ಶರಣು ಸೊಲಗಿ
ಮುಂಡರಗಿ:ಪಟ್ಟಣದ ವಿದ್ಯಾನಗರದ ಕಾಲವಾಡ ಪ್ಲಾಟಿನ ಎರಡೂ ಕಡೆಗಳಲ್ಲಿ ನೆನಗುದಿಗೆ ಬಿದ್ದಿರುವ ನಗರೋತ್ಥಾನ ಯೋಜನೆಯ ರಸ್ತೆ ಕಾಮಗಾರಿಯನ್ನು ಕಳೆದ ತಿಂಗಳು ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ 8 ದಿನಗಳಲ್ಲಿ ಈ ಕಾಮಗಾರಿ ಪ್ರಾರಂಭಿಸಿ, ಮುಕ್ತಾಯಗೊಳಿಸುವಂತೆ ಸೂಚಿಸಿದ್ದರು. ಆದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸದೇ ವಿಳಂಬ ನೀತಿ ಮುಂದುವರೆಸಿದ್ದಾರೆ.ಒಂದೂವರೆ ವರ್ಷದ ಹಿಂದೆ ಇಲ್ಲಿ ಕಾಮಗಾರಿ ಪ್ರಾರಂಭಿಸಿ ಉತ್ತಮವಾಗಿ ಓಡಾಡುವಂತಿದ್ದ ರಸ್ತೆಯನ್ನು ಕೆದರಿ ಹಾಕಿದ್ದಾರೆ. ಸರಿಯಾಗಿ ನೀರು ಹರಿದು ಹೋಗುತ್ತಿದ್ದ ಚರಂಡಿ ಒಡೆದು ಹಾಕಿ ನೂತನವಾಗಿ ನಿರ್ಮಿಸಿ ಅದಕ್ಕೆ ಮೇಲೆ ಕಾಂಕ್ರೀಟ್ ಹಾಕದೇ ಅದರಲ್ಲಿ ಸರಿಯಾಗಿ ನೀರು ಹರಿದು ಹೋಗದಂತೆ ಮಾಡಿ ಸೊಳ್ಳೆಗಳು ಉತ್ಪತ್ತಿ ಕೇಂದ್ರವನ್ನಾಗಿ ಮಾಡಿದ್ದಾರೆ.
ಈ ರಸ್ತೆಯಲ್ಲಿ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿದ್ದು, ನಿತ್ಯ ಇಲ್ಲಿ ಸಾವಿರಾರು ಮಕ್ಕಳು ಓಡಾಡುತ್ತಾರೆ. ಮಳೆ ಬಂದಾಗ ಅನೇಕ ಬಾರಿ ಕೊಳಚೆಯಲ್ಲಿ ಮಕ್ಕಳು ಬಿದ್ದಿದ್ದುಂಟು. ಅಲ್ಲದೇ ಈ ರಸ್ತೆಯಲ್ಲಿ ಮನೆಗಳಿರುವ ಅನೇಕ ಹಿರಿಯ ನಾಗರಿಕರು ಇಲ್ಲಿ ಸಂಚರಿಸುವಾಗ ಅನೇಕ ಬಾರಿ ಕಾಲು ಉಳುಕಿಸಿಕೊಂಡಿದ್ದಾರೆ. ಸೈಕಲ್ ಹಾಗೂ ಮೋಟರ್ ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದಿದ್ದಾರೆ. ಈ ಕುರಿತು ಇಲ್ಲಿನ ನಿವಾಸಿಗಳು ಅನೇಕ ಬಾರಿ ಪುರಸಭೆಗೆ ಹಾಗೂ ಸಂಬಂಧಿಸಿ ವಾರ್ಡಿನ ಸದಸ್ಯರ ಗಮನಕ್ಕೆ ತಂದು ಕಾಮಗಾರಿ ಮುಕ್ತಾಯಗೊಳಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ.ಕಳೆದ ಮೇ 9ರಂದು ಜಿಲ್ಲಾಧಿಕಾರಿಯವರು ಮುಂಡರಗಿಯ ವಿವಿಧ ವಾರ್ಡುಗಳ ನಗರೋತ್ಥಾನ ಕಾಮಗಾರಿಗಳ ಪರಿಶೀಲನೆಗೆ ಆಗಮಿಸಿದ ಸಂದರ್ಭದಲ್ಲಿ 18ನೇ ವಾರ್ಡಿನ ಸದಸ್ಯ ಹಾಗೂ ಹಾಲಿ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ತಮ್ಮ ವಾರ್ಡಿನ ವಿದ್ಯಾನಗರಕ್ಕೆ ಆಗಮಿಸಿ ವಿಳಂಬವಾಗಿರುವ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಕೇಳಿಕೊಂಡಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಆಗಮಿಸಿ ಕಾಮಗಾರಿಯನ್ನು ಪರಿಶೀಲಿಸಿ 8 ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಿ, ಮುಕ್ತಾಯಗೊಳಿಸಬೇಕು ಎಂದು ಸ್ಥಳದಲ್ಲಿ ಉಪಸ್ಥಿತರಿದ್ದ ಪಿಡಿ ಹಾಗೂ ಈ ನಗರೋತ್ಥಾನ ಕಾಮಗಾರಿಗೆ ಸಂಬಂಧಿಸಿದ ಎಇಇ ಹಾಗೂ ಇತರೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದ್ದರು. ಜಿಲ್ಲಾಧಿಕಾರಿ ಭೇಟಿ ನೀಡಿ ಒಂದು ತಿಂಗಳಾದರೂ ಕಾಮಗಾರಿ ಮಾತ್ರ ಇನ್ನೂ ಪ್ರಾರಂಭವಾಗಿಲ್ಲ.ಜಿಲ್ಲಾಧಿಕಾರಿಗಳ ಮಾತಿಗೂ ಮನ್ನಣೆ ನೀಡಿ ಅಧಿಕಾರಿಗಳು ಕಾಮಗಾರಿ ಪ್ರಾರಂಭಿಸದಿದ್ದರೆ ಇವರಿಗೆ ಇನ್ಯಾರು ಹೇಳಬೇಕು ಎಂದು ಇಲ್ಲಿನ ನಿವಾಸಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ನಿತ್ಯ ಈ ರಸ್ತೆಯಲ್ಲಿ ಶಾಲೆಗೆ ಓಡಾಡುತ್ತಿರುವ ವಿದ್ಯಾರ್ಥಿ ಪಾಲಕರು ತಮ್ಮ ಮಕ್ಕಳೊಂದಿಗೆ ಸೇರಿ ಪ್ರತಿಭಟನೆ ನಡೆಸುವುದಕ್ಕಿಂತಲೂ ಮುಂಚೆಯಾದರೂ ಅಧಿಕಾರಿಗಳು ಎಚ್ಚೆತ್ತು ಕಾಮಗಾರಿ ಪ್ರಾರಂಭಿಸುವರೋ ಕಾದು ನೋಡಬೇಕಿದೆ.
ವಿದ್ಯಾನಗರದ ಕಾಮಗಾರಿಯನ್ನು ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡಿಹೋದ ನಂತರವೂ ಕಾಮಗಾರಿ ಪ್ರಾರಂಭವಾಗಿಲ್ಲ. ಹೀಗಾಗಿ ಕಳೆದ ಎಂಟು ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ನಿವಾಸಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ತಾವು ಶೀಘ್ರವೇ ವಾರ್ಡಿನ ನಾಗರಿಕರು ಹಾಗೂ ಶಾಲಾ ಮಕ್ಕಳೊಂದಿಗೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಬಂದಿರುವೆ ಎಂದು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಹೇಳಿದರು.