ಮೌಲ್ಯ ಕೇವಲ ಭೌತಿಕ ಬೆಲೆಯಲ್ಲ: ಡಾ. ಚಿಂತಾಮಣಿ

KannadaprabhaNewsNetwork |  
Published : May 27, 2026, 01:30 AM IST
9 | Kannada Prabha

ಸಾರಾಂಶ

ಮೌಲ್ಯ ಎಂದರೆ ಕೇವಲ ಭೌತಿಕ ಬೆಲೆಯಲ್ಲ. ಚಿಂತನೆ, ಭಾವನೆ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಗೌರವಿಸುವುದೇ ನಿಜವಾದ ಮೌಲ್ಯ. ಕೇವಲ ಒಂದು ಮೌಲ್ಯದಿಂದ ನಮಗೆಲ್ಲಾ ಮೌಲ್ಯಗಳು ಲಭ್ಯವಾಗಬೇಕಾದರೆ ಅದು ನಮ್ಮ ಪ್ರಾಮಾಣಿಕತೆಯಿಂದ ಮಾತ್ರ ಸಾಧ್ಯ ಎಂದು ಸಾಹಿತಿ ಡಾ. ಚಿಂತಾಮಣಿ ಕೊಡ್ಲೆಕೆರೆ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರುಮೌಲ್ಯ ಎಂದರೆ ಕೇವಲ ಭೌತಿಕ ಬೆಲೆಯಲ್ಲ. ಚಿಂತನೆ, ಭಾವನೆ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಗೌರವಿಸುವುದೇ ನಿಜವಾದ ಮೌಲ್ಯ. ಕೇವಲ ಒಂದು ಮೌಲ್ಯದಿಂದ ನಮಗೆಲ್ಲಾ ಮೌಲ್ಯಗಳು ಲಭ್ಯವಾಗಬೇಕಾದರೆ ಅದು ನಮ್ಮ ಪ್ರಾಮಾಣಿಕತೆಯಿಂದ ಮಾತ್ರ ಸಾಧ್ಯ ಎಂದು ಸಾಹಿತಿ ಡಾ. ಚಿಂತಾಮಣಿ ಕೊಡ್ಲೆಕೆರೆ ಅಭಿಪ್ರಾಯಪಟ್ಟರು.ತುಮಕೂರು ವಿಶ್ವವಿದ್ಯಾನಿಲಯದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಸಮಿತಿ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಸಹಯೋಗದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪ್ರೇರಣಾ ಉಪನ್ಯಾಸ-6 ಯುವ ಜನತೆಗೆ ಬೇಕಾದ ಜೀವನ ಮೌಲ್ಯಗಳು ಮತ್ತು ಸಾಹಿತ್ಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಯಾರೂ ಕೂಡ ರಾತ್ರೋರಾತ್ರಿ ದೊಡ್ಡವರಾಗಲು ಅಥವಾ ಪ್ರಸಿದ್ಧರಾಗಲು ಸಾಧ್ಯವಿಲ್ಲ. ನಿಷ್ಠೆ, ಏಕಾಗ್ರತೆ ಮತ್ತು ದೀರ್ಘಕಾಲದ ತಪಸ್ಸಿನಿಂದ ಮಾತ್ರ ಶ್ರೇಷ್ಠತೆ ಸಾಧ್ಯ. ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳ ಅರಿವು ಮೂಡಬೇಕಿದೆ. ಪಠ್ಯದ ಮೂಲಕವೇ ಮೌಲ್ಯಗಳನ್ನು ಅಳವಡಿಸಿಕೊಂಡು ಪರೀಕ್ಷಿಸಿಕೊಳ್ಳಬೇಕು. ಗುರು-ಹಿರಿಯರ ನಡೆ ಹಾಗೂ ವರ್ತನೆಗಳು ಇಂದಿನ ಯುವಕರಿಗೆ ಮಾರ್ಗದರ್ಶನವಾಗಬೇಕು. ವಿಚಾರದ ಬೆಂಬಲವಿಲ್ಲದ ಮೌಲ್ಯಗಳು ಕುರುಡು, ಆದರೆ ಭಾವನೆ ಮತ್ತು ಕ್ರಿಯೆಗಳ ಮೂಲಕ ಪಡೆಯುವ ಮೌಲ್ಯಗಳು ಬೆಳಕಿನಂತಿರುತ್ತವೆ. ಯುವಜನರಲ್ಲಿ ಹುಸಿ ಸಂಕಲ್ಪಕ್ಕಿಂತ ದೃಢ ಸಂಕಲ್ಪವಿರಬೇಕು ಎಂದರು. ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀ ಮಹಾರಾಜ್ ಮಾತನಾಡಿ, ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಜ್ಞಾನದ ಆಹಾರವನ್ನು ನೀಡುತ್ತಿದೆ. ಆದರೆ ಇಂದಿನ ದಿನಗಳಲ್ಲಿ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಲಾಗುತ್ತಿದೆ. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರು ವಿದ್ಯಾವಂತ ನಾಗರಿಕರೇ ಹೊರತು ಅನಾಗರಿಕರಲ್ಲ. ಇದರ ಪರಿಣಾಮವಾಗಿ ಹಲವಾರು ಕನಸುಗಳನ್ನು ಹೊತ್ತಿದ್ದ ಪುಟ್ಟ ಮನಸ್ಸುಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಶೋಚನೀಯ. ಇಂದಿನ ಯುವ ಪೀಳಿಗೆ ಕೇವಲ ಅಂಕಗಳಿಗಾಗಿ ಮಾತ್ರ ಶಿಕ್ಷಣ ಪಡೆಯುತ್ತಿರುವುದು ಬೇಸರದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.ಮೆಕಾಲೆ ಅವರ ಕಾಲದಿಂದ ನಮಗೆ ಶಿಕ್ಷಣ ಬಂದಿದೆ ಎಂದು ನಾವು ಭಾವಿಸುತ್ತೇವೆ. ಆದರೆ ನಮ್ಮಲ್ಲಿ ಕ್ರಿಸ್ತ ಪೂರ್ವ ೭೯೫ ಕ್ಕೂ ಮುಂಚಿತವಾಗಿಯೇ ಗುರು-ಮುನಿಗಳಿಂದ ಶಿಕ್ಷಣ ಪಡೆಯುತ್ತಿದ್ದೆವು ಎಂಬುದನ್ನು ಮರೆಯಬಾರದು. ಯುವಕರಿಂದ ಬಲಿಷ್ಠ ಭಾರತ ನಿರ್ಮಾಣವಾಗಲು ಇಂತಹ ಪ್ರೇರಣಾ ಉಪನ್ಯಾಸಗಳು ಅಗತ್ಯ. ಇಂದು ಗ್ರಂಥಾಲಯಗಳ ಬಳಕೆ ಕಡಿಮೆಯಾಗಿದೆ. ಓದುವ ಅಭ್ಯಾಸದಿಂದ ಕಳೆದುಕೊಳ್ಳುವ ವಸ್ತು ಯಾವುದೂ ಇಲ್ಲ. ಸ್ನೇಹಿತರು, ಸಹಚರರು ದಾರಿ ತಪ್ಪಿಸಬಹುದು, ಆದರೆ ಪುಸ್ತಕಗಳು ಎಂದಿಗೂ ನಿಮ್ಮನ್ನು ದಾರಿ ತಪ್ಪಿಸುವುದಿಲ್ಲ ಎಂದರು.ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು ಅಧ್ಯಕ್ಷೀಯ ನುಡಿಗಳನ್ನಾಡಿದರು. ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಸಮಿತಿಯ ಅಧ್ಯಕ್ಷರಾದ ಪ್ರೊ. ಜಿ. ಸುದರ್ಶನ ರೆಡ್ಡಿ ಅವರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಿಣಿ ವಂದಿಸಿದರು.ಡಾ. ಅಶ್ವಿನಿ ನಿರೂಪಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ. ಮೋಹನ ಎಚ್.ಎಸ್. ಹಾಗೂ ಉಪನ್ಯಾಸ ಕಾರ್ಯಕ್ರಮ ಸಮಿತಿ ಸಂಚಾಲಕ ಡಾ. ನೀಲಕಂಠ ಎನ್. ಟಿ. ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಳ ಸಂತೆಯಲ್ಲಿ ರಸಗೊಬ್ಬರ ಮಾಡಿದರೆ ಕಠಿಣ ಕ್ರಮ
ಸಿಲೆಂಡರ್‌ ಪೂರೈಕೆ ಮಾಡುತ್ತಿದ್ದ ವ್ಯಕ್ತಿಯಿಂದ ವಂಚನೆ