- ರಾಗಿ, ಜೋಳ, ನವಣೆ, ನಾರಿನಾಂಶಗಳ ಆಹಾರ ಸೇವನೆ ಅಗತ್ಯ- ಬರಡು ಭೂಮಿಯಲ್ಲೂ ಬೆಳೆಯುವ ಸಿರಿಧಾನ್ಯಗಳು ಬರಗಾಲದ ಮಿತ್ರ: ಪೂರ್ಣಿಮಾ- - - ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಕುವೆಂಪು ರಂಗಮಂದಿರದಲ್ಲಿ ಕೃಷಿ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಸಿರಿಧಾನ್ಯ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿ, ಹಿಂದಿನ ಕಾಲದ ಜನರು ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಅನುಸರಿಸುತ್ತಿದ್ದ ಆಹಾರ ಪದ್ಧತಿ ಇಂದೂ ಮುಂದುವರಿಸುವ ಅಗತ್ಯವಿದೆ. ರಾಗಿ, ಜೋಳ, ನವಣೆ ಮುಂತಾದ ಹೆಚ್ಚಿನ ನಾರಿನಾಂಶವಿರುವ ಆಹಾರಗಳು ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತವೆ ಎಂದರು.
ಕೃಷಿಕರು ಕೂಡ ತಮ್ಮ ಹಿಂದಿನ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ವಿಮುಖರಾಗಿ ಆಧುನಿಕ ಕೃಷಿ ಪದ್ಧತಿಯತ್ತ ಮುಖ ಮಾಡಿದ್ದಾರೆ. ಇಲ್ಲಿಯೂ ಬದಲಾವಣೆ ಅಗತ್ಯವಾಗಿದೆ. ಸಿರಿಧಾನ್ಯಗಳ ಬಳಕೆ, ಅದರ ಮಹತ್ವದ ಕುರಿತು ಜನಸಾಮಾನ್ಯರಿಗೆ ಅರಿವಿನ ಕೊರತೆ ಇದೆ ಎಂದು ಹೇಳಿದರು.ನಮ್ಮಲ್ಲಿಯೂ ಹಳೆಯ ಹಾಗೂ ಸಾಂಪ್ರದಾಯಿಕ ಆರೋಗ್ಯಕರ ಆಹಾರ ಪದ್ಧತಿಗಳಿವೆ. ಅವುಗಳನ್ನು ನಿರಂತರ ಬಳಸಬೇಕಿದೆ. ಅಲ್ಲಿಯೂ ವೈದ್ಯರಿಂದ ದೂರವಿರುವ ಆಹಾರ ಪದ್ಧತಿಯನ್ನು ಅನುಸರಿಸುವ ಅಗತ್ಯವಿದೆ ಎಂದು ಕರೆ ನೀಡಿದರು.
ಬರಗಾಲದ ಮಿತ್ರ:ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಸಿರಿಧಾನ್ಯಗಳು ಕಡಿಮೆ ಫಲವತ್ತತೆಯ ಭೂಮಿಯಲ್ಲಿಯೂ ಬೆಳೆಯಲು ಸಾಧ್ಯವಾಗಿದೆ. ರಾಸಾಯನಿಕ ಗೊಬ್ಬರಗಳಿಲ್ಲದೇ, ಬರಡು ಭೂಮಿಯಲ್ಲಿಯೂ ಸಹಜವಾಗಿ ಬೆಳೆಯಬಹುದಾಗಿದೆ. ಆದ್ದರಿಂದ ಇವುಗಳನ್ನು ಬರಗಾಲದ ಮಿತ್ರ ಎಂದೇ ಕರೆಯಲಾಗುತ್ತದೆ ಎಂದರು.
ಇಂದಿನ ಯುವಜನಾಂಗ ಒತ್ತಡದ ಬದುಕಿನಲ್ಲಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆರೋಗ್ಯಯುತ ಸಮಾಜದ ನಿರ್ಮಾಣ ಮಾಡಬೇಕಾದ ಯುವಕರೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಸಿರಿಧಾನ್ಯಗಳನ್ನು ತಿನ್ನುವವರು ಆರೋಗ್ಯದಿಂದ ಸಿರಿವಂತರಾಗುವವರು ಎಂಬುದು ಗ್ರಾಮೀಣರ ನಂಬಿಕೆ. ಇದು ವೈಜ್ಞಾನಿಕವಾಗಿ ನಿಜವಾಗಿದೆ. ಈ ನಂಬಿಕೆಯೇ ಆಧುನಿಕತೆಯ ವ್ಯಸನಕ್ಕೆ ಸಿಕ್ಕ ನಗರದ ಜನರ ಜೀವನಶೈಲಿಗೆ ಹೊಸ ತಿರುವು ನೀಡುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ.ಜಗದೀಶ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ, ರೈತ ಮುಖಂಡ ಕೆ.ಟಿ.ಗಂಗಾಧರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಮಗ್ರ ಕೃಷಿ ಪದ್ಧತಿಯಲ್ಲಿ ಗಣನೀಯ ಸಾಧನೆ ಮಾಡಿದ 10 ಮಂದಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ತಲಾ ₹25,000 ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.- - - ಕೋರ್ಟ್ ಬದಲಾದ ಜೀವನಶೈಲಿಯಿಂದಾಗಿ ಎಲ್ಲರೂ ತಮ್ಮ ಆಹಾರ ಪದ್ಧತಿಯನ್ನು ಮರೆತಿರುವುದು ವಿಷಾದದ ಸಂಗತಿ. ಅನೇಕ ರೀತಿಯ ಕಾಯಿಲೆಗಳ ಹತೋಟಿಗೆ ಸಿರಿಧಾನ್ಯಗಳು ಸಹಕಾರಿಯಾಗಿವೆ. ನಾನು ಕೂಡ ಪ್ರತಿನಿತ್ಯ ರಾಗಿಗಂಜಿ, ರಾಗಿರೊಟ್ಟಿ ಮತ್ತು ಮುದ್ದೆ ಮುಂತಾದ ಆಹಾರವನ್ನು ಸೇವಿಸುವ ಅಭ್ಯಾಸ ಹೊಂದಿದ್ದೇನೆ
- ಮಧು ಎಸ್.ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ- - - -27ಎಸ್ಎಂಜಿಕೆಪಿ03:
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಬುಧವಾರ ಕೃಷಿ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಸಿರಿಧಾನ್ಯ ಹಬ್ಬವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.