ಬೆಂಗಳೂರು : ಬೆಂಗಳೂರಿನ ಬಸವೇಶ್ವರ ನಗರದ ಯಶಸ್ವಿನಿ, ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ 379ನೇ ರ್ಯಾಂಕ್ ಪಡೆದಿದ್ದಾರೆ. ಕೇವಲ 22 ವರ್ಷದ ಯಶಸ್ವಿನಿ ಬಿಎ ಪದವೀಧರೆ. ಜೊತೆಗೆ ಈಗ ಇಂದಿರಾಗಾಂಧಿ ಮುಕ್ತ ವಿವಿಯಲ್ಲಿ ಮಾನವಶಾಸ್ತ್ರದಲ್ಲಿ ಎಂಎ ಓದುತ್ತಿದ್ದಾರೆ.
ಕೆಲಕಾಲ ಇನ್ಸೈಟ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದು ಬಿಟ್ಟರೆ ಆಕೆ ಶ್ರಮ ಮತ್ತು ಆಸಕ್ತಿಯಿಂದ ಮೊದಲ ಯತ್ನದಲ್ಲೇ ಗೆದ್ದಿದ್ದಾರೆ. ಇನ್ನು ಅವಕಾಶಗಳು ಇರುವುದರಿಂದ ಐಎಎಸ್ ಸಿಗುವಷ್ಟು ರ್ಯಾಂಕ್ ಗಳಿಸಲು ಮತ್ತೆ ಪರೀಕ್ಷೆ ಬರೆಯಲಿದ್ದಾರೆ ಎಂದು ಅವರ ತಾಯಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಶಾಖಾಧಿಕಾರಿ ಆಗಿರುವ ಪ್ರಮೀಳ ಅವರು ತಿಳಿಸಿದ್ದಾರೆ. ತಾಯಿಯೇ ಯಶಸ್ವಿನಿಯ ಈ ಸಾಧನೆಗೆ ಪ್ರೇರಣೆ. ತಾಯಿ ಕೆಎಎಸ್ ಪರೀಕ್ಷೆಯ ಕೊನೆ ಹಂತದವರೆಗೂ ಹೋಗಿ ವಿಫಲರಾಗಿದ್ದರು. ನನಗಾಗಿದ್ದ ನಿರಾಸೆಯನ್ನ ಈ ಪರೀಕ್ಷೆ ಪಾಸು ಮಾಡುವ ಮೂಲಕ ಮಗಳು ನಿವಾರಿಸಿದ್ದಾಳೆ ಎಂದು ಪ್ರಮೀಳಾ ಖುಷಿ ಹಂಚಿಕೊಂಡಿದ್ದಾರೆ.
ಇಂಡಿಯಾ ಫಾರ್ ಐಎಎಸ್ ಅಭ್ಯರ್ಥಿಗಳ ಸಾಧನೆ ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ‘ಇಂಡಿಯಾ ಫಾರ್ ಐಎಎಸ್ ಅಕಾಡೆಮಿ’ಯ 12 ಅಭ್ಯರ್ಥಿಗಳು ಉತ್ತಮ ರ್ಯಾಂಕ್ನೊಂದಿಗೆ ಉತ್ತೀರ್ಣರಾಗಿದ್ದಾರೆ ಎಂದು ಅಕಾಡೆಮಿ ಸಂಸ್ಥಾಪಕ ಪಿ.ಸಿ. ಶ್ರೀನಿವಾಸ್ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗರಿಕ ಸೇವೆಗಳಲ್ಲಿ ನಮ್ಮ ರಾಜ್ಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕು. ಈ ಮೂಲಕ ಜನಪರ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಮಾಜಕ್ಕೆ ಮಾದರಿಯಾಗಬೇಕು ಎಂಬ ಆಶಯದಿಂದ ನಾಗರಿಕ ಸೇವಾ ಆಕಾಂಕ್ಷಿಗಳಿಗೆ ನಿರಂತರ ಮಾರ್ಗದರ್ಶನ ಮತ್ತು ತರಬೇತಿ ನೀಡುತ್ತಿದೆ ಎಂದರು.
ಇದೇ ವೇಳೆ ಸಾಧನೆ ಮಾಡಿದ ಕೆ. ನವ್ಯಾ (696 ರ್ಯಾಂಕ್), ಎನ್.ಎ. ಹಂಸಶ್ರೀ (866 ರ್ಯಾಂಕ್) ಸೇರಿದಂತೆ ಇತರ ಅಭ್ಯರ್ಥಿಗಳನ್ನು ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು. ಅಕಾಡೆಮಿ ಉಪಾಧ್ಯಕ್ಷ ಡಾ.ಜಿ.ಎನ್ ಶ್ರೀಕಂಠಯ್ಯ ಇತರರಿದ್ದರು.