ರಾಣಿಬೆನ್ನೂರು: ವಚನ ಸಾಹಿತ್ಯ ಭಾರತೀಯ ಜ್ಞಾನ ಪರಂಪರೆಯ ಪರಿಪಕ್ವ ಫಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು. ನಗರದ ಸ್ಟೇಷನ್ ರಸ್ತೆ ವರ್ತಕರ ಸಮುದಾಯ ಭವನದಲ್ಲಿ ಸ್ಥಳೀಯ ಪರಿವರ್ತನ ವತಿಯಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಆಶಯ ಭಾಷಣ ಮಾಡಿದರು.
ವಚನ ಸಾಹಿತ್ಯ ಭಕ್ತಿ, ಜ್ಞಾನ, ಕರ್ಮದ ತ್ರಿವೇಣಿ ಸಂಗಮವಾಗಿದೆ. ಭಾರತೀಯ ಪರಂಪರೆಯ ಪುನರುತ್ಥಾನ ಚಳವಳಿ ಭಗವಂತನ ಅವತಾರವಾಗಿದೆ. ಭಗವಂತ ವಚನಕಾರರ ರೂಪದಲ್ಲಿ ಹುಟ್ಟಿ ಬಂದಿದ್ದಾನೆ. ಪಾಶ್ಚಾತ್ಯ ಮನೋಭಾವದಲ್ಲಿ ವಚನಗಳನ್ನು ಅರ್ಥೈಸುವುದು ಸರಿಯಲ್ಲ. ವಚನ ಸಾಹಿತ್ಯ ಜಾತಿಗೆ ಸೀಮಿತ ಅಲ್ಲ. ವಚನಕಾರರನ್ನು ಜಾತಿಗೆ ಸೀಮಿತ ಮಾಡಬಾರದು. ವಚನಕಾರರು ಸಮಾಜ ಜೋಡಿಸುವ ಕೆಲಸ ಮಾಡಿದ್ದಾರೆ. ವಚನ ದರ್ಶನ ಸತ್ಯದ ದರ್ಶನ ಮಾಡಿಸುತ್ತದೆ. ಭಾರತೀಯ ಸಂಸ್ಕೃತಿ ಪ್ರಶ್ನಿಸುವ ಮನೋಭಾವ ಹೊಂದಿದೆ. ನಮ್ಮ ಪೂರ್ವಿಕರು ಪಂಚಭೂತಗಳನ್ನು ದೈವಿ ಸ್ವರೂಪದಲ್ಲಿ ನೋಡುವುದನ್ನು ಕಲಿಸಿದರು. ಆದರೆ ನಾವು ಅದನ್ನು ಮರೆತಿದ್ದರಿಂದ ಸಮಸ್ಯೆ ಎದುರಿಸುತ್ತಿದ್ದೇವೆ. ವಚನ ಶೋಷಣೆ ಹೇಳಲ್ಲ, ಪೋಷಣೆ ಮಾಡುವುದು ಕಲಿಸುತ್ತದೆ ಎಂದರು. ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.ಪರಿವರ್ತನ ಸಂಸ್ಥೆ ಅಧ್ಯಕ್ಷ ಎಸ್.ಜಿ. ವೈದ್ಯ ಪುಸ್ತಕ ಪರಿಚಯ ಮಾಡಿಸಿದರು. ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡ್ರ ಅಧ್ಯಕ್ಷತೆ ವಹಿಸಿದ್ದರು.ಡಾ. ನಾರಾಯಣ ಪವಾರ, ಪ್ರವೀಣ ಕೊಪರ್ಡೆ, ಸುಮಾ ಉಪ್ಪಿನ, ಪುಷ್ಪಾ ಬದಾಮಿ, ಕೆ.ಎನ್. ಪಾಟೀಲ, ಗವಿಸಿದ್ದಪ್ಪ ದ್ಯಾಮಣ್ಣನವರ, ಡಾ. ಬಸವರಾಜ ಕೇಲಗಾರ, ಭಾರತಿ ಜಂಬಗಿ, ಸುವರ್ಣಮ್ಮ ಪಾಟೀಲ ಮತ್ತಿತರರಿದ್ದರು.ಪೂತನಿ ಕೃಷ್ಣ ಬಲರಾಮನಿಗೆ ಸುಂದರ ಕನ್ಯೆಯ ರೂಪದಲ್ಲಿ ವಿಷ ಉಣಿಸಲು ಬಂದಿದ್ದಳು. ಅದೇ ರೀತಿ ನಮ್ಮಲ್ಲೂ ಮತಾಂಧರು ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಆಕೆಯಂತೆ ವೇಷ ಧರಿಸಿ ಬಂದವರು ಇದ್ದಾರೆ. ಅವರಿಂದ ಬಹಳ ಹುಷಾರಾಗಿ ಇರಬೇಕು ಎಂದು ವಿಪ ಸದಸ್ಯ ಸಿ.ಟಿ. ರವಿ ಹೇಳಿದರು.