ಕನ್ನಡಪ್ರಭ ವಾರ್ತೆ, ಚಿತ್ರದುರ್ಗಮಕ್ಕಳಿಗೆ ನೀಡುವ ಲಸಿಕೆಗಳು ಎದೆ ಹಾಲಿನಷ್ಟೇ ಮಹತ್ವವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ತಿಳಿಸಿದರು.
ಲಸಿಕಾ ಅಧಿವೇಶನದ ಪೂರ್ವ ಸಿದ್ಧತಾ ಮಾನದಂಡಗಳನ್ನು ಪರಿಶೀಲಿಸಿ ಮಾತನಾಡಿದ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ತಾಯಂದಿರು ತಮ್ಮ ಮಕ್ಕಳನ್ನು 2 ವರ್ಷದಲ್ಲಿ 7 ಬಾರಿ ಲಸಿಕಾ ಕೇಂದ್ರಕ್ಕೆ ಕರೆ ತರಬೇಕು. 12 ಮಾರಕ ರೋಗಗಳ ವಿರುದ್ಧ ಲಸಿಕೆ ಕೊಡಿಸಿ ಜವಾಬ್ದಾರಿ ತೋರಿ ಮರಣ ತಪ್ಪಿಸಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಮಾತನಾಡಿ, ಮೊದಲ ಹೆರಿಗೆ ಸಿಜೇರಿಯನ್ ಆಗಿದ್ದರೆ ಜನನದ ನಡುವೆ ಕನಿಷ್ಠ 4 ರಿಂದ 5 ವರ್ಷವಾದರೂ ಅಂತರವಿರಲಿ. ಇದಕ್ಕಾಗಿ ಕುಟುಂಬ ಯೋಜನೆ ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು.ಮಕ್ಕಳಿಗೆ ನೀಡುವ ಪೂರಕ ಪೌಷ್ಟಿಕ ಆಹಾರ ತಯಾರಿಸುವ ಬಗ್ಗೆ ತಾಯಂದಿರು ತಿಳಿದು ಕೊಂಡಿರಬೇಕು ಎಂದರು.ತಾಲೂಕು ಆರೋಗ್ಯ ಸುರಕ್ಷತಾಧಿಕಾರಿ ಕಾತ್ಯಾಯಣಮ್ಮ ಲಸಿಕಾ ಸಂದೇಶಗಳು, ಲಸಿಕಾ ವೇಳಾಪಟ್ಟಿ ಯಾವ ಲಸಿಕೆಗಳನ್ನು ಮಕ್ಕಳಿಗೆ ಯಾವಾಗ ಕೊಡಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ 13 ಮಕ್ಕಳಿಗೆ ವಿವಿಧ ಹಂತಗಳ ಲಸಿಕೆ ನೀಡಲಾಯಿತು.ನಗರ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ರೂಪ, ಆಶಾ ಕಾರ್ಯಕರ್ತೆ ಮಂಜುಳ, ನೇತ್ರಾವತಿ, ಅಂಗನವಾಡಿ ಕಾರ್ಯಕರ್ತೆ ನಸೀಮಾ ಬಾನು ತಾಯಂದಿರು ಮಕ್ಕಳು ಉಪಸ್ಥಿತರಿದ್ದರು.