- ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ತಿರುಕನೂರಿನಲ್ಲಿ ರಂಗ ದಾಸೋಹ, ಮೂರು ನಾಟಕಗಳ ಉತ್ಸವ
ನಾಟಕಗಳಿಂದ ಮನುಷ್ಯನ ಭಾವನೆಗಳ ಅನಾವರಣವಾಗುತ್ತದೆ ಎಂದು ಚಿತ್ರದುರ್ಗದ ಆಂಗ್ಲಭಾಷಾ ಪ್ರಾಧ್ಯಾಪಕ ಡಾ.ಪಿ.ಎನ್.ಮಧುಸೂದನ್ ತಿಳಿಸಿದರು.
ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ತಿರುಕನೂರಿನಲ್ಲಿ ರಂಗ ದಾಸೋಹ ಮೂರು ನಾಟಕಗಳ ಉತ್ಸವದ 2ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ನಾಟಕಗಳು ಪುರಾಣಗಳ ಅಂಶಗಳನ್ನೊಳಗೊಂಡಿವೆ. ಅಲ್ಲಿ ಪುರಾಣಗಳಲ್ಲಿ ಬರುವ ಅನೇಕ ಕಲ್ಪನಾ ವಿಷಯಗಳನ್ನು ತೆರೆಯ ಮೇಲೆ ತರುವ ಕಾರ್ಯವನ್ನು ಮಾಡುತ್ತವೆ ಎಂದರು.ಒಬ್ಬ ನಟ ಕರುಣೆ ಮತ್ತು ಭಯವನ್ನುಂಟು ಮಾಡುವಂತಿರಬೇಕು ನಟನು ಭಾವನೆಗಳ ಅನಾವರಣವನ್ನುಂಟು ಮಾಡುವನು ಎಂದು ಖ್ಯಾತ ತತ್ವಜ್ಞಾನಿ ಅರಿಸ್ಟಾಟಲ್ ಹೇಳಿದ್ದನ್ನು ನೆನಪಿಸಿದರು. ನಾಟಕಗಳು ಭಾಷೆಯ ಸ್ವರೂಪವನ್ನು ಮೀರುವಂತಿರಬಾರದು ಎಂದರು.
ಮಲ್ಲಾಡಿಹಳ್ಳಿ ಅಮೃತ್ ಆರ್ಗ್ಯಾನಿಕ್ಸ್ನ ಮಾಲೀಕರಾದ ಕೆ.ನಾಗರಾಜ್ ಮಾತನಾಡಿ, ಸ್ವಾಮೀಜಿಧ್ವಯರ ಸೇವಾ ಕಾರ್ಯಗಳನ್ನು ಪುನರ್ ಸ್ಥಾಪಿಸುವ ಮೂಲಕ ಸಂಸ್ಥೆಯನ್ನು ಉತ್ತುಂಗ ಶಿಖರಕ್ಕೆ ತೆಗೆದು ಕೊಂಡು ಹೋಗೋಣ ಅದಕ್ಕೆ ನಮ್ಮ ಅಮೃತ್ ಗ್ರೂಪ್ಸ್ ಮೂಲಕ ಧನಸಹಾಯವನ್ನು ಮಾಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಹರಿಹರದ ಖ್ಯಾತ ವೈದ್ಯ ಪ್ರವೀಣ್ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಎಲ್ಲಾ ಚಟುವಟಕೆಗಳು ಪಾಲ್ಗೊಳಬೇಕು ನಾಟಕ, ಓದು, ಆಟ ಮುಂತಾದವು ಗಳು ಮಾನಸಿಕ ವಿಕಾಸಕ್ಕೆ ಸಹಾಯಕವಾಗುತ್ತವೆ ಎಂದು ಸಲಹೆ ನೀಡಿದರು.ಸಂಸ್ಥೆಯ ಉಪಾಧ್ಯಕ್ಷ ರಾಘವೇಂದ್ರ ಪಾಟೀಲ, ಕಾರ್ಯದರ್ಶಿ ಎಸ್.ಕೆ.ಬಸವರಾಜನ್, ವಿಶ್ವಸ್ಥರಾದ ಕೆ.ಡಿ.ಬಡಿಗೇರ, ಎಲ್.ಎಸ್.ಶಿವರಾಮಯ್ಯ ವ್ಯವಸ್ಥಾಪಕ ಡಿ.ಕೆ.ಚಂದ್ರಪ್ಪ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರು ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಡಿ.ಕೆ.ಚಂದ್ರಪ್ಪ ಸ್ವಾಗತಿಸಿ, ಪ್ರಾಚಾರ್ಯ ಜೆ.ಸಿದ್ಧಲಿಂಗಮ್ಮ ವಂದಿಸಿ ಉಪನ್ಯಾಸಕ ಎನ್.ಎಸ್.ರುದ್ರೇಶ್ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ರಂಗರಥ ತಂಡದವರಿಂದ ಕೆ.ವಿ.ಅಕ್ಷರ ಅನುವಾದಿಸಿದ ಶ್ವೇತಾ ಶ್ರೀನಿವಾಸ್ ಮತ್ತು ಆಸಿಫ್ ಕ್ಷತ್ರಿಯ ಜಂಟಿ ನಿರ್ದೇಶನದ, ಭಿನ್ನಷಡ್ಜ ಸಂಗೀತ ನೀಡಿದ ‘ಇದ್ದಾಗ ನಿಮ್ಮದು ಕದ್ದಾಗ ನಮ್ಮದು’ ನಾಟಕವನ್ನು ಪ್ರದರ್ಶಿಸಲಾಯಿತು.