ಚಿತ್ರದುರ್ಗ: ಆಯುರ್ವೇದ ಔಷಧ ಬಳಕೆ ಹಾಗೂ ನಿತ್ಯ ಯೋಗ ಮಾಡುವ ಅಭ್ಯಾಸ ಎಲ್ಲರೂ ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಗರ ಸಭೆಯ ಸಭಾಂಗಣದಲ್ಲಿ ಧನ್ವಂತರಿ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ 9ನೇ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ನಮ್ಮ ಆಹಾರ ಪದ್ಧತಿ, ಸಂಸ್ಕಾರ, ಸಂಸ್ಕೃತಿ, ಹವ್ಯಾಸ, ಅಭ್ಯಾಸಗಳೆಲ್ಲವೂ ಆರೋಗ್ಯಕ್ಕೆ ಪೂರಕವಾಗಿದ್ದವು. ಆದರೆ ಇಂದು ಅವೆಲ್ಲವೂ ಬದಲಾಗಿ ಆರೋಗ್ಯಕ್ಕೆ ಸಂಚಕಾರತರುತ್ತಿವೆ. ಆದ್ದರಿಂದ ಉತ್ತಮವಾದ ಹವ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯವಾಗಿರಬಹುದು. ಆಯುಷ್ ಲೋಕದ ದೈವ ಧನ್ವಂತರಿಯವರು ಹಾಕಿ ಕೊಟ್ಟಂತಹ ಆಯುರ್ವೇದ ವಿಧಾನ, ಗುಣಗಳ ಜೊತೆಗೆ ಯೋಗವನ್ನು ಪಾಲನೆ ಮಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬಹುದು ಎಂದರು.
ಅಮೃತ ಆಯುರ್ವೇದಿಕ್ ಕಾಲೇಜು ಪ್ರಾಂಶುಪಾಲ ಡಾ.ಪ್ರಶಾಂತ್ ಮಾತನಾಡಿ, ದೇಶದ ಪರಂಪರೆ ಸಂಸ್ಕೃತಿ, ಸಂಸ್ಕಾರ, ಆಹಾರ, ಹಳ್ಳಿಯ ಸೊಗಡು ಹಾಗೂ ನಮ್ಮ ತನವನ್ನು ನಾವು ಮರೆತು ಪಾಶ್ಚಿಮಾತ್ಯ ದೇಶಗಳೆಡೆಗೆ ಮಾರು ಹೋಗುತ್ತಿದ್ದೇವೆ. ಪ್ರಸ್ತುತ ಆಯುರ್ವೇದ ಪಾಲನೆಯಾಗುತ್ತಿದೆ ಎಂದರೆ ಅದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ. ಎಲ್ಲರೂ ಆಯುರ್ವೇದವನ್ನು ಬಳಸುವ ಮೂಲಕ ಆಯುರ್ವೇದ ಉಳಿಸೋಣ ಎಂದು ಕರೆ ನೀಡಿದರು.ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತ ರಾಘವೇಂದ್ರ ಮಾತನಾಡಿ, ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಜೋಗಿಮಟ್ಟಿ ರಸ್ತೆಯ ಟೀಚರ್ಸ್ ಕಾಲೋನಿಯ ದ್ವೀಪಥ ರಸ್ತೆಗೆ ದೇವವೈದ್ಯ ಧನ್ವಂತರಿಯ ಹೆಸರು ಇಡುವುದಾಗಿ ಹೇಳಿದರು.
ಇದೇ ವೇಳೆ ನಗರಸಭೆಯ ಪೌರ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ನಗರಸಭೆ ಆಯುಕ್ತೆ ಎಂ.ರೇಣುಕಾ, ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ನಸರುಲ್ಲಾ ಇದ್ದರು.