ಕನ್ನಡಪ್ರಭ ವಾರ್ತೆ ಶಿರಾ ಕಳೆದ ಐದು ವರ್ಷಗಳಿಂದ ಶಿವನಯ್ಯನ ಪಾಳ್ಯ ಗ್ರಾಮದಲ್ಲಿ ಶ್ರೀಗುಜ್ಜಾರಾಂಜನೇಯ ಸ್ವಾಮಿ ದೇವರಿಗೆ ಪ್ರತಿವಾರ ಹರಿಸೇವೆ ಮಾಡುವ ಮೂಲಕ ಧಾರ್ಮಿಕ ಭಕ್ತಿಯ ಒಗ್ಗಟ್ಟನ್ನು ಪ್ರದರ್ಶಿಸುತ್ತಿರುವ ಅಳುನ ಯುವಕರ ಸೇವೆ ಮೆಚ್ಚುವಂತಹದ್ದು ಎಂದು ಶಿರಾ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಪುನೀತ್ ಗೌಡ ಹೇಳಿದರು.ಅವರು ಶಿರಾ ತಾಲೂಕಿನ ಶಿವನಯ್ಯನ ಪಾಳ್ಯ ಗ್ರಾಮದಲ್ಲಿ ನಡೆದ ಅಳುನವರ ಕುಲದೇವ ಶ್ರೀಗುಜ್ಜಾರಾಂಜನೇಯ ಸ್ವಾಮಿ ವಾರದ ವಿಶೇಷ ಪೂಜೆ ಮತ್ತು ಹರಿ ಸೇವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ದೇವರ ಉತ್ಸವಗಳು ಹೆಚ್ಚಾಗಿ ನಡೆಯುತ್ತಿರುವುದು, ನಮ್ಮ ನಾಡಿನ ಧಾರ್ಮಿಕ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಸಾಕ್ಷಿಕರಿಸುತ್ತದೆ. ಜಾತ್ರೆ, ದೇವರ ಉತ್ಸವಗಳು ಪರಸ್ಪರ ಬಾಂಧವ್ಯ ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗುತ್ತವೆ. ಎಲ್ಲರೊಳಗೆ ನಾನು ಒಬ್ಬ ಎಂಬ ಭಾವನೆಗಳೊಂದಿಗೆ ಬದುಕು ಕಟ್ಟಿಕೊಂಡು ಸಮಾಜದ ಯಶಸ್ಸಿಗೆ ದುಡಿದಾಗ ಮನುಷ್ಯ ಜನ್ಮ ಸಾರ್ಥಕತೆ ಕಾಣಲಿದೆ ಎಂದರು.