- ಹಿರಿಯ ವೃತ್ತಿ ಬಾಂಧವರು, ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ
ಅಸಂಘಟಿತ ಕಾರ್ಮಿಕರಾದ ದರ್ಜಿ( ಟೈಲರ್ಸ್) ವೃತ್ತಿ ಬಾಂಧವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಿ ಕೊಡುವ ಮೂಲಕ ಆರ್ಥಿಕವಾಗಿ ಸದೃಢಗೊಳಿಸುವ ಕಾರ್ಯಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಟಿಎಂಎಸ್ ರೋಟರಿ ಸಭಾಂಗಣದಲ್ಲಿ ಚಿಕ್ಕಮಗಳೂರು ಟೈಲರ್ಸ್ ಅಸೋಸಿಯೇಷನ್, ಟೈಲರ್ಸ್ ಸಹಕಾರ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಹಿರಿಯ ವೃತ್ತಿ ಬಾಂಧವರು, ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಡವನಿಂದ ಹಿಡಿದು ಶ್ರೀಮಂತನವರೆಗೂ ಪ್ರತಿ ವ್ಯಕ್ತಿಗೂ ಧರಿಸುವ ಉಡುಪು ಉತ್ತಮವಾಗಿರದಿದ್ದರೆ ಸಮಾಜದಲ್ಲಿ ಬೆಲೆ ಸಿಗುವುದು ಕಷ್ಟ ಸಾಧ್ಯ. ಆ ನಿಟ್ಟಿನಲ್ಲಿ ವ್ಯಕ್ತಿಯ ಗೌರವ ಹೆಚ್ಚಿಸುವ ಟೈಲರ್ಸ್ ವೃತ್ತಿ ಬಾಂಧವರ ಸೇವೆ ಅವಿಸ್ಮರಣೀಯ ಎಂದರು.ಯಾವುದೇ ವ್ಯಕ್ತಿ ತನ್ನ ವೃತ್ತಿಯನ್ನು ಗೌರವಿಸಿ ಪ್ರೀತಿಸುವವರಿಗೆ ಕಾಯಕದಲ್ಲಿ ಕಷ್ಟ ವಿರುವುದಿಲ್ಲ. ಆದರೆ ಸೋಮಾರಿತನ ದಿಂದ ವೃತ್ತಿಗೂ ಗೌರವ ಸಲ್ಲಿಸದೇ ಅಸಡ್ಡೆವಹಿಸುವವರಿಗೆ ಜೀವನದಲ್ಲಿ ಸಣ್ಣ ಕೆಲಸವೂ ಭಾರವಾಗಲಿದೆ. ಟೈಲರ್ಸ್ ವೃತ್ತಿ ಬಾಂಧವರು ಅತ್ಯಂತ ಚುರುಕುತನದಿಂದ ಕೆಲಸ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ದೊರೆಯುವ ಪ್ರತಿ ಸವಲತ್ತು ಗಳನ್ನು ಅಸಂಘಟಿತ ಟೈಲರ್ಸ್ ವೃತ್ತಿಯವರಿಗೂ ಕೊಡುವ ವ್ಯವಸ್ಥೆ ಕೈಗೊಂಡಾಗ ಟೈಲರ್ಸ್ ಬಳಗ ಸಮಾಜದ ಮುಂಚೂಣಿಗೆ ಬರಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ವೃತ್ತಿಬಾಂಧವರು ಒಗ್ಗಟ್ಟಾಗಿ ಸಂಘಟನೆಗಳ ನೇತೃತ್ವದಲ್ಲಿ ಸರ್ಕಾರವನ್ನು ಒತ್ತಾಯಿಸಿದಾಗ ಮಾತ್ರ ಸೌಕರ್ಯ ಲಭಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಸುಧೀರ್, ಸುಮಾರು 380 ಸದಸ್ಯರ ಬಳಗ ಹೊಂದಿರುವ ಟೈಲರ್ಸ್ ಅಸೋಸಿಯೇಷನ್ನವರು ಸಂಕಷ್ಟದಲ್ಲಿರುವ ವೃತ್ತಿ ಬಾಂಧವರಿಗೆ ಸ್ಪಂದಿಸುವ ಕೆಲಸದಲ್ಲಿ ನಿರತವಾಗಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿ ಸದಸ್ಯರಿಂದ ದಿನಕ್ಕೆ ಒಂದು ರು. ಗಳಂತೆ ಸಂಗ್ರಹಿಸಿ ತುರ್ತು ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಕಾರ್ಯದರ್ಶಿ ಸಿ.ಎನ್.ಜಾನಕಿ, ಅಸೋಸಿಯೇಷನ್ ಕಾರ್ಯದರ್ಶಿ ಅನಿಲ್ ಕುಮಾರ್, ಗೌರವ ಅಧ್ಯಕ್ಷೆ ಜೈನಾಬಿ, ಸದಸ್ಯರಾದ ಪಾಂಡುರಂಗ, ಯುವರಾಜ್, ಬಿ.ಎಂ.ಪ್ರಕಾಶ್, ರಾಜು ಉಪಸ್ಥಿತ ರಿದ್ದರು.
ಚಿಕ್ಕಮಗಳೂರಿನ ಟಿಎಂಎಸ್ ರೋಟರಿ ಸಭಾಂಗಣದಲ್ಲಿ ಚಿಕ್ಕಮಗಳೂರು ಟೈಲರ್ಸ್ ಅಸೋಸಿಯೇಷನ್ ಭಾನುವಾರ ಏರ್ಪಡಿಸಿದ್ದ ಹಿರಿಯ ವೃತ್ತಿ ಬಾಂಧವರು, ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು.