ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ದಿ ಕರ್ನಾಟಕ ಲಾ ಸೊಸೈಟಿಯ ವಸಂತರಾವ ಪೋತದಾರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಪ್ರಾರಂಭೋತ್ಸವದಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್, ಸಿವಿಲ್, ಮೆಕ್ಯಾನಿಕಲ್ ಹಾಗೂ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗಗಳಿಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ಸ್ವಾಗತ, ಪಾಲಕರ ಪ್ರಥಮ ಸಭೆ ಹಾಗೂ ವಿದ್ಯಾರ್ಥಿಗಳು ಕಾಲೇಜಿನ ವಾತಾವರಣಕ್ಕೆ ಹೊಂದಿಕೊಳ್ಳಲು ಮಾಡುವ ಸ್ಟುಡೆಂಟ್ ಇಂಡಕ್ಷನ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ಜರುಗಿತು.ಸಂಸ್ಥೆಯ ಪ್ರಾಚಾರ್ಯರಾದ ಎಸ್.ಎಸ್.ಮಾಳಾಜ, ಐ.ಕ್ಯೂ.ಎ.ಸಿ ವಿಭಾಗದ ಮುಖ್ಯಸ್ಥರು, ಎಲ್ಲ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ, ವಿದ್ಯಾರ್ಥಿ ಪಾಲಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸಿ ಉದ್ಘಾಟನಾ ಸಮಾರಂಭ ಪ್ರಾರಂಭಿಸಲಾಯಿತು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಲಕ್ಷ್ಮೀ ಅಂಗಡಿಯವರು ಎಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಅಮೃತಾ ದೇವನಗಾವಿ-ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ವೇದಿಕೆ ಮೇಲಿದ್ದ ಗಣ್ಯರಿಗೆ ಹೂಗುಚ್ಛ ನೀಡಿದರು. ರೂಪಾಲಿ ರೇಡೇಕರ- ಐ.ಕ್ಯೂ.ಎ.ಸಿ ಹಾಗೂ ಅಪ್ಲಾಯಿಡ್ ಸೈನ್ಸ್ ಆ್ಯಂಡ್ ಹ್ಯೂಮ್ಯಾನಿಟಿಯವರು ಕಾಲೇಜಿನ ವಿವಿಧ ಸಹಪಠ್ಯ ಚಟುವಟಿಕೆಗಳ ಕುರಿತು ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ವಿವಿಧ ಶಿಷ್ಯವೇತನ ಸೌಲಭ್ಯಗಳು ಹಾಗೂ ನೈತಿಕ ಮೌಲ್ಯಗಳ ಕುರಿತು ವಿವರಿಸಿದರು.
ಕರ್ನಾಟಕ ಲಾ ಸೊಸೈಟಿಯ ಶ್ರೀ ವಸಂತರಾವ ಪೋತದಾರ ಪಾಲಿಟೆಕ್ನಿಕ್ ಬೆಳಗಾವಿಯ ಗವರ್ನಿಂಗ್ ಕೌನ್ಸಿಲಿಂಗ್ನ ಅಧ್ಯಕ್ಷ ಯು.ಎನ್.ಕಾಲಕುಂದ್ರಿಕರರವರು ಹಾಗೂ ಸರ್ವಸದಸ್ಯರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಆರ್ಕಿಟೆಕ್ಚರ್ ಅಸಿಸ್ಟೆಂಟಶಿಪ್ ಮುಖ್ಯಸ್ಥರಾದ ಚಿನ್ಮಯ ಭಂಡಾರಿ ವಂದಿಸಿದರು. ಉಪನ್ಯಾಸಕರಾದ ಸ್ವಾತಿ ಜೋಶಿ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿಗಳು ಶಿಕ್ಷಣದ ಮೂಲಭೂತ ಅಂಶಗಳನ್ನು ಬಲಪಡಿಸಿಕೊಳ್ಳಬೇಕು. 3 ವರ್ಷಗಳ ಶಿಕ್ಷಣದಲ್ಲಿ ತಮ್ಮ ಕಠಿಣ ಪರಿಶ್ರಮದಿಂದ ಗುರಿಮುಟ್ಟಲು ಎಲ್ಲ ಪ್ರಾಧ್ಯಾಪಕರ ಮಾರ್ಗದರ್ಶನ ಪಡೆದು ಭವಿಷ್ಯದ ವೃತ್ತಿ ಬದುಕಿಗೆ ಕೌಶಲ್ಯ ಸೇರಿದಂತೆ ಪ್ರಾವಿಣ್ಯತೆ ಪಡೆದುಕೊಳ್ಳಬೇಕು.
-ಎಸ್.ಎಸ್.ಮಾಳಾಜ, ಪ್ರಾಚಾರ್ಯರು.