ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಾಲ್ಮೀಕಿ ಜಯಂತಿ
ಸಂಘಟಿತ ಇಚ್ಛಾಶಕ್ತಿಯನ್ನು ಮೈಗೂಡಿಸಿಕೊಂಡು ವಾಲ್ಮೀಕಿ ಸಮುದಾಯ ಸಂಘಟಿತರಾದಲ್ಲಿ ಸಮಾಜದ ಅಭಿವೃದ್ಧಿಗೆ ಸದಾ ನನ್ನ ಸಹಕಾರ ಇರುತ್ತದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗು ತಾಲೂಕು ಪಂಚಾಯ್ತಿ ಸಹಯೋಗದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದೂಗಳಿಗೆ ರಾಮಾಯಣ ಮತ್ತು ಮಹಾಭಾರತ ಎರಡೂ ಧರ್ಮ ಗ್ರಂಥಗಳಾಗಿವೆ. ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಸಾಮಾಜಿಕ ತತ್ವ ಪ್ರತಿಪಾದಿಸುವ ಜೊತೆ ಮಾನವೀಯ ಗುಣಗಳನ್ನು ಬಿಂಬಿಸುತ್ತವೆ. ಮನಃ ಪರಿವರ್ತನೆ ಮೂಲಕ ಎನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಬೇಡನಾಗಿದ್ದ ವಾಲ್ಮೀಕಿ ಮಹಾಕವಿಯಾಗಿದ್ದು ಇದಕ್ಕೆ ಸಾಕ್ಷಿ. ಆ ಮಹಾಕವಿ ಸಮುದಾಯದವರು ತಾಲೂಕಿನಲ್ಲಿ ಗಣನೀಯ ಪ್ರಮಾಣದಲ್ಲಿದ್ದು. ಎಲ್ಲರೂ ಒಗ್ಗಟ್ಟಾಗಿ ಮುಂದೆ ಬಂದರೆ ಆ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂದರು.ನಮ್ಮ ಕ್ಷೇತ್ರದ ಕೆದಿಗೆರೆ, ಯಗಟಿ, ಹಿರೇನಲ್ಲೂರು ಮತ್ತಿತರ ಕಡೆ ವಾಲ್ಮೀಕಿ ಸಮಾಜ ಭವನಗಳ ನಿರ್ಮಾಣಕ್ಕಾಗಿ ತಲಾ ₹15 ಲಕ್ಷ ನಂತೆ ಅನುದಾನ ನೀಡಿದ್ದರೂ ಕೂಡ ಇಚ್ಛಾಶಕ್ತಿ ಮತ್ತು ಸಂಘಟನೆ ಕೊರತೆಯಿಂದ ಸಮಾಜದವರು ಭವನ ನಿರ್ಮಾಣಕ್ಕೆ ಮುಂದೆ ಬಾರದಿರುವುದು ಬೇಸರದ ಸಂಗತಿ. ತಮಗೆ ಈ ಸಮಾಜದ ಬಗ್ಗೆ ಅಭಿಮಾನವಿದ್ದು ಈಗಲಾದರೂ ಸಂಘಟಿತರಾಗಿ ಸಮಾಜದ ಸಂಘಟನೆಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ಹಾವೇರಿ ಜಿಲ್ಲೆಯ ಅಣಜಿ ಕಾಲೇಜು ಉಪನ್ಯಾಸಕ ಎಚ್.ಇ. ರವಿಕುಮಾರ್ ಮಹರ್ಷಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದರು. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ತಹಸೀಲ್ದಾರ್ ಪೂರ್ಣಿಮಾ, ತಾಪಂ ಇಒ ಪ್ರವೀಣ್, ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಬಿಸಲೆರೆ ರಮೇಶ್, ಗೌರವಾಧ್ಯಕ್ಷ ಕೆ.ಕೆ.ಮಂಜು, ಕಾರ್ಯಾಧ್ಯಕ್ಷ ಸೋಮನಹಳ್ಳಿ ಸಂತೋಷ್, ಸಮಾಜ ಕಲ್ಯಾಣಾಧಿಕಾರಿ ನಟರಾಜ್,, ಜಿಲ್ಲಾ ಕೆಡಿಪಿ ನಾಮ ನಿರ್ದೇಶಿತ ಸದಸ್ಯ ಗುಮ್ಮನಹಳ್ಳಿ ಅಶೋಕ್, ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಎಸ್.ರಾಜು, ನಿತ್ಯಾನಂದ, ಸುಭಾಷಿಣಿ, ಪಾರ್ವತಿ, ಶಶಿಧರ್. ಮಲ್ಲೇಶ್ ಮತ್ತಿತರರು ಇದ್ದರು.
17ಕೆಕೆಡಿಯು1.ಕಡೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಮಾಜದ ಮಕ್ಕಳನ್ನು ಪುರಸ್ಕರಿಸಲಾಯಿತು.
17ಕೆಕೆಡಿಯು1ಎ.ಕಡೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಶಾಸಕ ಕೆ.ಎಸ್. ಆನಂದ್, ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜ್ ಮತ್ತಿತರರು ಇದ್ದರು.