ಟ್ರಾಫಿಕ್‌ ನಿಯಂತ್ರಣಕ್ಕೆ ಸಾರ್ವಜನಿಕಸಾರಿಗೆಯನ್ನು ಬಳಸಿ: ಆಯುಕ್ತ ಸಿಂಗ್‌

KannadaprabhaNewsNetwork |  
Published : May 14, 2026, 03:15 AM IST
VV | Kannada Prabha

ಸಾರಾಂಶ

ನಗರದ ಹೊರ ವರ್ತುಲ ರಸ್ತೆಯಲ್ಲಿ (ಒಆರ್‌ಆರ್‌) ವಾಹನ ದಟ್ಟಣೆ ನಿಯಂತ್ರಿಸುವ ಕುರಿತು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ, ಬಿಎಂಆರ್‌ಸಿಎಲ್‌, ಪೊಲೀಸ್ ಇಲಾಖೆ, ಬಿಎಂಟಿಸಿ ಅಧಿಕಾರಿಗಳು, ಹೊರ ವರ್ತುಲ ರಸ್ತೆಯಲ್ಲಿರುವ ವಿವಿಧ ಕಂಪನಿಗಳ ಅಸೋಸಿಯೇಷನ್‌ ಸದಸ್ಯರ ಜತೆ ಬುಧವಾರ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರುನಗರದ ಹೊರ ವರ್ತುಲ ರಸ್ತೆಯಲ್ಲಿ (ಒಆರ್‌ಆರ್‌) ವಾಹನ ದಟ್ಟಣೆ ನಿಯಂತ್ರಿಸುವ ಕುರಿತು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ, ಬಿಎಂಆರ್‌ಸಿಎಲ್‌, ಪೊಲೀಸ್ ಇಲಾಖೆ, ಬಿಎಂಟಿಸಿ ಅಧಿಕಾರಿಗಳು, ಹೊರ ವರ್ತುಲ ರಸ್ತೆಯಲ್ಲಿರುವ ವಿವಿಧ ಕಂಪನಿಗಳ ಅಸೋಸಿಯೇಷನ್‌ ಸದಸ್ಯರ ಜತೆ ಬುಧವಾರ ಸಭೆ ನಡೆಸಿದರು. ನಗರ ಪೊಲೀಸ್ ಆಯುಕ್ತ ಸೀಮಂತ್‌ ಕುಮಾರ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸಂಚಾರ ದಟ್ಟಣೆ ನಿಯಂತ್ರಿಸಲು ಕಂಪನಿಗಳು ಸಹಕಾರ ನೀಡಬೇಕು. ಅದಕ್ಕೆ ಮುಖ್ಯವಾಗಿ ಕಂಪನಿಯ ನೌಕರರು ಸ್ವಂತ ವಾಹನಗಳ ಬಳಕೆ ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆ ಬಳಸಬೇಕು ಎಂದು ತಮ್ಮ ಸಿಬ್ಬಂದಿಗೆ ಕೋರಬೇಕು. ಅಲ್ಲದೆ, ಹೊರ ವರ್ತುಲ ರಸ್ತೆಯಲ್ಲಿ ಹೊಸ ರೂಪದಲ್ಲಿ ಬಸ್ ಆದ್ಯತಾ ಪಥ ನಿರ್ಮಾಣ ಮಾಡುವುದರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ನಂತರ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ಕಾರ್ತಿಕ್ ರೆಡ್ಡಿ ಮಾತನಾಡಿ, ಬಸ್ ಆದ್ಯತಾ ಪಥವನ್ನು ಹೈ ಆಕ್ಯುಪೆನ್ಸಿ ವಾಹನ (ಎಚ್‌ಒವಿ) ಮಾರ್ಗಗಳಾಗಿ ಬದಲಾವಣೆ ಮಾಡಬಹುದು. ಆಗ, ಮೂರು ಮಂದಿಗಿಂತ ಹೆಚ್ಚು ಪ್ರಯಾಣಿಕರಿರುವ ವಾಹನಗಳೂ ಈ ಮಾರ್ಗವನ್ನು ಬಳಸಬಹುದು. ಹೊರವರ್ತುಲ ರಸ್ತೆಯಲ್ಲಿ ಬಸ್‌ ಆದ್ಯತಾ ಪಥವು ಯಶಸ್ವಿ ಆಗಿತ್ತು. ಅದೇ ಆಧಾರದಲ್ಲಿ ಎಚ್‌ಒವಿ ಮಾರ್ಗಗಳು ಈ ಪ್ರದೇಶಕ್ಕೆ ಪರಿಹಾರ ನೀಡಬಹುದು ಎಂದರು.ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ್ ರೆಡ್ಡಿ ಮಾತನಾಡಿ, ಕೋವಿಡ್ ಲಾಕ್‌ಡೌನ್‌ಗೂ ಮೊದಲು ಬಸ್ ಆದ್ಯತಾ ಪಥಗಳು ಕಾರ್ಯ ನಿರ್ವಹಿಸುತ್ತಿದ್ದವು. ಆಗ ಬಸ್‌ಗಳು 15 ನಿಮಿಷ ಬೇಗ ತಲುಪುತ್ತಿದ್ದವು. ಇಂಧನವೂ ಉಳಿತಾಯವಾಗುತ್ತಿತ್ತು. ಪ್ರಯಾಣಿಕರ ಸಂಖ್ಯೆಯಲ್ಲೂ ಶೇ.4ರಷ್ಟು ಏರಿಕೆ ಆಗಿತ್ತು ಎಂದು ಮಾಹಿತಿ ಹಂಚಿಕೊಂಡರು. ಪ್ರಸ್ತುತ ಹೊರ ವರ್ತುಲ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಳು 4000 ಟ್ರಿಪ್‌ ಸಂಚರಿಸುತ್ತಿವೆ ಎಂದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಕೆ.ಬಿ.ಶಿವಕುಮಾರ್ ಮಾತನಾಡಿ, ಹೊರ ವರ್ತುಲ ರಸ್ತೆಯಲ್ಲಿ ಇರುವ ಕಂಪನಿಗಳಿಗೆ ವಿಶೇಷ ಬಸ್ ಸೇವೆ ಕಲ್ಪಿಸಲು ಬಿಎಂಟಿಸಿ ಸಂಪರ್ಕಿಸಬಹುದು. ಕೋವಿಡ್‌ಗೂ ಮುನ್ನ ಐ.ಟಿ ಪಾರ್ಕ್‌ಗಳಿಗೆ ಮೀಸಲಾದ ಬಸ್ ವ್ಯವಸ್ಥೆಯನ್ನು ಮತ್ತೆ ಆರಂಭಿಸುವಂತೆಯೂ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.ಜಿಬಿಎ ಆಯುಕ್ತ ಮಹೇಶ್ವರ ರಾವ್‌ ಮಾತನಾಡಿ, ಹೊರ ವರ್ತುಲ ರಸ್ತೆಯಲ್ಲಿ ಸುಧಾರಣೆ ತರಲು ಮತ್ತಷ್ಟು ಯೋಜನೆ ಜಾರಿಗೆ ತರಲಾಗುವುದು. ಮೂಲಸೌಕರ್ಯಗಳನ್ನೂ ಕಲ್ಪಿಸಲಾಗುವುದು. ಇಬ್ಲೂರ್ ಜಂಕ್ಷನ್‌ನ ಸಂಪೂರ್ಣ ಮರು ವಿನ್ಯಾಸ ಮಾಡಲು ಚಿಂತಿಸಲಾಗಿದೆ. ಅಲ್ಲದೆ ಇಬ್ಲೂರ್ ಜಂಕ್ಷನ್‌ನಲ್ಲಿ ಹೆಚ್ಚುವರಿ ಮೇಲುಸೇತುವೆ ಹಾಗೂ ಮಾರತ್‌ಹಳ್ಳಿಯ ರೇನ್‌ ಬೋ ಆಸ್ಪತ್ರೆ ಬಳಿ ಮತ್ತೊಂದು ಮೇಲುಸೇತುವೆ ನಿರ್ಮಾಣಕ್ಕೂ ಚಿಂತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ವಿವಿಧ ಐಟಿ ಕಂಪನಿಗಳ ಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ಇದೇ ವೇಳೆ ಹೇಳಿಕೊಂಡರು. ಸಂಚಾರ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ ಹಾಗೂ ಇತರೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಚ್ಚಿಟ್ಟಿದ್ದ ಮೊಬೈಲನ್ನು ಕೇಳಿದ್ದಕ್ಕೆಚಾಕು ಇರಿದು ಗೆಳೆಯನ ಕೊಂದ
ಕಾರಂತ ಬಡಾವಣೆ ಮಾಲೀಕರಿಗೆ 18000 ಸೈಟ್‌