ಹೊಸಪೇಟೆ: ತುಂಗಭದ್ರಾ ಜಲಾಶಯದ ಒಳ ಹರಿವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈಗ ಜಲಾಶಯದಲ್ಲಿ 38.608 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ 19ನೇ ಗೇಟ್ಗೆ ಸ್ಟಾಪ್ಲಾಗ್ ಅಳವಡಿಕೆ ಮಾಡಿರುವುದನ್ನು ತೆರವುಗೊಳಿಸಿ ಹೊಸ ಕ್ರಸ್ಟ್ಗೇಟ್ ನಿರ್ಮಾಣ ಮಾಡುವುದಕ್ಕೂ ಈಗ ಒಳಹರಿವು ಅಡ್ಡಿಯಾಗಿದೆ. ಗದಗದಿಂದ ಕ್ರಸ್ಟ್ಗೇಟ್ ತರಲಾಗುತ್ತಿದ್ದು, ಅದನ್ನು ಅಳವಡಿಸುವ ಕಾರ್ಯಕ್ಕೆ ಈಗ ಒಳಹರಿವು ಅಡ್ಡಿಯಾಗಿದೆ. ಹಾಗಾಗಿ ಅಕ್ಟೋಬರ್ ಇಲ್ಲವೇ ನವೆಂಬರ್ನಲ್ಲಿ ಕ್ರಸ್ಟ್ಗೇಟ್ ನಿರ್ಮಾಣ ಮಾಡಲು ತುಂಗಭದ್ರಾ ಮಂಡಳಿ ನಿರ್ಧರಿಸಿದೆ.
ಗುಜರಾತ ಮೂಲದ ಹಾರ್ಡ್ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿ 19ನೇ ಗೇಟ್ನ ಕ್ರಸ್ಟ್ಗೇಟ್ ನಿರ್ಮಾಣ ಮಾಡಿದೆ. ಈಗಾಗಲೇ ಗೇಟ್ ತುಂಗಭದ್ರಾ ಜಲಾಶಯಕ್ಕೆ ತರಲಾಗುತ್ತಿದೆ. ಜೂ. 20ರ ತಡರಾತ್ರಿ ಈ ಗೇಟ್ ಜಲಾಶಯದ ಆವರಣಕ್ಕೆ ಬಂದು ತಲುಪಿದೆ. ಜಲಾಶಯದ ಒಳಹರಿವು ಶುಕ್ರವಾರ 51,261 ಕ್ಯುಸೆಕ್ ತಲುಪಿದೆ. ತುಂಗಭದ್ರಾ ಮಂಡಳಿ ಅಧಿಕಾರಿಗಳು ಪರಿಣತ ತಜ್ಞ ಕನ್ನಯ್ಯ ನಾಯ್ಡು ಅಭಿಪ್ರಾಯ ತೆಗೆದುಕೊಂಡಾಗ ಭಾರೀ ಪ್ರಮಾಣದಲ್ಲಿ ಒಳಹರಿವು ಇರುವ ಹಿನ್ನೆಲೆಯಲ್ಲಿ ಈಗಲೇ ಗೇಟ್ ಅಳವಡಿಸುವುದು ಬೇಡ, ಸ್ಟಾಪ್ ಲಾಗ್ ಗಟ್ಟಿಯಾಗಿದೆ. ಹಾಗಾಗಿ ಒಳ ಹರಿವು ತಗ್ಗಿದ ಬಳಿಕವಷ್ಟೇ ಗೇಟ್ ನಿರ್ಮಾಣ ಕಾರ್ಯ ನಡೆಯಲಿ ಎಂದು ಸಲಹೆ ನೀಡಿದ್ದಾರೆ. ಈಗ ತುಂಗಭದ್ರಾ ಮಂಡಳಿ ಅಧಿಕಾರಿಗಳು ಕೂಡ ಚರ್ಚಿಸಿ ಒಳಹರಿವು ತಗ್ಗಿದ ಬಳಿಕ, ಅಕ್ಟೋಬರ್ ಇಲ್ಲವೇ ನವೆಂಬರ್ನಲ್ಲಿ 19ನೇ ಗೇಟ್ಗೆ ಕ್ರಸ್ಟ್ಗೇಟ್ ಅಳವಡಿಸಲು ನಿರ್ಧರಿಸಿದ್ದಾರೆ.ಹಾರ್ಡ್ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿಗೆ ಉಳಿದ 32 ಕ್ರಸ್ಟ್ಗೇಟ್ ಬದಲಿಸಿ, ಹೊಸ ಗೇಟ್ ನಿರ್ಮಾಣದ ಗುತ್ತಿಗೆಯನ್ನೂ ನೀಡಲಾಗಿದೆ. ಈಗ 19ನೇ ಕ್ರಸ್ಟ್ಗೇಟ್ ಸಿದ್ಧಗೊಂಡರೂ ಅಳವಡಿಸಲು ಒಳಹರಿವು ಅಡ್ಡಿಯಾಗಿದೆ ಎಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ.