ಅನ್ಯ ಭಾಷೆಯ ಬಳಕೆ ನಮ್ಮ ಭಾಷೆಯ ಸೌಂದರ್ಯ ಹಾಳುಮಾಡಬಾರದು

KannadaprabhaNewsNetwork |  
Published : Nov 29, 2024, 01:00 AM IST
ವಿಟಿಯುನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಾಳಾಸಾಹೇಬ ಲೋಕಾಪುರ,  ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ  ಎಸ್.ಎಂ.ಚಲವಾದಿ ಮತ್ತು ಯಮುನಾಬಾಯಿ ಕಲಾಚಂದ್ರ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ನಮ್ಮ ಭಾಷೆಯಲ್ಲಿ ಬಳಕೆಗೆ ಪದಗಳು ಲಭ್ಯವಿಲ್ಲದಿದ್ದರೇ ನಾವು ಇತರ ಭಾಷೆಯ ಪದಗಳನ್ನು ಬಳಸಬಹುದು ಮತ್ತು ನಮ್ಮ ಮಾತೃಭಾಷೆಯೊಂದಿಗೆ ಸಂಯೋಜಿಸಬಹುದು. ಆದರೆ, ಈ ಅನ್ಯ ಭಾಷೆಯ ಬಳಕೆ ನಮ್ಮ ಭಾಷೆಯ ಸೌಂದರ್ಯ ಹಾಳುಮಾಡಬಾರದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಮ್ಮ ಭಾಷೆಯಲ್ಲಿ ಬಳಕೆಗೆ ಪದಗಳು ಲಭ್ಯವಿಲ್ಲದಿದ್ದರೇ ನಾವು ಇತರ ಭಾಷೆಯ ಪದಗಳನ್ನು ಬಳಸಬಹುದು ಮತ್ತು ನಮ್ಮ ಮಾತೃಭಾಷೆಯೊಂದಿಗೆ ಸಂಯೋಜಿಸಬಹುದು. ಆದರೆ, ಈ ಅನ್ಯ ಭಾಷೆಯ ಬಳಕೆ ನಮ್ಮ ಭಾಷೆಯ ಸೌಂದರ್ಯ ಹಾಳುಮಾಡಬಾರದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಹೇಳಿದರು.

ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬುಧವಾರ ಬೆಳಗಾವಿ ಜಿಲ್ಲೆಯಿಂದ ರಾಜ್ಯೋತ್ಸವ ಹಾಗೂ ಈ ಬಾರಿಯ ವಿಶೇಷ ಸುವರ್ಣ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೊಸ ಭಾಷೆ ಕಲಿಯುವುದು ಬದುಕಿಗೆ ಹೊಸ ಅರ್ಥವನ್ನು ನೀಡುತ್ತದೆ. ಭಾರತವು ಒಂದು ರಾಷ್ಟ್ರವಾಗಿ ವಿಭಿನ್ನ ಸಂಸ್ಕೃತಿಗಳ ಸಮ್ಮಿಲನವಾಗಿದೆ ಮತ್ತು ಅದೇ ರೀತಿ, ಕರ್ನಾಟಕವು ಅನೇಕ ಪ್ರಪಂಚಗಳನ್ನೇ ಹೊಂದಿರುವ ಒಂದು ರಾಜ್ಯವಾಗಿದೆ ಎಂದು ಬಣ್ಣಿಸಿದರು.ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ.ಎಸ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾತೃಭಾಷೆ ಹೃದಯದ ಭಾಷೆ. ಮಾತೃಭಾಷೆಯಲ್ಲಿ ಯಾವುದಾದರೂ ವಿಷಯವನ್ನು ಯಾರಾದರೂ ಕಲಿತರೇ ಅದು ಚೆನ್ನಾಗಿ ಅರ್ಥವಾಗುತ್ತದೆ ಮತ್ತು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಮಾತೃಭಾಷೆ ವಿಷಯದ ಜ್ಞಾನದ ಜತೆಗೆ ಕೌಶಲ್ಯ ಕಲಿಸುತ್ತದೆ ಎಂದು ತಿಳಿಸಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ, ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ ಎಸ್.ಎಂ.ಚಲವಾದಿ ಮತ್ತು ಯಮುನಾಬಾಯಿ ಕಲಾಚಂದ್ರ ಅವರನ್ನು ಸನ್ಮಾನಿಸಲಾಯಿತು.ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸಿ.ಕೆ.ಸುಬ್ಬರಾಯ ಗೌರವ ಅತಿಥಿಯಾಗಿದ್ದರು. ಹಣಕಾಸು ಅಧಿಕಾರಿ ಡಾ.ಪ್ರಶಾಂತ ನಾಯಕ್ ಉಪಸ್ಥಿತರಿದ್ದರು. ಪ್ರೊ.ಬಿ.ಈ.ರಂಗಸ್ವಾಮಿ ಸ್ವಾಗತಿಸಿದರು. ಪ್ರೊ.ಟಿ.ಎನ್.ಶ್ರೀನಿವಾಸ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಭೈರವ ತಂಡದ ಹೆಸರಾಂತ ಕಲಾವಿದರು ಸಿತಾರ್ ಫ್ಯೂಷನ್ ವಾದ್ಯ ಗೋಷ್ಠಿ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮೆರಗು ತಂದ ಕಲಾತಂಡಗಳ ಪ್ರದರ್ಶನ:

ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಮೊದಲು ಕರ್ನಾಟಕದ ಸಾಂಪ್ರದಾಯಿಕ ಪ್ರಸಿದ್ಧ ನೃತ್ಯ, ಡೊಳ್ಳು ಕುಣಿತ, ಕರಡಿ ಮಜಲು ಮತ್ತು ವೀರ್ ಗಾಸೆ ಕಲಾತಂಡಗಳ ಪ್ರದರ್ಶನ ಮೂಲಕ ವಿಟಿಯುನ ರಾಜ್ಯೋತ್ಸವ ಆಚರಣೆ ಮೆರವಣಿಗೆ ಅದ್ಧೂರಿಯಾಗಿ ನಡೆಯುವ ಮೂಲಕ ಪ್ರಾರಂಭವಾಯಿತು.

ನಾನು ಹೈದರಾಬಾದಿನವನಾಗಿದ್ದರೂ ಕನ್ನಡವನ್ನು ನಿರರ್ಗಳವಾಗಿ ಮತ್ತು ಎಲ್ಲ ಸಂದರ್ಭದಲ್ಲೂ ಮಾತನಾಡಬಲ್ಲೆ. ಆದ್ದರಿಂದ ಕನ್ನಡವು ನನ್ನ ಮಾತೃಭಾಷೆಯಂತಾಗಿದೆ. ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಕೇವಲ 22 ದಿನಗಳಲ್ಲಿ ಕನ್ನಡ ಕಲಿತಿದ್ದೇನೆ. ನಾನು ಐಎಎಸ್ ಅಧಿಕಾರಿಯಾಗಿ 22 ದಿನಗಳಲ್ಲಿ ಕನ್ನಡ ಕಲಿಯಲು ಸಾಧ್ಯವಾದರೇ ಭಾರತದ ವಿವಿಧ ಭಾಗಗಳ ವಿದ್ಯಾರ್ಥಿಗಳು 2-3 ತಿಂಗಳಲ್ಲಿ ಏಕೆ ಕಲಿಯಲು ಸಾಧ್ಯವಿಲ್ಲ?. ಹೊಸ ಭಾಷೆಗಳು, ಪದಗಳನ್ನು ಕಲಿಯಲು ನಮ್ಮ ಮನವು ಹಂಬಲಿಸಬೇಕು. ಹೊಸ ಕಲಿಕೆ ಹೊಸ ಅರ್ಥವನ್ನು ಹುಟ್ಟುಹಾಕುತ್ತದೆ.

-ಮೊಹಮ್ಮದ್‌ ರೋಷನ್‌,

ಜಿಲ್ಲಾಧಿಕಾರಿ.ಮಾತೃಭಾಷೆ ಹೃದಯದ ಭಾಷೆ. ಮಾತೃಭಾಷೆಯಲ್ಲಿ ಯಾವುದಾದರೂ ವಿಷಯವನ್ನು ಯಾರಾದರೂ ಕಲಿತರೇ ಅದು ಚೆನ್ನಾಗಿ ಅರ್ಥವಾಗುತ್ತದೆ ಮತ್ತು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಮಾತೃಭಾಷೆ ವಿಷಯದ ಜ್ಞಾನದ ಜತೆಗೆ ಕೌಶಲ್ಯ ಕಲಿಸುತ್ತದೆ.

-ಪ್ರೊ.ವಿದ್ಯಾಶಂಕರ.ಎಸ್‌,
ವಿಟಿಯ ಕುಲಪತಿಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾಹೀರಾತು ನೀತಿ-2026 ಸ್ಥಗಿತಕ್ಕೆ ಒತ್ತಾಯಿಸಿ ಮನವಿ
ಧಾರ್ಮಿಕ ತ್ಯಾಜ್ಯ ಸಂಗ್ರಹ, ವಿಲೇವಾರಿಗೆ ಅಭಿಯಾನ ಆರಂಭ