ಗ್ರಾಮೀಣ ಅಡಕೆ ಬೆಳೆಗಾರರ ಆರ್ಥಿಕ ಚೈತನ್ಯಕ್ಕೆ ವಿವಿಧ ಕಾರ್ಯಕ್ರಮ

KannadaprabhaNewsNetwork | Published : Oct 21, 2023 12:30 AM

ಸಾರಾಂಶ

ಸಾಗರದಲ್ಲಿ ಸುಸಜ್ಜಿತ ನೂತನ ಕಚೇರಿ ತೆರೆಯಲಾಗಿದೆ. ಮಲ್ಟಿಫ್ಲೆಕ್ಸ್ ಮಾರಾಟ ಮಳಿಗೆ ತೆರೆಯಲು ಯೋಜನೆ ರೂಪಿಸಲಾಗಿದೆ.
ಕನ್ನಡಪ್ರಭ ವಾರ್ತೆ, ಸಾಗರ ಗ್ರಾಮೀಣ ಭಾಗದ ಅಡಕೆ ಬೆಳೆಗಾರರಲ್ಲಿ ಆರ್ಥಿಕ ಚೈತನ್ಯ ತುಂಬಲು ಆಫ್‌ಕೋಸ್‌ ಹೊಸ ಹೊಸ ಕಾರ್ಯಕ್ರಮ ಹಾಕಿಕೊಂಡಿದೆ ಎಂದು ಸಂಸ್ಥೆ ಅಧ್ಯಕ್ಷ ಬಿ.ಎ. ಇಂದೂಧರ ಹೇಳಿದರು. ತಾಲೂಕಿನ ತುಮರಿಯಲ್ಲಿ ಅಡಕೆ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮರಿ ಭಾಗದಲ್ಲಿ ಸುಸಜ್ಜಿತ ಗೋದಾಮು ಮತ್ತು ಕಚೇರಿ ತೆರೆಯುವ ಮೂಲಕ ಈ ಭಾಗದ ಷೇರುದಾರ ಸದಸ್ಯರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು. ಸಾಗರದಲ್ಲಿ ಆಫ್‌ಕೋಸ್‌ ವತಿಯಿಂದ ತೆರೆಯಲಾಗಿರುವ ಕೃಷಿ ಮಳಿಗೆ ಉತ್ತಮ ವಹಿವಾಟು ನಡೆಸುತ್ತಿದ್ದು, ಪ್ರತಿದಿನ ₹2 ರಿಂದ ₹3 ಲಕ್ಷ ಕೃಷಿ ಪರಿಕರಗಳು ಮಾರಾಟವಾಗುತ್ತಿದೆ. ಇದು ರೈತರಿಗೆ ಹೆಚ್ಚು ಅನುಕೂಲ ಕಲ್ಪಿಸಿದೆ. ಸಾಗರ ಮಾದರಿಯಲ್ಲಿಯೇ ತುಮರಿ, ನಿಟ್ಟೂರು, ಹೊಸನಗರ ಇನ್ನಿತರೇ ಭಾಗದಲ್ಲಿ ಸಹ ಸುಸಜ್ಜಿತ ಕೃಷಿ ಮಳಿಗೆಯನ್ನು ತೆರೆಯುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. ಆಫ್‌ಕೋಸ್‌ ಷೇರುದಾರ ಸ್ನೇಹಿಯಾಗಿ ನಿರಂತರವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದು, ಈಗಾಗಲೇ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಸಾಗರದಲ್ಲಿ ಸುಸಜ್ಜಿತ ನೂತನ ಕಚೇರಿ ತೆರೆಯಲಾಗಿದೆ. ಮಲ್ಟಿಫ್ಲೆಕ್ಸ್ ಮಾರಾಟ ಮಳಿಗೆ ತೆರೆಯಲು ಯೋಜನೆ ರೂಪಿಸಲಾಗಿದೆ. ಷೇರುದಾರ ಸದಸ್ಯರು ಸಂಸ್ಥೆಯೊಂದಿಗೆ ವಹಿವಾಟು ನಡೆಸಿ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಹೇಳಿದರು. ನಿರ್ದೇಶಕರಾದ ರಮೇಶ್ ಎಂ.ಬಿ., ನಂದಕುಮಾರ್, ಓಂಕೇಶ್ ಹರತಾಳು, ಸುರೇಶ್ ಈಳಿ, ಭಾಸ್ಕರ ಖಂಡಿಕಾ, ಕಾರ್ಯದರ್ಶಿ ಲಂಬೋಧರ್ ಇನ್ನಿತರರು ಹಾಜರಿದ್ದರು. - - - -19ಕೆ.ಎಸ್.ಎ.ಜಿ.2:

Share this article