ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಸಂಶೋಧಕಿ ಎಂ.ಪಿ. ವೀಣಾ ಮಹಾಂತೇಶ್ ಇತ್ತೀಚಿಗೆ ಗ್ರಾಮದ ಮಲ್ಲಿಕಾರ್ಜುನಸ್ವಾಮಿ ಕಲ್ಮಠ್, ರೇಣುಕಾ ಪ್ರಸಾದ್, ಡಾ. ರವಿಕುಮಾರ್ ನವಲಗುಂದ, ಡಾ. ವೀರೇಶ್, ನೇತ್ರ ಅವರೊಂದಿಗೆ ಕ್ಷೇತ್ರ ಕಾರ್ಯ ಕೈಗೊಂಡಾಗ ಗ್ರಾಮದ ಮಧ್ಯಭಾಗದಲ್ಲಿರುವ ಬಸವೇಶ್ವರ ದೇವಾಲಯದ ಪಕ್ಕದಲ್ಲಿ ಈ ಶಾಸನ ಪತ್ತೆ ಹಚ್ಚಿದ್ದಾರೆ.
ಪೂರ್ವಕ್ಕೆ ಮುಖ ಮಾಡಿರುವ ಈ ಶಾಸನವು 2 ಅಡಿ ಎತ್ತರ ಹಾಗೂ 2 ಅಡಿ ಅಗಲವಾಗಿದೆ. ಇದು 6 ಸಾಲುಗಳನ್ನು ಹೊಂದಿದೆ ಶಾಸನದ ಮೇಲ್ಭಾಗದ ಮಧ್ಯದಲ್ಲಿ ಶಿವಲಿಂಗ ಅಕ್ಕ-ಪಕ್ಕದಲ್ಲಿ ಸೂರ್ಯ ಚಂದ್ರರ ರೇಖಾ ಚಿತ್ರಗಳಿವೆ.ಶಾಸನದಲ್ಲಿ ಅರಸಿನ ಮಠದ ಚನ್ನಬಸವನ ಹಾಗೂ ಇಮ್ಮಡಿ ಬಸವಂಥರಾಯ ಎಂಬ ವ್ಯಕ್ತಿಗಳ ಉಲ್ಲೇಖವಿದೆ.
ಎರಡನೇ ಬಸವಂತ ನಾಯಕನ ಹೆಂಡತಿ ಹರಿಯಮ್ಮಾಜಿ, ತನ್ನ ಪತಿಯ ಮರಣದ ನಂತರ ಐದು ವರ್ಷಗಳ ಕಾಲ ಆಳ್ವಿಕೆ ಮಾಡಿದಳು. ದಂಪತಿಗಳಿಬ್ಬರು ಅನೇಕ ದಾನ ಧರ್ಮಗಳನ್ನು ಕೈಗೊಂಡಿರುವುದು ಕಂಚಿನ ಪತ್ರ, ಹಸ್ತ ಪ್ರತಿ ಮತ್ತು ಶಾಸನಗಳಿಂದ ತಿಳಿದು ಬರುತ್ತದೆ.
ಎರಡನೇ ಬಸವಂತನಾಯಕನು ದಾರಿಹೋಕರಿಗಾಗಿ, ಪ್ರವಾಸಿಗರ ಅನುಕೂಲಕ್ಕಾಗಿ ರಸ್ತೆ ಬದಿಯಲ್ಲಿ ನೆರಳಿಗೆ ಮರಗಳನ್ನು ಹಾಕಿಸಿದ ಮತ್ತು ಅರವಟ್ಟಿಗೆಗಳನ್ನು ದಾರಿಯ ಬದಿಯಲ್ಲಿ ಕಟ್ಟಿಸಿದ ಎಂದು ತಿಳಿದು ಬರುತ್ತದೆ ಎಂದು ಸಂಶೋಧಕಿ ಎಂ.ಪಿ. ವೀಣಾ ಮಹಾಂತೇಶ್ ತಿಳಿಸಿದ್ದಾರೆ.