ಮುಂಡಗೋಡ: ಯಾವುದೇ ಚಟುವಟಿಕೆ ನಿಂತರೂ ಒಕ್ಕಲುತನ ಎಂದಿಗೂ ನಿಲ್ಲದ ನಿತ್ಯ ನೂತನ ಕಾರ್ಯವಾಗಿದೆ. ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ಆಹಾರ ಉತ್ಪನ್ನಗಳ ಹೆಚ್ಚಳವಾಗಬೇಕಾದ ಅನಿವಾರ್ಯತೆ ಇದೆ ಎಂದು ಶಿರಸಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಬಿ.ಸಿ. ಕೊಲ್ಹಾರ ತಿಳಿಸಿದರು.
ಪಟ್ಟಣದ ಪಂಜುರ್ಲಿ ಸಭಾಂಗಣದಲ್ಲಿ ಮನುವಿಕಾಸ ಸಂಸ್ಥೆಯು ಅಜೀಂ ಪ್ರೇಮ್ಜಿ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿದ್ದ ರೈತ ಮಹಿಳೆಯರಿಗೆ ಒಂದು ದಿನದ ಸುಸ್ಥಿರ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ವಿವಿಧ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಜಾಗ್ರತೆಯಿಂದ ಕೀಟನಾಶಕಗಳ ಬಳಕೆ ಮಾಡಬೇಕು. ಅಜಾಗರೂಕತೆ ವಹಿಸಿದಲ್ಲಿ ದುಷ್ಪರಿಣಾಮ ಬೀರುತ್ತದೆ. ಹೈನುಗಾರಿಕೆಯ ಜತೆಗೆ ಆಡು, ಕೋಳಿ, ಜೇನು ಸಾಕಾಣಿಕೆಯು ಉತ್ತಮ ಲಾಭದಾಯಕವಾಗಿದೆ. ಅಜೋಲಾ ರಾಸುಗಳಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಆಹಾರವಾಗಿದೆ. ಈ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಕುರಿತಾದ ತರಬೇತಿ ನೀಡಲಾಗುತ್ತಿದೆ. ಮಹಿಳೆಯರು ಸ್ವಾವಲಂಬನೆ ಬದುಕು ಸಾಧಿಸಲು ವಿವಿಧ ತರಬೇತಿ ಸಹ ನೀಡುತ್ತಿದೆ ಎಂದರು.
ಪ್ರಗತಿಪರ ರೈತ ಪವನ ಭಟ್ಟ ಮಾತನಾಡಿ, ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಆಹಾರ ಉತ್ಪನ್ನ ಕಲುಷಿತಗೊಳ್ಳುತ್ತಿದೆ. ಸಾವಯವ ಕೃಷಿಯಿಂದ ಉತ್ತಮ ಆರೋಗ್ಯ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯ. ಸುಸ್ಥಿರ ಕೃಷಿಯು ಉತ್ತಮ ಲಾಭದಾಯಕವಾಗಿದೆ, ಗೋಮೂತ್ರವನ್ನು ಕೃಷಿಯಲ್ಲಿ ಕೀಟ ನಾಶಕವಾಗಿ ಬಳಕೆ ಮಾಡಬಹುದು. ಮನೆಯಲ್ಲಿ ಮಕ್ಕಳಿಗೆ ಬಾಲ್ಯದಿಂದಲೆ ಕೃಷಿಯ ಕುರಿತಾದ ಶಿಕ್ಷಣವನ್ನು ಸಹ ನೀಡಬೇಕು ಎಂಬ ಕಿವಿಮಾತನ್ನು ಹೇಳಿದ ಅವರು, ನೈಸರ್ಗಿಕ ವಾತಾವರಣಕ್ಕೆ ಅನುಕೂಲಕರವಾದ ಬೆಳೆಯನ್ನು ಬೆಳೆಯುವುದು ಉತ್ತಮ ಎಂದು ಸಲಹೆ ನೀಡಿದರುಮನುವಿಕಾಸ ಸಂಸ್ಥೆಯ ಹಿರಿಯ ಸಿಬ್ಬಂದಿ ಬಸವರಾಜ ರಡ್ಡೆರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಜಲ ಸಂರಕ್ಷಣೆ, ಮಹಿಳಾ ಸಬಲೀಕರಣ, ಆರೋಗ್ಯ ಹಾಗೂ ಶಿಕ್ಷಣದ ಕುರಿತಾಗಿ ಕಾರ್ಯ ನಿರ್ವಹಿಸುತ್ತಿದ್ದು, ೨೭೭ ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿಪಡಿಸಲಾಗಿದೆ. ೪೦೦೦ಕ್ಕೂ ಅಧಿಕ ಕೃಷಿ ಹೊಂಡವನ್ನು ನಿರ್ಮಿಸಲಾಗಿದ್ದು, ಕೃಷಿಕರಿಗೆ ಅನುಕೂಲ ಮಾಡಿಕೊಟ್ಟಿದೆ. ಮಹಿಳೆಯರಿಗೆ ಹೊಲಿಗೆ, ಬ್ಯೂಟಿಶಿಯನ್, ಅಡುಗೆ ತರಬೇತಿಗಳಂತಹ ವಿವಿಧ ತರಬೇತಿ ನೀಡುತ್ತಾ ಬಂದಿದೆ. ಕೃಷಿಯ ಕುರಿತಾಗಿ ಹೆಚ್ಚಿನ ಉತ್ತೇಜನ ನೀಡಲು ಮಹಿಳೆಯರಿಗೆ ಸುಸ್ಥಿರ ಕೃಷಿ ತರಬೇತಿ ನೀಡುತ್ತಿದೆ ಎಂದರು.
ಮುಂಡಗೋಡ ಕೃಷಿ ಇಲಾಖೆಯ ಬ್ಲಾಕ್ ಟೆಕ್ನಿಕಲ್ ಮ್ಯಾನೇಜರ್ ದೀಪಾ ಶೆಟ್ಟರ್ ಮಾತನಾಡಿ, ಕೃಷಿಯಲ್ಲಿ ಮಣ್ಣು ಮತ್ತು ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಲಾಭದಾಯಕ ಮಿಶ್ರ ಬೆಳೆ ಪದ್ಧತಿಯ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ರೈತ ಮಹಿಳೆಯರು ಹಾಗೂ ಮನುವಿಕಾಸ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.