿ ರೂ. ಅಧಿಕ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕೆಲವು ಕಾಮಗಾರಿಗಳ ಲೋಕಾರ್ಪಣೆಯಾಗುತ್ತಿದೆ. ಇತ್ತೀಚೆಗೆ ಕರ್ನಾಟಕ ಸಾಕಷ್ಟು ಅಭಿವೃದ್ಧಿಯಾಗುತ್ತಿದ್ದು, 2024ರ ಅಂತ್ಯದ ವೇಳೆಗೆ ಕರ್ನಾಟಕ ರಾಷ್ಟ್ರೀಯ ಹೆದ್ದಾರಿಗಳು ಯುಎಸ್‌ಎ ರಸ್ತೆಗಳಿಗೆ ಸಮನಾಗಿರಲಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕದ ರಸ್ತೆಗಳು ಅಮೆರಿಕಾದ ರಸ್ತೆಗೆ ಸಮನಾಗಿ ಇರಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 4000 ಸಾವಿರ ಕೋಟಿ ರೂ. ವೆಚ್ಚದ 268 ಕಿ.ಮೀ. ಉದ್ದದ 22 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆಯನ್ನು ಅವರು ನೆರವೇರಿಸಿ ಮಾತನಾಡಿದರು.

ಮೈಸೂರಿನಲ್ಲಿ 4000 ಸಾವಿರ ಕೋಟಿ ರೂ. ಅಧಿಕ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕೆಲವು ಕಾಮಗಾರಿಗಳ ಲೋಕಾರ್ಪಣೆಯಾಗುತ್ತಿದೆ. ಇತ್ತೀಚೆಗೆ ಕರ್ನಾಟಕ ಸಾಕಷ್ಟು ಅಭಿವೃದ್ಧಿಯಾಗುತ್ತಿದ್ದು, 2024ರ ಅಂತ್ಯದ ವೇಳೆಗೆ ಕರ್ನಾಟಕ ರಾಷ್ಟ್ರೀಯ ಹೆದ್ದಾರಿಗಳು ಯುಎಸ್‌ಎ ರಸ್ತೆಗಳಿಗೆ ಸಮನಾಗಿರಲಿದೆ ಎಂದು ಅವರು ಹೇಳಿದರು.

2014ರಲ್ಲಿ ನಾನು ಸಚಿವನಾದ ಸಂದರ್ಭದಲ್ಲಿ ಕರ್ನಾಟಕದಲ್ಲಿ 6707 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಇತ್ತು. ಇಂದು ಕರ್ನಾಟಕದಲ್ಲಿ 8200 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಇದೆ. ಕರ್ನಾಟಕದಲ್ಲಿ ಅಂದಾಜು 7000 ಸಾವಿರ ಕೋಟಿ ರೂ. ವೆಚ್ಚದಲ್ಲಿ 3063 ಕಿ.ಮೀ ಉದ್ದದ ರಸ್ತೆ ನಿರ್ಮಾಣದ 151 ಯೋಜನೆ ಪೂರ್ಣವಾಗಿದೆ. ಪ್ರಸ್ತುತ 90 ಕೋಟಿ ರೂ. ವೆಚ್ಚದ 2372 ಕಿ.ಮೀ ವ್ಯಾಪ್ತಿಯ 94 ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಈವರೆಗೂ 772 ಕಿ.ಮೀ 6 ಲೈನ್‌ರಸ್ತೆಗಳು, 2380 ಕಿ.ಮೀ 4 ಲೈನ್‌ರಸ್ತೆಗಳು 1082 ಕಿ.ಮೀ 2 ಲೈನ್‌ರಸ್ತೆಗಳನ್ನು ನಿರ್ಮಿಸಲಾಗಿದೆ. ಇದಲ್ಲದೇ 70 ಯೋಜನೆಗಳು ಆರಂಭವಾಗಲಿದ್ದು, ಇದರ ಅಂದಾಜು ವೆಚ್ಚ 1 ಲಕ್ಷ ಕೋಟಿ ರೂ. ಆಗಿದೆ. ಹೀಗಾಗಿ, 2024ರ ಅಂತ್ಯದ ವೇಳೆಗೆ ಕರ್ನಾಟಕ ರಾಜ್ಯದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಯೋಜನೆಗಳು ಮುಕ್ತಾಯವಾಗಲಿದ್ದು, ಇದರಿಂದ ಕರ್ನಾಟಕದ ಚಿತ್ರಣ ಬದಲಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್‌ಹೈವೇ

ಬೆಂಗಳೂರು- ಚೆನ್ನೈ ನಡುವೆ 20 ಸಾವಿರ ಕೋಟಿ ರೂ. ಗಳಲ್ಲಿ 262 ಕಿ.ಮೀ ಆಗಿದ್ದು, 2025ರ ಜನವರಿ ಆರಂಭಕ್ಕೆ ಮುನ್ನ ಬೆಂಗಳೂರು- ಚೆನ್ನೈ ನಡುವಿನ ಎಕ್ಸ್‌ಪ್ರೆಸ್‌ಹೈ-ವೇ ಆರಂಭವಾಗಲಿದ್ದು, 2 ಗಂಟೆಗಳಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದಾಗಿದೆ ಎಂದರು.

ಹಾಗೆಯೇ, ಬೆಂಗಳೂರಿನ ರಿಂಗ್‌ರಸ್ತೆ ನಿರ್ಮಾಣ ಅತ್ಯಂತ ಮಹತ್ವ ಪೂರ್ಣವಾಗಿದ್ದು, ಬೆಂಗಳೂರಿಗೆ ತಲುಪಿದ ನಂತರದಲ್ಲಿ ಟ್ರಾಫಿಕ್‌ಸಮಸ್ಯೆ ಹೆಚ್ಚಾಗಲಿದೆ. ಇದಕ್ಕಾಗಿ 282 ಕಿ.ಮೀ ಉದ್ದದ ರಿಂಗ್‌ರಸ್ತೆ ನಿರ್ಮಿಸುವ ಅಗತ್ಯವಿದೆ. ಈ ವರ್ಷದ ಡಿಸೆಂಬರ್‌ವೇಳೆಗೆ ಇದನ್ನು ಪೂರ್ಣಗೊಳಿಸುವ ವಿಶ್ವಾಸವಿದ್ದು, ಆ ಮೂಲಕ ಹೊಸ ವರ್ಷದಲ್ಲಿ ಬೆಂಗಳೂರಿನ ಟ್ರಾಫಿಕ್‌ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂದು ಅವರು ಭರವಸೆ ನೀಡಿದರು.

ಅಲ್ಲದೇ, ರಾಷ್ಟ್ರೀಯ ಹೆದ್ದಾರಿ 275ರ ಮೈಸೂರು- ಕುಶಾಲನಗರ ನಡುವಿನ ಐದು ಪ್ಯಾಕೇಜ್‌ನಲ್ಲಿ 5200 ಕೋಟಿ ರೂ. ವೆಚ್ಚದಲ್ಲಿ 115 ಕಿ.ಮೀ ಕಾಮಗಾರಿ ಆರಂಭವಾಗಿದೆ. ಇದು ಪೂರ್ಣಗೊಂಡರೆ ಕುಶಾಲನಗರದಿಂದ ಬೆಂಗಳೂರಿಗೆ ತೆರಳುವ ಸಮಯ ಕೇವಲ 5 ಗಂಟೆಗಳ ಬದಲಿಗೆ ಎರಡೂವರೆ ಗಂಟೆಗಳಲ್ಲಿ ತಲುಪಬಹುದು ಎಂದರು.

----

ಕರ್ನಾಟಕದ ಬಗ್ಗೆ ಗಡ್ಕರಿ ಮೆಚ್ಚುಗೆ

ಕರ್ನಾಟಕ ಅಭಿವೃದ್ಧಿ ಹಾಗೂ ಪ್ರಗತಿ ಹೊಂದಿರುವ ರಾಜ್ಯವಾಗಿದೆ. ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಕರ್ನಾಟಕ ತನ್ನದೇ ಛಾಪು ಮೂಡಿಸಿದೆ. ಕರ್ನಾಟಕದ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆ ಕರ್ನಾಟಕದ ಇತಿಹಾಸವನ್ನು ತಿಳಿಸುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕರ್ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

----

ಕೇರಳ- ಕರ್ನಾಟಕಕ್ಕೆ ಪರ್ಯಾಯ ಮಾರ್ಗ

ಮೈಸೂರು- ಮಲ್ಲಾಪುರಂ ನಡುವಿನ 65 ಕಿ.ಮೀ. ಹೈವೇ 2500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಿದ್ದು, ವೈಯನಾಡ್‌ಬಂಡೀಪುರ ಮೀಸಲು ಅರಣ್ಯ ಪ್ರದೇಶದ ಕಾರಣಕ್ಕೆ ಕೋಚಿಕೋಡ್‌ನಿಂದ ಮೈಸೂರಿಗೆ ಸಂಚರಿಸುವ ವಾಹನಗಳಿಗೆ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆವರೆಗೂ ನಿರ್ಬಂಧ ಹೇರಲಾಗುತ್ತಿದೆ. ಇದಕ್ಕಾಗಿ ಕೇರಳ- ಕರ್ನಾಟಕದ ನಡುವೆ ಮಲ್ಲಪುರಂ ಮಾರ್ಗವಾಗಿ ಪರ್ಯಾಯ ಮಾರ್ಗ ಕಲ್ಪಿಸಲಿದ್ದು, ಇದರಿಂದ ವಾಹನ ಸವಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್‌ಗಡ್ಕರಿ ತಿಳಿಸಿದರು.

PREV

Recommended Stories

ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ
ಮೋದಿ ರಸ್ತೆ ಮಾರ್ಗದಲ್ಲಿ ಜನರಿಗೆ ದರ್ಶನ, ಮೆಟ್ರೋದಲ್ಲಿ ಸಂಚಾರ