ನಾಳೆ ಉತ್ತರ ಕನ್ನಡ ಜಿಲ್ಲಾ ಮಟ್ಟದ ದೇವಸ್ಥಾನಗಳ ಅಧಿವೇಶನ

KannadaprabhaNewsNetwork |  
Published : Feb 20, 2024, 01:46 AM IST
ಫೋಟೋ : ೧೯ಕೆಎಂಟಿ_ಎಫ್ ಇಬಿ_ಕೆಪಿ1 : ಸುದ್ದಿಗೋಷ್ಠಿಯಲ್ಲಿ ಗುರುಪ್ರಸಾದ ಗೌಡ ಮಾತನಾಡಿದರು.  ಸಂದೀಪ ಭಂಡಾರಿ, ಅಶೋಕ ಆಚಾರ್ಯ ಇದ್ದಾರೆ. | Kannada Prabha

ಸಾರಾಂಶ

ಫೆ. ೨೧ರಂದು ಕುಮಟಾ ಪಟ್ಟಣದ ಮೂರುಕಟ್ಟೆ ಮಹಾಲಸಾ ಕಲಾಕ್ಷೇತ್ರದಲ್ಲಿ ಬೆಳಗ್ಗೆ ೧೦ ಗಂಟೆಯಿಂದ ಜಿಲ್ಲಾಮಟ್ಟದ ದೇವಸ್ಥಾನಗಳ ಅಧಿವೇಶನ ನಡೆಯಲಿದೆ. ದೇವಸ್ಥಾನಗಳಲ್ಲಿನ ದೇವತಾತತ್ವ ರಕ್ಷಣೆ, ಧರ್ಮಪ್ರಸಾರ, ಭಕ್ತಾದಿಗಳ ಮೂಲಸೌಕರ್ಯ, ವಸ್ತ್ರಸಂಹಿತೆ ಹಾಗೂ ಸಂಘಟನೆಯ ಉದ್ದೇಶದಿಂದ ಅಧಿವೇಶನ ಹಮ್ಮಿಕೊಳ್ಳಲಾಗಿದೆ.

ಕುಮಟಾ: ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಆಶ್ರಯದಲ್ಲಿ ಫೆ. ೨೧ರಂದು ಪಟ್ಟಣದ ಮೂರುಕಟ್ಟೆ ಮಹಾಲಸಾ ಕಲಾಕ್ಷೇತ್ರದಲ್ಲಿ ಬೆಳಗ್ಗೆ ೧೦ ಗಂಟೆಯಿಂದ ಜಿಲ್ಲಾಮಟ್ಟದ ದೇವಸ್ಥಾನಗಳ ಅಧಿವೇಶನ ನಡೆಯಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯಸಮನ್ವಯಕ ಗುರುಪ್ರಸಾದ ಗೌಡ ತಿಳಿಸಿದರು.

ಮಹಾಸತಿ ಸಭಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ, ಇತ್ತೀಚೆಗೆ ದೇವಸ್ಥಾನಗಳ ಮೇಲೆ ವಿವಿಧ ಬಗೆಯಲ್ಲಿ ಆಕ್ರಮಣ ನಡೆಯುತ್ತಿದ್ದು ದೇವಸ್ಥಾನಗಳ ಸರ್ಕಾರೀಕರಣ, ಮೂರ್ತಿಭಂಜನ, ಅಪವಿತ್ರಗೊಳಿಸುವುದು, ಅನಧಿಕೃತವೆಂದು ದೇವಸ್ಥಾನ ಧ್ವಂಸ, ದೇವರ ಜಮೀನು ಲೂಟಿ, ದೇವನಿಧಿ ಅಪವ್ಯಯ ಹೆಚ್ಚಿದೆ. ಮುಜರಾಯಿ ಇಲಾಖೆಗೆ ಸೇರಿರದ ಹಲವು ದೇವಸ್ಥಾನಗಳಿಗೂ ಸರ್ಕಾರ ನೋಟೀಸ್ ನೀಡುತ್ತಿದ್ದು, ಇಲ್ಲಿನ ಆದಾಯದ ಮೇಲೆ ಕಣ್ಣು ಬಿದ್ದಿದೆ. ಈ ಎಲ್ಲ ವಿಚಾರಗಳನ್ನು ಅಧಿವೇಶನದಲ್ಲಿ ಚರ್ಚಿಸಲಾಗುವುದು. ಇದರೊಟ್ಟಿಗೆ ದೇವಸ್ಥಾನಗಳಲ್ಲಿನ ದೇವತಾತತ್ವ ರಕ್ಷಣೆ, ಧರ್ಮಪ್ರಸಾರ, ಭಕ್ತಾದಿಗಳ ಮೂಲಸೌಕರ್ಯ, ವಸ್ತ್ರಸಂಹಿತೆ ಹಾಗೂ ಸಂಘಟನೆಯ ಉದ್ದೇಶದಿಂದ ಅಧಿವೇಶನ ಹಮ್ಮಿಕೊಳ್ಳಲಾಗಿದೆ.

ಅಧಿವೇಶನದಲ್ಲಿ ಹಳದೀಪುರದ ಶ್ರೀ ವಾಮನಾಶ್ರಮ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಪ್ರಮುಖವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಹಾಗೂ ಶಿರಸಿ ತಾಲೂಕಿನ ೨೦೦ಕ್ಕೂ ಹೆಚ್ಚು ಆಮಂತ್ರಿತ ಪ್ರಮುಖ ದೇವಾಲಯಗಳ ಟ್ರಸ್ಟಿಗಳು, ಅರ್ಚಕರು, ಪ್ರತಿನಿಧಿಗಳು, ಪ್ರಮುಖರೊಂದಿಗೆ ದೇವಸ್ಥಾನಗಳ ರಕ್ಷಣೆಗಾಗಿ ಹೋರಾಡುವ ವಕೀಲರು, ಧಾರ್ಮಿಕ ಚಿಂತಕರು ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ದೇವಸ್ಥಾನಗಳನ್ನು ಸನಾತನ ಧರ್ಮಪ್ರಸಾರ ಕೇಂದ್ರಗಳನ್ನಾಗಿಸುವುದು, ದೇವಸ್ಥಾನಗಳನ್ನು ಸರ್ಕಾರೀಕರಣದಿಂದ ಮುಕ್ತಗೊಳಿಸುವುದು, ದೇವಸ್ಥಾನ-ತೀರ್ಥಕ್ಷೇತ್ರ ಪರಿಸರಗಳಲ್ಲಿ ಮದ್ಯ-ಮಾಂಸ ನಿಷೇಧ, ದೇವಸ್ಥಾನಗಳ ಜೀರ್ಣೋದ್ಧಾರ ಮುಂತಾದ ಆಯ್ದ ವಿಷಯಗಳನ್ನೂ ಚರ್ಚಿಸಲಾಗುವುದು ಎಂದರು. ಮಹಾಸಂಘವು ಕಳೆದ ೬ ತಿಂಗಳಲ್ಲಿ ದೇಶಾದ್ಯಂತ ೨೭೫ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ತಂದಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಅಶೋಕ ಆಚಾರ್ಯ, ಸಂದೀಪ ಭಂಡಾರಿ, ಸಂತೋಷ ಭಟ್ಕಳಕರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ