ಎಂ.ನರಸಿಂಹಮೂರ್ತಿ
ಚಿಕ್ಕ ಚಿಕ್ಕ ನಿವೇಶನದಾರರಿಗೆ ಸಣ್ಣಪುಟ್ಟ ದಾಖಲಾತಿಗಳ ದೋಷಗಳನ್ನು ಹುಡುಕಿ ನೋಟಿಸ್ ನೀಡುವ ಮೂಲಕ ಮುಲಾಜಿಲ್ಲದೆ ಮನೆ ತೆರವುಗೊಳಿಸುವ ಅಧಿಕಾರಿಗಳು, ಕಾನೂನು ಬಾಹಿರವಾಗಿ ಐಷಾರಾಮಿ ಅಪಾರ್ಟ್ಮೆಂಟ್ ಮತ್ತು ಬಹುಮಹಡಿ ಕಟ್ಟಡಗಳು ನಿರ್ಮಾಣ ಮಾಡುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಲಿಮಂಗಲ ಗ್ರಾಮಪಂಚಾಯಿತಿ ವ್ಯಾಪ್ತಿಯ ಶಿಕಾರಿಪಾಳ್ಯದ ಸುತ್ತಮುತ್ತಲಿನ ಹಲವೆಡೆ ಕಟ್ಟಡ ನಕಾಶೆ, ಕಟ್ಟಡ ಪ್ರಾರಂಭ ಪ್ರಮಾಣಪತ್ರ, ಆಕ್ಯುಪೆನ್ಸಿ ಪ್ರಮಾಣಪತ್ರ ಪಡೆಯದೆ ನೂರಾರು ಅನಧಿಕೃತ ಅಪಾರ್ಟ್ಮೆಂಟ್ಗಳು ಹಾಗೂ ಬಹುಮಹಡಿ ಕಟ್ಟಡಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಆದ್ದರೂ ಹುಲಿಮಂಗಲ ಗ್ರಾಮಪಂಚಾಯಿತಿ ಅಧಿಕಾರಿಗಳ ಜಾಣಕುರುಡು ಪ್ರದರ್ಶನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ನಿರ್ಮಾಣಗೊಂಡಿರುವ ಅನೇಕ ಅಪಾರ್ಟ್ಮೆಂಟ್ಗಳು ಪಟ್ಟಣ ಯೋಜನೆಯ ವತಿಯಿಂದ ಧೃಡಿಕೃತ ದಾಖಲೆಯೊಂದಿಗೆ ಅನುಮೋದನೆ ಪಡೆದಿಲ್ಲ, ಅಲ್ಲದೆ ಅನೇಕ ಅಪಾರ್ಟ್ಮೆಂಟ್ಗಳಲ್ಲಿ ಕೊಳಚೆ ನೀರು ಸಂಸ್ಕರಿಸಿ ಶುದ್ಧೀಕರಿಸುವ ಎಸ್ಟಿಪಿ ಅಳವಡಿಸಿಲ್ಲ. ಮೋರಿ ಹಾಗೂ ಒಳಚರಂಡಿ ಪೈಪ್ ಮೂಲಕ ಕಲುಷಿತ ನೀರು ಹರಿಬಿಡಲಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಈ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದ್ದು, ಚಿಕ್ಕ ಚಿಕ್ಕ ನಿವೇಶನಗಳಿಗೆ ಸಿಗದೇ ಇರುವ ನಕಾಶೆ ಮಂಜೂರಾತಿ, ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲು ಹೇಗೆ ಅನುಮತಿ ನೀಡುತ್ತಾರೆ, ಬಡವರಿಗೆ ಒಂದು ಕಾನೂನು, ಶ್ರೀಮಂತರಿಗೆ ಬೇರೆ ಕಾನೂನು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಲವು ಅಪಾರ್ಟ್ಮೆಂಟ್ಗಳಿಗೆ ಭೇಟಿ ನೀಡಿದಾಗ ಎಸ್.ಟಿ.ಪಿ ಇಲ್ಲದಿರುವುದು ಪತ್ತೆ ಆಗಿದೆ. ಅಪಾರ್ಟ್ಮೆಂಟ್ಗಳಿಗೆ ಮತ್ತು ಹುಲಿಮಂಗಲ ಗ್ರಾಪಂಗೆ ನೋಟಿಸ್ ನೀಡಿದ್ದಾರೆ. ಆದರೂ ಈವರೆಗೂ ಕ್ರಮಕೈಗೊಂಡಿಲ್ಲ.
ಎಸ್.ಟಿ.ಪಿ ಅಳವಡಿಸದೆ ಅಪಾರ್ಟ್ಮೆಂಟ್ ನಿರ್ಮಾಣ ನನ್ನ ಗಮನಕ್ಕೆ ಬಂದಿಲ್ಲ, ಕೆಲವು ಕಡೆ ಅಪಾರ್ಟ್ಮೆಂಟ್ ಕಲುಷಿತ ನೀರನ್ನು ಒಳಚರಂಡಿ ಪೈಪ್ಗಳ ಮೂಲಕ ಹರಿಬಿಡಲಾಗುತ್ತಿದೆ. ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿದ್ದರೆ ಪರಿಶೀಲನೆ ನಡೆಸಲಾಗುವುದು
--
-ರಫೀಕ್, ಸ್ಥಳೀಯ ನಿವಾಸಿ