ಹಿಂಗಾರು ಹಂತದಲ್ಲಿ ಬಿತ್ತನೆಯನ್ನು ರೈತರು ಕಡ್ಲಿ, ಜೋಳ ಬಿತ್ತನೆ ಮಾಡಿದ್ದು, ಸದ್ಯ ಸುರಿಯುತ್ತಿರುವ ಮಳೆಯಿಂದ ಬೀಜಗಳು ಭೂಮಿಯಲ್ಲಿ ಕೊಳೆತು ಮೊಳಕೆ ಬರದಂತಾಗಿದೆ
ಮುಳಗುಂದ: ಗದಗ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರೈತರ ಮುಂಗಾರು ಹಾಗೂ ಹಿಂಗಾರು ಬೆಳೆಗಳು ಹಾನಿಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸರ್ಕಾರದಿಂದ ಬೆಳೆ ಪರಿಹಾರ ಹಾಗೂ ಬೆಳೆ ವಿಮಾ ಕಂಪನಿಯಿಂದ ಮಧ್ಯಂತರ ಪರಿಹಾರ ತಕ್ಷಣವೇ ಒದಗಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೃಷಿ ಉಪ ನಿರ್ದೇಶಕಿ ಸ್ಪೂರ್ತಿ.ಜಿ.ಎಸ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ರೈತ ಸಂಘದ ಅಧ್ಯಕ್ಷ ದೇವರಾಜ ಸಂಗನಪೇಟಿ ಮಾತನಾಡಿ, ಗದಗ ತಾಲೂಕಿನಲ್ಲಿ ಮುಂಗಾರು ಬೆಳೆಗಳಾದ ಗೋವಿನಜೋಳ, ಹತ್ತಿ, ಶೇಂಗಾ, ಮೇಣಸಿನಗಿಡ, ಈರುಳ್ಳಿ ಸೇರಿದಂತೆ ಇನ್ನಿತರ ಬೆಳೆಗಳು ನಿರಂತರ ಮಳೆಗೆ ಕೊಳೆ ರೋಗ ಬಾಧಿಸಿ ನಾಶವಾಗಿ ಅಪಾರ ಹಾನಿಯಾಗಿದೆ. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗೆ ಸಂಬಂಧಪಟ್ಟ ಕೆಲವೊಂದು ಬೆಳೆಗಳು ವಿಮಾ ಕಂಪನಿ ಪ್ರಕಾರ ಬೆಳೆ ಕಟಾವು ಆಗಿದ್ದು, ಆದರೆ ತಾಲೂಕಿನಲ್ಲಿ ರೈತರು ಎಲ್ಲ ಬೆಳೆಗೆ ವಿಮಾ ಕಟ್ಟಿದ್ದು, ಕಟಾವು ಹಂತದಲ್ಲಿ ಬೆಳೆ ಹಾಳಾಗಿದ್ದರಿಂದ ರೈತನ ಕೈಗೆ ಮಾರುಕಟ್ಟೆಯಲ್ಲಿ ಬೆಲೆಯು ಬಂದಿಲ್ಲ ಮತ್ತು ಗೋವಿನ ಜೋಳ ಬೆಳೆಯು ನೆಲಕ್ಕೆ ಬಿದ್ದು ಮೊಳಕೆ ಬಿಡುತ್ತಿದೆ, ಶೇಂಗಾ ಅಂತು ಭೂಮಿ ಪಾಲಾಗಿದೆ, ಇನ್ನು ತೊಟಗಾರಿಕೆ ಬೆಳೆಗಳಾದ ಕೆಂಪು ಮೆಣಸಿನಕಾಯಿ ಹಾಗೂ ಈರುಳ್ಳಿ ಬೆಳೆ ನೆಲಕ್ಕೆ ಬಿದ್ದು ಕೊಳೆತು ಹೋಗುತ್ತಿದೆ.ಇಷ್ಟೆಲ್ಲ ಹಾನಿಯಾಗಿ ನಮ್ಮ ತಾಲೂಕಿನ ರೈತರಿಗೆ ಯಾವುದೇ ಬೆಳೆಗಳು ಕೈಗೆ ಬರುವ ಭರವಸೆ ಇಲ್ಲದಂತಾಗಿದೆ. ಆದ್ದರಿಂದ ಎಲ್ಲ ರೈತರಿಗೆ ಸರ್ಕಾರದಿಂದ ಬೆಳೆ ಪರಿಹಾರ ಹಾಗೂ ಬೆಳೆ ವಿಮಾ ಕಂಪನಿಯಿಂದ ಮಧ್ಯಂತರ ಪರಿಹಾರವನ್ನು ಬೇಗನೇ ದೊರಕಿಸಿಕೊಡಬೇಕು ಮತ್ತು ತಾಲೂಕಿನಲ್ಲಿ ಹಾನಿಯಾದ ಬೆಳೆಯನ್ನು ಸಂಬಂಧಪಟ್ಟ ಇಲಾಖೆಯವರು ಬೆಳೆ ಸಮೀಕ್ಷೆಯನ್ನು ತುರ್ತು ಗತಿಯಲ್ಲಿ ಮಾಡಬೇಕು. ಹಿಂಗಾರು ಹಂತದಲ್ಲಿ ಬಿತ್ತನೆಯನ್ನು ರೈತರು ಕಡ್ಲಿ, ಜೋಳ ಬಿತ್ತನೆ ಮಾಡಿದ್ದು, ಸದ್ಯ ಸುರಿಯುತ್ತಿರುವ ಮಳೆಯಿಂದ ಬೀಜಗಳು ಭೂಮಿಯಲ್ಲಿ ಕೊಳೆತು ಮೊಳಕೆ ಬರದಂತಾಗಿದೆ. ರೈತರಿಗೆ ಯಾವುದೇ ಬೆಳೆ ಬರುವ ಭರವಸೆ ಇಲ್ಲದಂತಾಗಿದ್ದು, ರೈತರು ತುಂಭಾ ಸಂಕಷ್ಟಕ್ಕೆ ಇಡಾಗಿದ್ದಾರೆ. ಆದ್ದರಿಂದ ತಕ್ಷಣವೇ ಪರಿಹಾರ ಒದಗಿಸುವ ಸೂಕ್ತ ಕ್ರಮ ವಹಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.
ಈ ವೇಳೆ ರೈತರಾದ ಬಸವರಾಜ ಕರಿಗಾರ, ಮಹ್ಮದಲಿ ಶೇಖ, ಕಿರಣ ಕುಲಕರ್ಣಿ, ಮುತ್ತಪ್ಪ ಬಳ್ಳಾರಿ, ಶಂಕ್ರಯ್ಯ ಹಿರೇಮಠ, ದೇವಪ್ಪ ಅಣ್ಣಿಗೇರಿ, ನಾಗಪ್ಪ ಬಾಳಿಕಾಯಿ, ಮಹಾಂತೇಶ ಗುಂಜಳ, ಸಂತೋಷ ಮಟ್ಟಿ, ದತ್ತಪ್ಪ ಯಳವತ್ತಿ, ಮುತ್ತಪ್ಪ ಪಲ್ಲೇದ, ಕೃಷಿ ಸಹಾಯಕ ಅಧಿಕಾರಿ ಎಫ್.ಸಿ. ಗುರಿಕಾರ, ಗ್ರಾಮ ಲೆಕ್ಕಾಧಿಕಾರಿ ಶ್ರೀಧರ ಪಟ್ಟೇದ ಸೇರಿದಂತೆ ರೈತರು, ಸಾರ್ವಜನಿಕರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.