ಹುಬ್ಬಳ್ಳಿ:ವಂದೇ ಮಾತರಂ ರಾಷ್ಟ್ರೀಯ ಗೀತೆಯು ಜನರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸುವ ಜತೆಗೆ ದೇಶ ವಿರೋಧಿ ಶಕ್ತಿಗಳನ್ನು ಸದೆಬಡೆಯಲು ಆಧಾರವಾಗಿ ನಿಂತ ಗೀತೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಬಂಗಾಳಿ ಕವಿ ದಿ. ಬಂಕಿಮಚಂದ್ರ ಚಟರ್ಜಿ ರಚಿಸಿದ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಗೆ 150 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯ ಸಭಾಭವನದಲ್ಲಿ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಂಗಾಳದಲ್ಲಿ ಸನ್ಯಾಸಿ ಚಳವಳಿ ನಡೆದ ಸಂದರ್ಭದಲ್ಲಿ ಕವಿ ಬಂಕಿಮಚಂದ್ರ ಚಟರ್ಜಿ ಅವರು ಬಂಗಾಳದ ಆನಂದಮಠದ ಬಗ್ಗೆ ಕಾದಂಬರಿ ಬರೆಯುವ ಸಂದರ್ಭದಲ್ಲಿ ವಂದೇ ಮಾತರಂ ಗೀತೆ ರಚನೆ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ಈ ಗೀತೆ ಹಾಗೂ ಗೀತೆ ರಚನೆಕಾರರಾದ ಚಟರ್ಜಿ ಅವರು ಪ್ರತಿಯೊಬ್ಬ ಭಾರತೀಯರ ಮನದಲ್ಲಿ ಅಚ್ಚಳಿಯದ ಹಾಗೆ ಉಳಿದುಕೊಂಡಿದ್ದಾರೆ ಎಂದು ಶ್ಲಾಘಿಸಿದರು.ಭಾರತದ ಸ್ವದೇಶಿ ಚಳವಳಿಯ ಘೋಷ ವಾಕ್ಯವು ಸಹ ವಂದೇ ಮಾತರಂ ಎಂದೆ ಆಗಿತ್ತು. ಆಗ ಅದು ಬಹುದೊಡ್ಡ ಪ್ರೇರಣೆಯಾಗಿತ್ತು. ಆದರೆ ಅಂದಿನ ಬ್ರಿಟಿಷರು ಜನರ ಮನದಲ್ಲಿ ದೇಶ ಭಕ್ತಿಯ ಕಿಡಿಯನ್ನು ಹೊತ್ತಿಸಿದ ಆ ಗೀತೆಯನ್ನು ತುಂಡರಿಸುವ ಕೆಲಸ ಮಾಡಿದ್ದು, ದುರಂತದ ಸಂಗತಿಯಾಗಿದೆ ಎಂದರು.
ಮಮತಾ ಬ್ಯಾನರ್ಜಿ ಅವರಂತಹ ಕಮ್ಯುನಿಸ್ಟರು ಅಧಿಕಾರಕ್ಕೆ ಬಂದಾಗಿನಿಂದಲೂ ಬಂಗಾಳವನ್ನು ಕಮ್ಯುನಿಸ್ಟ್ ರಾಜ್ಯವನ್ನಾಗಿಸಿದ್ದಾರೆ. ಮೂಲ ಬಂಗಾಲವನ್ನು ಅಳಿಸಿ, ಕಮ್ಯುನಿಸ್ಟ್ ಮನೋಭಾವ ಹೇರುವ ನೀಚ ಕೆಲಸ ಮಾಡಿದ್ದಾರೆ. ಬಂಗಾಲ ಒಡೆಯಲು ಮುಂದಾದ ಚಳವಳಿ ಆರಂಭವಾಗಿದ್ದು ಇತಿಹಾಸದ ಘಟನೆಯಾಗಿದೆ. ಬಾಲ್ ಗಂಗಾಧರ ತಿಲಕ, ಲಾಲಾ ರಜಪತರಾಯ್ ಸೇರಿದಂತೆ ಅನೇಕ ಕ್ರಾಂತಿಯ ಹಿಡಿಗಳು ಹೊರಹೊಮ್ಮಿದ್ದು, ಸಹ ಇದೇ ಸಂದರ್ಭದಲ್ಲಿ ಎಂದು ಜೋಶಿ ಶ್ಲಾಘಿಸಿದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು. ಸಮಾರಂಭದಲ್ಲಿ ಮಾಜಿ ಶಾಸಕ ಅಶೋಕ ಕಾಟವೆ, ಮುಖಂಡರಾದ ಲಿಂಗರಾಜ ಪಾಟೀಲ, ಮಧುಸೂದನ್ ಕುಲಕರ್ಣಿ, ಜಗದೀಶ ಹಿರೇಮನಿ, ಮಹೇಂದ್ರ ಕೌತಾಳ, ಯುವ ಮುಖಂಡರಾದ ಶರಣು ಅಂಗಡಿ, ಮಂಜುನಾಥ ಹೆಬಸೂರ ಸೇರಿದಂತೆ ವಿವಿಧ ಮೋರ್ಚಾ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.