ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶೈಕ್ಷಣಿಕ ಉನ್ನತಿಗೆ ಸರ್ಕಾರ ಸವಲತ್ತುಗಳ ಸಮರ್ಪಕ ಬಳಕೆ ಅನಿವಾರ್ಯವೆಂದು ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಗೌರವಾಧ್ಯಕ್ಷ, ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ ಅಭಿಪ್ರಾಯಪಟ್ಟರು.ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿಯಿಂದ ಮಂಗಳವಾರ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೊಳಗೇರಿ ನಿವಾಸಿಗಳ ಸಮಾವೇಶ ಹಾಗೂ ಬಡವರಿಗೆ ಹೊದಿಕೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಳಿಗಾಲದಲ್ಲಿ ಬಡವರಿಗೆ ಹೊದಿಕೆ ಅತ್ಯವಶ್ಯಕವಾಗಿ ಬೇಕು. ಕೊಳಗೇರಿ ನಿವಾಸಿಗಳ ಹಾಗೂ ಬಡವರ ಮೂಲಭೂತ ಸೌಲಭ್ಯಕ್ಕಾಗಿ ಗಣೇಶ್ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಕೊಳಗೇರಿಗಳ ಬಗ್ಗೆ ಅಪಾರವಾದ ಕಾಳಜಿಯಿದೆ. ಇಂತಹ ಪುಣ್ಯದ ಕೆಲಸಕ್ಕೆ ದಾನಿಗಳು ಉದಾರ ಮನಸ್ಸಿನಿಂದ ನೆರವು ನೀಡಬೇಕು.
ಬಡತನವೆಂಬ ಕಾರಣಕ್ಕೆ ಚಿಕ್ಕ ಮಕ್ಕಳನ್ನು ದುಡಿಮೆಗೆ ಕಳಿಸುವ ಬದಲು ಶಾಲೆಗೆ ಕಳಿಸಿ ಶಿಕ್ಷಣವಂತರನ್ನಾಗಿಸಿ. ಅಪ್ರಾಪ್ತ ಹೆಣ್ಣು ಮಕ್ಕಳಿಗೆ ವಿವಾಹ ಮಾಡಿದರೆ ತಂದೆ-ತಾಯಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದರು.ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ ಮಾತನಾಡಿ, ಬಡವರು ಹಾಗೂ ಕೊಳಗೇರಿಗಳ ಪರವಾಗಿ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿರುವ ಗಣೇಶ್ಗೆ ನೆಲೆಯಿಲ್ಲದಂತಾಗಿರುವುದು ನೋವಿನ ಸಂಗತಿ. ಹಾಗಾಗಿ ಕೊಳಗೇರಿ ನಿವಾಸಿಗಳು ಗಣೇಶ್ಗೆ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸ್ರುಲ್ಲಾ ಮಾತನಾಡಿ, ಸರ್ಕಾರದಿಂದ ಕೊಳಗೇರಿಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವಲ್ಲಿ ಗಣೇಶ್ರವರ ಹೋರಾಟ ನಿರಂತರವಾಗಿರುತ್ತದೆ. ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ಮನವಿ ಮಾಡಿದರು.ಈ ಸಂದಭರ್ದಲ್ಲಿ ಉದ್ಯಮಿ ಸೈಟ್ ಬಾಬಣ್ಣ, ರಾಜು ಟೈರ್ಸ್ ಮಾಲೀಕ ಅಲೆಕ್ಸಾಂಡರ್, ಜಿಲ್ಲಾ ಬಡಗಿ ಕೆಲಸಗಾರರ ಸಂಘದ ಅಧ್ಯಕ್ಷ ಎ.ಜಾಕೀರ್ ಹುಸೇನ್, ಕಾಂಗ್ರೆಸ್ ಮುಖಂಡ ಎಚ್.ಎಸ್.ಖಾನ್, ಕೆಕೆಎನ್ಎಸ್ಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್, ಕರುನಾಡ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸೈಯದ್ ಇಸ್ಮಾಯಿಲ್, ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಹೆಚ್.ಪ್ಯಾರೆಜಾನ್ ವೇದಿಕೆಯಲ್ಲಿದ್ದರು.