ಶಾಸಕರು ವಾಸವಿರುವ ರಸ್ತೆಯಲ್ಲೇ ಅವೈಜ್ಞಾನಿಕ ಚರಂಡಿ ಕಾಮಗಾರಿ

KannadaprabhaNewsNetwork |  
Published : Mar 07, 2026, 12:45 AM IST
5ಎಚ್ಎಸ್ಎನ್11 : ವೈಕುಂಠ ಬೀದಿ ರಸ್ತೆಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದ್ದು ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿ ಬಾಕ್ಸ್ ಚರಂಡಿ  ನಿರ್ಮಿಸಲಾಗುತ್ತಿದೆ. | Kannada Prabha

ಸಾರಾಂಶ

ಶಾಸಕರ ಮನೆ ಇರುವ ವೈಕುಂಠ ಬೀದಿಯಲ್ಲಿ ಒಂದು ಕೋಟಿಗೂ ಹೆಚ್ಚು ಅನುದಾನದಲ್ಲಿ ರಸ್ತೆ ಹಾಗೂ ಬಾಕ್ಸ್ ಚರಂಡಿ ಕಾಮಗಾರಿ ನಡೆಯುತ್ತಿದೆ. ಹಲವಾರು ವರ್ಷಗಳ ನಂತರ ಕಾಮಗಾರಿ ನಡೆಯುತ್ತಿರುವುದಕ್ಕೆ ಇಲ್ಲಿನ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದರು. ಆದರೆ ಈಗ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯನ್ನು ಕಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ತಲೆಗಿಂತ ಕೂದಲು ಜಾಸ್ತಿ ಎಂಬಂತೆ ರಸ್ತೆಗಿಂತ ಮೇಲ್ಮಟ್ಟದಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಮಾಡಿದ್ದಾರೆ. ಕೆಲವು ಕಡೆ ಮನೆಯ ಮೆಟ್ಟಲಿಗಿಂತ ಮೇಲೆ ಚರಂಡಿ ನಿರ್ಮಿಸಿದ್ದಾರೆ. ಒಂದೆಡೆ ಚರಂಡಿ ದಾಟುವುದು ಕಷ್ಟವಾದರೆ, ಮತ್ತೊಂದೆಡೆ ಮಳೆ ಬಂದರೆ ಸಂಪೂರ್ಣ ನೀರು ಮನೆಯೊಳಗೆ ನುಗ್ಗುವ ಆತಂಕವನ್ನು ನಿವಾಸಿಗಳು ವ್ಯಕ್ತಪಡಿಸುತ್ತಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಶಾಸಕ ಎಚ್ ಕೆ ಸುರೇಶ್ ವಾಸವಾಗಿರುವ ವೈಕುಂಠಬೀದಿಯ ರಸ್ತೆಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿ ಬಾಕ್ಸ್ ಚರಂಡಿ ನಿರ್ಮಿಸಲಾಗುತ್ತಿದೆ. ಈ ಬಗ್ಗೆ ಗುತ್ತಿಗೆದಾರ ಹಾಗೂ ಎಂಜಿನಿಯರ್‌ ಅವರನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಐತಿಹಾಸಿಕ ಹಿನ್ನೆಲೆಯುಳ್ಳ, ಅದರಲ್ಲೂ ಶಾಸಕರ ಮನೆ ಇರುವ ವೈಕುಂಠ ಬೀದಿಯಲ್ಲಿ ಒಂದು ಕೋಟಿಗೂ ಹೆಚ್ಚು ಅನುದಾನದಲ್ಲಿ ರಸ್ತೆ ಹಾಗೂ ಬಾಕ್ಸ್ ಚರಂಡಿ ಕಾಮಗಾರಿ ನಡೆಯುತ್ತಿದೆ. ಹಲವಾರು ವರ್ಷಗಳ ನಂತರ ಕಾಮಗಾರಿ ನಡೆಯುತ್ತಿರುವುದಕ್ಕೆ ಇಲ್ಲಿನ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದರು. ಆದರೆ ಈಗ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯನ್ನು ಕಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ತಲೆಗಿಂತ ಕೂದಲು ಜಾಸ್ತಿ ಎಂಬಂತೆ ರಸ್ತೆಗಿಂತ ಮೇಲ್ಮಟ್ಟದಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಮಾಡಿದ್ದಾರೆ. ಕೆಲವು ಕಡೆ ಮನೆಯ ಮೆಟ್ಟಲಿಗಿಂತ ಮೇಲೆ ಚರಂಡಿ ನಿರ್ಮಿಸಿದ್ದಾರೆ. ಒಂದೆಡೆ ಚರಂಡಿ ದಾಟುವುದು ಕಷ್ಟವಾದರೆ, ಮತ್ತೊಂದೆಡೆ ಮಳೆ ಬಂದರೆ ಸಂಪೂರ್ಣ ನೀರು ಮನೆಯೊಳಗೆ ನುಗ್ಗುವ ಆತಂಕವನ್ನು ನಿವಾಸಿಗಳು ವ್ಯಕ್ತಪಡಿಸುತ್ತಾರೆ.

ರಾಮರಾಯರ ಬೀದಿಗೆ ತಡೆಗೋಡೆ:

ವೈಕುಂಠ ಬೀದಿಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ರಾಮರಾಯರ ಬೀದಿಗೆ ತೆರಳುವ ಮುಂಭಾಗದಲ್ಲಿ 3 ಅಡಿ ಎತ್ತರದಲ್ಲಿ ಬಾಕ್ಸ್ ಕೂರಿಸಲಾಗಿದೆ. ಈ ಬಗ್ಗೆ ಆತಂಕಗೊಂಡ ನಿವಾಸಿಗಳು ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಬಾಕ್ಸ್ ಚರಂಡಿಯಿಂದ ರಸ್ತೆಗೆ ರ್ಯಾಂಪ್ ಅಳವಡಿಸಲಾಗುವುದು ಎನ್ನುತ್ತಾರೆ. ರಾಮರಾಯರ ಬೀದಿಗೆ ತಡೆಗೋಡೆಯಂತಿರುವ ಬಾಕ್ಸ್ ಚರಂಡಿ ಅವಶ್ಯಕತೆ ಇದೆಯೇ ಎಂದು ಪ್ರಶ್ನೆ ಮಾಡಿದರೆ ಅತಿ ಭಾರದ ವಾಹನಗಳು ರಾಮರಾಯರ ಬೀದಿಯಲ್ಲಿ ಓಡಾಡುವುದರಿಂದ ಗಟ್ಟುಮುಟ್ಟಾಗಿ ಬಾಕ್ಸ್ ನಿರ್ಮಿಸುವಂತೆ ಎಂಜಿನಿಯರ್ ಹೇಳಿದ್ದಾರೆ ಎಂದು ಗುತ್ತಿಗೆದಾರರು ಸಮಜಾಯಿಷಿ ನೀಡುತ್ತಾರೆ. ಈ ಬೀದಿಯಲ್ಲಿ ಆಟೋ ಹೋಗುವುದೇ ಕಷ್ಟ ಇನ್ನು ಭಾರೀ ವಾಹನಗಳು ಎಲ್ಲಿಂದ ಓಡಾಡುತ್ತವೆ ಎಂದು ನಾಗರಿಕರು ವ್ಯಂಗ್ಯವಾಡುತ್ತಿದ್ದಾರೆ.

ಶಾಸಕರ ಕಣ್ಣೆದುರೆ ಅವೈಜ್ಞಾನಿಕ ಕಾಮಗಾರಿ :

ಅವೈಜ್ಞಾನಿಕ ಕಾಮಗಾರಿಯನ್ನು ಗುತ್ತಿಗೆದಾರನ ಜೊತೆ ಎಂಜಿನಿಯರ್ ಶಾಮಿಲ್ ಆಗಿ ಮಾಡುತ್ತಿದ್ದಾರೆ. ಅವೈಜ್ಞಾನಿಕ ಅಸಮರ್ಪಕ ಕಾಮಗಾರಿಯನ್ನು ಕಂಡ ಪುರಸಭೆ ಮುಖ್ಯಾಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಶಾಸಕರು ಪ್ರತಿ ಭಾಷಣದಲ್ಲಿ ವೈಕುಂಠ ಬೀದಿಯಷ್ಟು ಉತ್ತಮ ಕಾಮಗಾರಿ ಎಲ್ಲೂ ನಡೆಯುತ್ತಿಲ್ಲ. ನಾನೇ ಮುಂದೆ ನಿಂತು ಕೆಲಸ ಮಾಡಿಸುತ್ತೇನೆ ಎಂದು ಹೇಳುತ್ತಾರೆ. ರಸ್ತೆ ಕಾಮಗಾರಿ ಮಾಡುವ ಸಂದರ್ಭದ ಎತ್ತರಕ್ಕೆ ಬಾಕ್ಸ್ ಚರಂಡಿ ನಿರ್ಮಾಣ ಮಾಡಲಾಗಿದೆ. ಇದರಿಂದ ನಿವಾಸಿಗಳು ತಮ್ಮ ದಿನನಿತ್ಯದ ದವಸ ಧಾನ್ಯ, ಆಸ್ಪತ್ರೆ, ಮಕ್ಕಳನ್ನು ಶಾಲೆಗೆ ಕಳಿಸಲು ಹಾಗೂ ಇತರೆ ಕೆಲಸಗಳಿಗೆ ಸರ್ಕಸ್ ಮಾಡಿ ಓಡಾಡುವ ಪರಿಸ್ಥಿತಿ ಉಂಟಾಗಿದ್ದು ಕೂಡಲೇ ಶಾಸಕರು ಹಾಗೂ ಎಂಜಿನಿಯರ್ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಂಡು ತಮ್ಮನ್ನು ಕಷ್ಟದಿಂದ ಪಾರು ಮಾಡಬೇಕು ಎಂಬುದಾಗಿ ನಿವಾಸಿಗಳು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಬಳ್ಳಾರಿಯ ಅನಿರುದ್ಧ ಕಟ್ಟಿಮನಿಗೆ 786ನೇ ರ‍್ಯಾಂಕ್‌
ಅವೈಜ್ಞಾನಿಕವಾಗಿ ಸೇರಿಸಿರುವ ಅರಣ್ಯ ಪ್ರದೇಶ ರದ್ದುಗೊಳಿಸಿ ಪುನಃ ಸರ್ವೆಗೆ ರೈತ ಸಂಘ ವಿನಂತಿ